ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆ ಬಿಜೆಪಿಯಲ್ಲಿ ರೆಬೆಲ್ ಟೀಂನ ಬಂಡಾಯ ಶಮನಗೊಳಿಸುವಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಜಿಲ್ಲಾ ಬಿಜೆಪಿಗರು ಸಮ್ಮತಿ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಹೊರವಲಯದ ರೆಸಾರ್ಟ್ವೊಂದರಲ್ಲಿ ಗಂಟೆಗಟ್ಟಲೇ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಬಣದ ನಡುವೆ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರ್ಧಾರ ಮಾಡಿರುವ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಅಪೂರ್ವ ರೆಸಾರ್ಟ್ ಗೆ ಆಗಮಿಸಿ ಸಂಸದ ಸಿದ್ದೇಶ್ವರರ ಬಣ ಹೊರಗಿಟ್ಟು ಸಭೆ ನಡೆಸಿದರು. ಎಲ್ಲಾ ಮುಖಂಡರೊಂದಿಗೆ ಮುಕ್ತವಾಗಿ ಮಾತನಾಡಿದ ಸಭೆಯಲ್ಲಿ ರವೀಂದ್ರನಾಥ್, ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ, ಡಾ. ರವಿಕುಮಾರ್, ಸುರೇಶ್, ಬಸವರಾಜ್ ನಾಯ್ಕ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಮಾತ್ರವಲ್ಲ, ಯಡಿಯೂರಪ್ಪ ಅವರು ಹೈಕಮಾಂಡ್ ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದೆ. ಎಲ್ಲರೂ ಗೆಲುವಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.
ಸಭೆಯ ಪ್ರಾರಂಭದಲ್ಲಿ ಅಭ್ಯರ್ಥಿ ಬದಲಾವಣೆ ಬಗ್ಗೆ ಮಾತನಾಡಿದ ರೇಣುಕಾಚಾರ್ಯ ಬದಲಾವಣೆಗೆ ಪಟ್ಟು ಹಿಡಿದರು. ರವೀಂದ್ರನಾಥ್ ಸೇರಿದಂತೆ ಹಲವರು ಇದಕ್ಕೆ ದನಿಗೂಡಿಸಿದರು. ಆ ಬಳಿಕ ಯಡಿಯೂರಪ್ಪ ಮಾತನಾಡಿ ದಾವಣಗೆರೆ ಮಧ್ಯಕರ್ನಾಟಕದ ಹೆಬ್ಬಾಗಿಲು. ದಾವಣಗೆರೆ ಜಿಲ್ಲೆಯಾದಾಗಿನಿಂದ ಬಿಜೆಪಿ ಸೋತಿಲ್ಲ. ಈ ಬಾರಿಯೂ ಕೂಡ ಸೋಲಬಾರದು. ಎಲ್ಲರೂ ಒಟ್ಟಾಗಿ ಗಾಯತ್ರಿ ಸಿದ್ದೇಶ್ವರ ಗೆಲುವಿಗೆ ಪ್ರಯತ್ನಿಸಬೇಕು. ಬಿಜೆಪಿ ಭದ್ರಕೋಟೆ ಎಂಬುದು ನಿರೂಪಿಸಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲು ನಾವು ಕೈಜೋಡಿಸಬೇಕು ಎಂದು ಹೇಳಿದರು.
ಬಂಡಾಯ ಶಮನಕ್ಕೆ ಸ್ವತಃ ತಾನೇ ಆಗಮಿಸಿ ಮಾತುಕತೆ ನಡೆಸುತ್ತಿರುವ ಯಡಿಯೂರಪ್ಪನವರು ಜೋರಾಗಿಯೇ ಸದ್ದು ಮಾಡಿದ್ದ ದಾವಣಗೆರೆ ಬಿಜೆಪಿಯ ಭಿನ್ನಮತದ ಬಿಕ್ಕಟ್ಟು ಶಮನಗೊಳಿಸುವಲ್ಲಿ ಗಂಟೆಗಟ್ಟಲೇ ನಡೆಸಿದ ಸಭೆಯು ಯಶಸ್ವಿಯಾಗಿದೆ. ಸಮರವೋ, ಸಂಧಾನವೋ ಎಂಬ ಕುತೂಹಲ ಮೂಡಿತ್ತಾದರೂ ಅಂತಿಮವಾಗಿ ಶಾಂತಿಯುತವಾಗಿ ಬಗೆಹರಿದಿದೆ.
ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಜಿ. ಕರುಣಾಕರ ರೆಡ್ಡಿ, ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ. ರವಿಕುಮಾರ್, ಸುರೇಶ್, ಎಲ್. ಎನ್. ಕಲ್ಲಪ್ಪ ಎಲ್ಲರೊಂದಿಗೆ ಮಾತನಾಡಿದ ಯಡಿಯೂರಪ್ಪ ಸಮಸ್ಯಗೆ ಇತಿಶ್ರೀ ಹಾಡಿದ್ದಾರೆ.
ಮಾತುಕತೆ ಫಲಪ್ರದವಾಗಿದ್ದು, ಬಿಜೆಪಿಯ ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿದ್ದು , ಯಡಿಯೂರಪ್ಪನವರೇ ಆಗಮಿಸಿ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸಂತಸ ತಂದಿದೆ. ಭಿನ್ನಮತದಿಂದ ಗೊಂದಲದಲ್ಲಿದ್ದವರು ಈಗ ಖುಷಿಯಾಗಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿಸಲು ನಾವು ಪಣ ತೊಟ್ಟಿದ್ದೇವೆ. ಆದರೆ, ದಾವಣಗೆರೆ ಬಿಜೆಪಿಯನ್ನು ಜಿ.ಎಂ.ಸಿದ್ದೇಶ್ವರ ಕುಟುಂಬದ ಹಿಡಿತದಿಂದ ಬಿಡಿಸಿಯೇ ಸಿದ್ಧ ಎಂದು ಹೇಳುತ್ತಿದ್ದ ಬಂಡಾಯ ನಾಯಕರು, ನಾವು ಯಾರ ವಿರುದ್ಧವೂ ಭಿನ್ನ ರಾಜಕೀಯ ಮಾಡಿಲ್ಲ. ಮತದಾರರ, ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳುತ್ತಲೇ ಇದ್ದ ಎಸ್.ಎ. ರವೀಂದ್ರನಾಥ್ ನೇತೃತ್ವದ ತಂಡವು ಮತ್ತೇ ಮೋದಿ ಪ್ರಧಾನಿ ಆಗಬೇಕೆಂಬುದು ನಮ್ಮೆಲ್ಲರ ಆಶಯ. ಇದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎರಡು ಗಂಟೆಗಳ ಕಾಲ ಎಲ್ಲರ ಭಾವನೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇವೆ. ಈಗಾಗಲೇ ಲೋಕಸಭಾ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದ್ದು. ಅವರ ಗೆಲುವಿಗೆ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು. ರವೀಂದ್ರನಾಥ್ ಅವರಿಗೆ ಚುನಾವಣೆ ನೇತೃತ್ವವನ್ನು ವಹಿಸಲಾಗಿದೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಲಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಒಡಕಿನ ಮಾತಿಗೆ ಅವಕಾಶ ಇಲ್ಲ. ಎಲ್ಲವೂ ಒಳ್ಳೆಯದಾಗಿದೆ. ಯಾವುದೇ ಷರತ್ತು ಇಲ್ಲದೆ, ಸರ್ವಾನುಮತದಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ರವೀಂದ್ರನಾಥ್ ಮಾತನಾಡಿ, ಸಣ್ಣ ಪುಟ್ಟ ದೋಷಗಳಿದ್ದವು, ಮಾತನಾಡಿದನಂತರ ಅವೆಲ್ಲವೂ ಸರಿ ಆಗಿದೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಮಾತನಾಡದೆ ಇರುವುದರಿಂದ ಸಮಸ್ಯೆ ಆಗಿದ್ದವು. ಈಗ ಎಲ್ಲರೂ ಮಾತನಾಡಿದ್ದೇವೆ. ಹಾಗಾಗಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದರು.