ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿ-ಯುವಜನರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಗರಣದ ಕುರಿತು ತನಿಖೆಗೆ ಒತ್ತಾಯಿಸಿದ್ಅರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೀಳೂರು, “2024ರ ನೀಟ್ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು ಅತಿ ಹೆಚ್ಚು 720ಕ್ಕೆ 720 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ನೀಟ್ ಪರೀಕ್ಷೆಯ ಇತಿಹಾಸದಲ್ಲೇ ಕಾಣದಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಈ ಬಾರಿ 720 ಅಂಕಗಳನ್ನು ಪಡೆದಿದ್ದು, ಅನುಮಾನವೆಂಬಂತೆ ಆ ವಿದ್ಯಾರ್ಥಿಗಳಲ್ಲಿ ಹಲವರು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಇದು ಅಕ್ರಮಗಳ ಕಡೆಗೆ ಬೆರಳು ಮಾಡಿ ತೋರಿಸುತ್ತದೆ” ಎಂದರು.
“ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿರುವ ಕಾರಣ ಗಳಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿಯಲ್ಲಿ 718, 719 ಅಂಕಗಳನ್ನು ಹಲವು ವಿದ್ಯಾರ್ಥಿಗಳ ಗಳಿಸಿದ್ದಾರೆ. ಇಲ್ಲಿ ಈ ರೀತಿಯ ಫಲಿತಾಂಶಕ್ಕೆ, ಹಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದಾಗಿ ಹಾಗೂ ಫಲಿತಾಂಶಗಳು ಆಗ ಕಾರಣದಿಂದಾಗಿ ಬಂದಿರುವುದಾಗಿ ಎನ್ ಟಿ ಎ ಸಮಜಾಯಿಸಿ ನೀಡಿದೆ. ಆದರೆ ಕೃಪಾಂಕಗಳ ಬಗ್ಗೆ ಈ ಹಿಂದೆ ಎಲ್ಲಿಯೂ ಎನ್ ಟಿ ಎ ಒಂದು ನಿರ್ದಿಷ್ಟ ಮಾದರಿಯನ್ನು ನೀಡಿಲ್ಲ. ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಕ್ಕಾಗಿ ಕೃಪಾಂಕಾಗಳನ್ನು ನೀಡಿರುವ ಅಸಂಬದ್ಧ ಕಾರಣವನ್ನು ಕೊಟ್ಟಿರುವ ಎನ್ ಟಿ ಎಗೆ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ ಇರುವ ನಿರ್ಲಕ್ಷ ಮತ್ತು ನಿಷ್ಕಾಳಜಿಯನ್ನು ಇದು ಎತ್ತಿ ತೋರಿಸುತ್ತಿದೆ. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕೇವಲ ಒಂದು ಹಗರಣವಲ್ಲ, ಅದು ವಿದ್ಯಾರ್ಥಿ ಸಮೂಹಕ್ಕೆ ಎಸಗಿರುವ ಘೋರ ಅಪರಾಧವೇ ಆಗಿದೆ! ಇನ್ನೊಂದೆಡೆ, ಬಿಹಾರ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೇಳಿ ಬಂದಿ ರುವುದು ಆತಂಕಕಾರಿ ವಿಷಯವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರವು ಈ ಹಿಂದೆ ರಾಜ್ಯವಾರು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಗೆ ನಡೆಯುತ್ತಿದ್ದ ಜಂಟಿ ಸಿಇಟಿ ಗಳಲ್ಲಿ ನಡೆಯುತ್ತಿದ್ದ ಬೃಹತ್ ಪ್ರಮಾಣದ ಭ್ರಷ್ಟಾಚಾರವನ್ನು ನಿಲ್ಲಿಸಲು ಹಾಗೂ ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆ ಮಾಡುವ ಕಾರಣಗಳನ್ನೊಡ್ಡಿ ನೀಟ್ ಪರೀಕ್ಷೆಯನ್ನು ಜಾರಿಗೊಳಿಸಿದರು. ಸರ್ಕಾರವು ಇಡೀ ದೇಶಕ್ಕೆ ಒಂದು ಪರೀಕ್ಷೆ ಎಂದು ನೀಟ್ ಪರೀಕ್ಷೆಯನ್ನು ತಂದಿತು. ಆದರೆ ಇಂದು ಏನಾಗಿದೆ? ನೀಟ್ ಪರೀಕ್ಷೆ ಜಾರಿಯಾದಾಗಲೇ ಎಐಡಿಎಸ್ಓ ಪ್ರತಿಭಟಿಸಿತ್ತು. ನೀಟ್ ಪರೀಕ್ಷೆಯ ಉದ್ದೇಶದ ಕುರಿತು ಹಲವಾರು ಆತಂಕಗಳನ್ನು ವ್ಯಕ್ತಪಡಿಸಿತ್ತು. ಅದು ಇಂದು ಸಾಬೀತಾಗಿದೆ. ಫಲಿತಾಂಶ ಬಿಡುಗಡೆಯಾದ ದಿನವೇ ರಾಜಸ್ಥಾನದ ಕೋಟಾದಲ್ಲಿ ಒಬ್ಬ ವಿದ್ಯಾರ್ಥಿ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರವಾಗಿದೆ” ಎಂದು ಹೇಳಿದರು.
“ರೈತಕಾರ್ಮಿಕರು ಹಾಗೂ ದುಡಿಯುವ ವರ್ಗದ ಮಕ್ಕಳಿಗೆ ಕೈಗೆಟುಕದ ವೈದ್ಯಕೀಯ ಶಿಕ್ಷಣ ಹಾಗೂ ಪ್ರವೇಶ ಪರೀಕ್ಷೆಗಳು ಈಗ ಭ್ರಷ್ಟಾಚಾರ ಹಾಗೂ ನಿರ್ಲಕ್ಷಕ್ಕೆ ತುತ್ತಾಗಿದೆ! ಬಡವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರದ ಈ ಪ್ರವೇಶ ಪರೀಕ್ಷೆಗಳ ದಂಧೆಯನ್ನು ಹಾಗೂ ಈ ಬಾರಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಮಟ್ಟ ಹಾಕಲು ದೇಶದಾದ್ಯಂತ ಬೃಹತ್ ವಿದ್ಯಾರ್ಥಿಗಳ ಹೋರಾಟ ನಡೆಸಲು ವಿದ್ಯಾರ್ಥಿಗಳು ಸಜ್ಜಾಗಬೇಕು” ಎಂದು ಕರೆ ನೀಡಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, “ಕೂಡಲೇ ನ್ಯಾಯಾಂಗ ತನಿಖೆ ನಡೆದು ನೀಟ್ ಪರೀಕ್ಷಾ ಫಲಿತಾಂಶದ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್.. ಉಪಾಧ್ಯಕ್ಷ ಕಾವ್ಯ , ಯೋಗೇಶ್, ನಂದೀಶ್, ಗೌತಮ್,ಆಕಾಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತುಮಕೂರಿನಲ್ಲಿಯೂ ಎಐಡಿಎಸ್ಒ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ.ಬಿ, ಜಿಲ್ಲಾ ಕಚೇರಿ ಕಾರ್ಯದರ್ಶಿಯಾದ ಅಕ್ಷರ ಹಾಗೂ ಸೆಕ್ರೆಟರಿ ಸದಸ್ಯರಾದ ಭರತ್, ಮಿಥುನ್, ಪಲ್ಲವಿ, ನಂದೀಶ್ ಮತ್ತು ಸುಮಂತ್ ಉಪಸ್ಥಿತರಿದ್ದರು.