ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಆಗ್ರಹಿಸಿದೆ.
ದಾವಣಗೆರೆಯಲ್ಲಿ ಪ್ರತಿಭಟನೆನ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಸಾಮಾಜಿಕ, ಶೈಕಣಿಕ ಮತ್ತು ಜಾತಿ ಸಮೀಕ್ಷೆ ನಡೆಸಿರುವ ಕಾಂತರಾಜು ಜಾತಿ ಗಣತಿ ವರದಿಯನ್ನು ಜಾರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, “ದಾವಣಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿಡಬೇಕು. ಜಿಲ್ಲೆಯಾದ್ಯಂತ ಹಾಗೂ ಬೇತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ ಚಿತ್ರಾನಹಳ್ಳಿ, ಬಿ ಕಲನಹಳ್ಳಿ ಮತ್ತು ಯರಗುಂಟಿ ಗ್ರಾಮದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ಒದಗಿಸಿ ಹಕ್ಕು ಪತ್ರ ನೀಡಬೇಕು” ಎಂದು ಒತ್ತಾಯಿಸಿದರು.
“ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದ ದಲಿತರ ವಸತಿ ಪ್ರದೇಶದಲ್ಲಿ ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಿ ಭವನ ನಿರ್ಮಾಣ ಮಾಡಿಕೊಡಬೇಕು. ಗೋಣಿವಾಡ ಗ್ರಾಮದ ಸರ್ವೆ ನಂ. 19/1ರಲ್ಲಿ ದಲಿತರು ಖರೀದಿಸಿರುವ ಜಮೀನನ್ನು ಸ್ಮಶಾನಕ್ಕೆ ಮಂಜೂರು ಮಾಡಮಾಡಿದ್ದು, ಅದನ್ನು ವಜಾಗೊಳಿಸಿ ಸಾಗುವಳಿಗೆ ಅವಕಾಶ ಮಾಡಿಕೊಡಬೇಕು” ಎಂದರು.
“ಕಿತ್ತೂರು ಗ್ರಾಮದ ದಲಿತರು ಉಳಿಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ನೀಡಿ ಅವರವರ ಹೆಸರಿಗೆ ಪಹಣಿ ಮಾಡಿಕೊಡಬೇಕು. ಸಂಘಟನೆಯ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ಮೊರಾರ್ಜಿ ಶಾಲೆ, ಕಿತ್ತೂರು ರಾಣಿ, ನವೋದಯ ಶಾಲೆ ಹಾಗೂ ಸರ್ಕಾರಿ ವಸತಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ ಹಾಗೂ ಇನ್ನಿತರೆ ಸೌಲಭ್ಯವನ್ನು ಹೆಚ್ಚಿನ ಫಲಾನುಭವಿಗಳೆಗೆ ಆಯ್ಕೆ ಮಾಡಿ ದಲಿತರನ್ನು ಸ್ವಾವಲಂಬಿಗಳಾಗಿ ಮಾಡಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕೆ.ವಿಜಯಲಕ್ಷ್ಮಿ, ಪ್ರದೀಪ್, ಮಹಾಂತೇಶ್ ಹಾಲುವರ್ತಿ, ಅಣಜಿ ಹನುಮಂತಪ್ಪ, ಆರ್.ಮಂಜುನಾಥ್, ಹನುಮಂತಪ್ಪ, ಖಾಲೀದ್ ಅಲಿ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.