ಭಾರತದಲ್ಲಿ ಪ್ರಜಾಪ್ರಭುತ್ವ ಎರವಲು ತಂದ ವಸ್ತುವಾಗಿದೆ. ಸಾಂವಿಧಾನಿಕ ನೈತಿಕತೆ ಎನ್ನುವುದು ಈ ದೇಶದಲ್ಲಿ ಸಾಮಾನ್ಯವಾಗಿಲ್ಲ. ಹಾಗಾಗಿ ಯಾರು ಯಾವ ಹಕ್ಕುಗಳನ್ನು ಹೊಂದಬೇಕು ಎನ್ನುವುದನ್ನು ಅಂಬೇಡ್ಕರ್ ಅವರು ಸಂವಿಧಾನದ ರೂಪದಲ್ಲಿ ನೀಡಿದ್ದಾರೆ ಎಂದು ಚಿಂತಕ ಶಿವಸುಂದರ್ ಅಂಬೇಡ್ಕರ್ ಮಾತುಗಳನ್ನು ನೆನಪಿಸಿದರು.
ದಾವಣಗೆರೆಯ ದಿನಮಾನ ಪ್ರಕಾಶನ, ಲಡಾಯಿ ಪ್ರಕಾಶನ, ಮೇ ಸಾಹಿತ್ಯ ಬಳಗ, ಶ್ರಮಿಕಾ ಪ್ರಕಾಶನ, ಜನಸೇವಾ ಪೌಂಡೇಶನ್ನಿಂದ ನಿವೃತ್ತ ಪೊಲೀಸ್ ನೌಕರರ ಭವನದಲ್ಲಿ ಫೆಬ್ರವರಿ 9ರಂದು ಆಯೋಜಿಸಿದ್ದ ಬಿ ಶ್ರೀನಿವಾಸರ ʼಸಂಡೂರಿನ ಕಗ್ಗತ್ತಲೆಯ ಕಥನಗಳುʼ ʼಸಂವಿಧಾನದ ಮೂಲ ಸ್ವರೂಪ ಮತ್ತು ಕೇಶವಾನಂದ ಭಾರತಿʼ ಪ್ರಕರಣ ಸೇರಿದಂತೆ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
“ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಅವರು, ʼಬೇರೆ ದೇಶಗಳಲ್ಲಿ ಪ್ರಜಾಪ್ರಭುತ್ವ ಎನ್ನುವುದು ಸಹಜವಾಗಿದೆ. ಆದರೆ ಭಾರತದಲ್ಲಿ ಅದು ಎರವಲು ತಂದ ವಸ್ತುವಾಗಿದೆ. ಸಾಂವಿಧಾನಿಕ ನೈತಿಕತೆ ಎನ್ನುವುದು ಈ ದೇಶದಲ್ಲಿ ಸಾಮಾನ್ಯವಾಗಿಲ್ಲ. ಹಾಗಾಗಿ ಯಾರು ಯಾವ ಹಕ್ಕುಗಳನ್ನು ಹೊಂದಬೇಕು ಎನ್ನುವುದನ್ನು ಸಂವಿಧಾನದ ರೂಪದಲ್ಲಿ ನೀಡಬೇಕಿದೆʼ ಎಂದು ಪ್ರತಿಪಾದಿಸಿದ್ದರು. ವಿಚಾರ, ಉಪಾಸನೆ, ಧರ್ಮ ಇವುಗಳನ್ನು ಆರಾಧಿಸುವ ಸ್ವಾತಂತ್ರ್ಯವೂ ಮೂಲಭೂತ ಹಕ್ಕಾಗಿದೆ. ಸಾಮಾಜಿಕ, ಆರ್ಥಿಕ ಹಕ್ಕುಗಳು ನಿರ್ದೇಶಕ ತತ್ವಗಳಲ್ಲಿ ಇರುವುದರಿಂದ ಇವು ಸಂಸತ್ತಿಗೂ ಮತ್ತು ನ್ಯಾಯಾಂಗಕ್ಕೂ ನಡೆಯುತ್ತಿರುವ ಸಂಘರ್ಷದ ಸಾರಾಂಶ. ಅಂಬೇಡ್ಕರ್ ಹೇಳಿದಂತೆ ʼಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಮಧ್ಯೆ ಇರುವ ಅಂತರದ ದ್ವಂದ್ವʼ ನಮ್ಮಲ್ಲಿ ಶಾಶ್ವತವಾಗಿ ಉಳಿದುಕೊಂಡು ಮುಂದುವರಿಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಪ್ರತಿಪಾದಿಸಿದಂತೆ ʼಆರ್ಥಿಕ ಸ್ವಾತಂತ್ರ್ಯ ಇಲ್ಲದ ಕಡೆ, ಸಮಾನತೆ ಇಲ್ಲದ ಕಡೆ ನೀವು ಸ್ವಾತಂತ್ರ್ಯವನ್ನು ಕೊಟ್ಟರೆ, ಅದು ಭೂಮಾಲೀಕ ಜೀತದವರನ್ನು, ಮಾಲೀಕ ಕಾರ್ಮಿಕರನ್ನು ಶೋಷಿಸುವಂತಹ ಸ್ವಾತಂತ್ರ್ಯವಾಗುತ್ತದೆʼ ಎಂದು ತಿಳಿಸಿದ್ದರು. 1970ರ ತನಕ ನ್ಯಾಯಾಂಗದ ಪಾತ್ರ ಪ್ರತಿಯೊಂದು ಜನಪರ, ರೈತರ ಆಸ್ತಿ ವಿವಾದಗಳಿಗೂ ಕೂಡ ಪ್ರತಿಗಾಮಿಯಾಗಿ ವರ್ತಿಸಿತ್ತು. ಇದೇ ರೀತಿ ರಾಜಧನ ಪದ್ಧತಿಯ ಕಾನೂನು, ಬ್ಯಾಂಕ್ಗಳ ರಾಷ್ಟ್ರೀಕರಣದ ಕಾನೂನು ಸುಪ್ರೀಂ ಕೋರ್ಟ್ನಲ್ಲಿ ರದ್ದಾದಾಗ, ಅದಕ್ಕೆ ತಿದ್ದುಪಡಿ ತಂದು ಸಂಸತ್ತು ಬ್ಯಾಂಕ್ಗಳನ್ನು ರಾಷ್ಟ್ರೀಕೃತಗೊಳಿಸುತ್ತದೆ. ಈ ರೀತಿ ಹಲವು ಪ್ರಕರಣಗಳಲ್ಲಿ ಸಂಸತ್ತು, ಸುಪ್ರೀಂಕೋರ್ಟ್ನ ಮೇಲಾಟಗಳು 1965ರಿಂದ 1973ರವರೆಗೆ ಸಾಲು ಸಾಲಾಗಿ ಘಟಿಸಿವೆ. ಗೋರಕ್ನಾಥ್ ಪ್ರಕರಣದಲ್ಲಿ ನ್ಯಾಯಾಂಗದ ಏಳು ಜನರ ಪೀಠ ಕೆಲವು ವಿಷಯಗಳಲ್ಲಿ ಸಂಸತ್ತು ಕಾನೂನನ್ನು ಮಾಡಬಾರದು. ಅದಕ್ಕೆ ಆ ಪರಮಾಧಿಕಾರವಿಲ್ಲ ಎನ್ನುವ ತೀರ್ಪನ್ನು ನೀಡಿತು” ಎಂದು ವಿಶ್ಲೇಷಿಸಿದರು.

“ಆರ್ಟಿಕಲ್ 368 ಸಂಸತ್ತಿಗೆ ಕಾನೂನನ್ನು ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನವೇ ಕಲ್ಪಿಸಿದೆ. ಅಂಬೇಡ್ಕರ್ ಹೇಳುವ ಪ್ರಕಾರ ಮುಂದಿನ ಪೀಳಿಗೆಗೆ ಬೇಕಾಗುವ ಸಮಸ್ಯೆಗಳಿಗೆ ಹೊಸ ಕಾನೂನುಗಳನ್ನು ಮಾರ್ಪಾಡಿಸಬಹುದು. ಆದರೆ ಸಂಸತ್ತು ಯಾವ ರೀತಿ ಬೇಕಾದರೂ ಸಂವಿಧಾನವನ್ನು ತಿದ್ದುಪಡಿ ಮಾಡಬಹುದೇ, ಅದಕ್ಕೆ ಮಾನದಂಡ, ಮಿತಿ ಇದೆಯೇ? ಇದರ ಬಗ್ಗೆ ಸಂವಿಧಾನ ಏನು ಹೇಳುತ್ತದೆ ಸಂವಿಧಾನದ ಕರ್ತೃಗಳು ಏನು ಹೇಳುತ್ತಾರೆ? ಎನ್ನುವುದೇ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖವಾಗಿದೆ. ಅದರೆ ನ್ತಾಯಾಂಗ ವ್ಯವಸ್ಥೆ ಈಗಲೂ ಪ್ರಭುತ್ವದ ಸರ್ಕಾರದ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಸಾಂವಿಧಾನಿಕವಾಗಿ ಒಳ್ಳೆಯದಲ್ಲ. ಜಾತಿಯ ಸಭೆಗಳಲ್ಲಿ ಪಾಲ್ಗೊಳ್ಳುವ ನ್ಯಾಯಾಧೀಶರು ಸಾಂವಿಧಾನಿಕ ಪೀಠಗಳ ಮುಖ್ಯಸ್ಥರು ಎನ್ನುವುದನ್ನು ಮರೆತು ಧರ್ಮದ ತಳಹದಿಯಲ್ಲಿ ಸಂವಿಧಾನ ನಿರ್ಮಾಣವಾಗಿದೆ ಎನುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಸ್ಕೃತಿಯ ಪರಿವೇ ಇಲ್ಲದೆ ಅಭಿವೃದ್ಧಿಯನ್ನು ಕಟ್ಟುವುದು ವಿನಾಶಕಾರಿ ಪ್ರವೃತ್ತಿ: ಪುರುಷೋತ್ತಮ ಬಿಳಿಮಲೆ
“ಸಂಸತ್ತು ಸಂವಿಧಾನದ ಮೂಲ ಸ್ವರೂಪ, ಮೂಲ ರಚನೆ ಎಂದರೆ ಚುನಾವಣಾ ಪ್ರಜಾತಂತ್ರ, ಜಾತ್ಯತೀತತೆ, ಒಕ್ಕೂಟ ತತ್ವ ಹಾಗೂ ನ್ಯಾಯಾಂಗದ ಸ್ವತಂತ್ರ ಇವೆಲ್ಲವೂ ಸಂವಿಧಾನದ ಮೂಲ ಸ್ವರೂಪಗಳಾಗಿದ್ದು, ಇವುಗಳನ್ನು ಯಾವುದೇ ಸಂಸತ್ತು ತಿದ್ದುಪಡಿ ಮಾಡುವಂತಿಲ್ಲವೆಂದು ಕೇಶವಾನಂದ ಭಾರತಿ ಪ್ರಕರಣ ಐತಿಹಾಸಿಕವಾಗಿ ತೀರ್ಪು ದಾಖಲಿಸಿತು” ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಲೇಖಕ ಬಿ ಶ್ರೀನಿವಾಸ, ಸಾಹಿತಿಗಳಾದ ಲಕ್ಷ್ಮಣ ಹೂಗಾರ್, ಡಾ.ಜಾಜಿ ದೇವೇಂದ್ರಪ್ಪ, ಸತೀಶ್ ಕುಲಕರ್ಣಿ, ಅಬ್ದುಲ್ ಗಣಿ ತಾಹಿರ್, ಅನ್ವೇಷಣೆ ಪತ್ರಿಕೆಯ ಆರ್ ಜಿ ಹಳ್ಳಿ ನಾಗರಾಜ್, ಕುವೆಂಪು ವಿವಿಯ ಪ್ರಾಧ್ಯಾಪಕಿ ಹಸೀನಾ ಹೆಚ್ ಕೆ, ಹಿರಿಯ ಚಿಂತಕ ಬಿ ಎಂ ಹನುಮಂತಪ್ಪ, ಲಡಾಯಿ ಪ್ರಕಾಶನದ ಬಸವರಾಜು ಸೂಳಿಬಾವಿ, ದಿನಮಾನ ಪ್ರಕಾಶನದ ಎಚ್ ಎನ್ ಪ್ರಕಾಶ್, ಶ್ರಮಿಕಾ ಪ್ರಕಾಶನದ ಮಾಲತೇಶ್ ಅಂಗೂರು, ತಳಮಳ ಪ್ರಕಾಶನದ ಮಹೇಶ್ ಬಳ್ಳಾರಿ, ಜನ ಸೇವಾ ಫೌಂಡೇಶನ್ನ ಎ ಫಕ್ರುದ್ದೀನ್, ಶಿಕ್ಷಕ ನಾಗರಾಜ್, ಗುರುಸಿದ್ಧಸ್ವಾಮಿ, ಅಲ್ಲಾಭಕ್ಷಿ, ಪರಶುರಾಮ ಕಲಾಲ್, ಶಿವಕುಮಾರ್, ಲೋಹಿಯಾ ಚನ್ನಬಸವಣ್ಣ, ಟಿ ಆರ್ ವೆಂಕಟೇಶ್, ಪೀರ್ ಬಾಷಾ, ಹುಲಿಕಟ್ಟಿ ಚೆನ್ನಬಸಪ್ಪ, ಡಿ ಬಿ ಬಡಿಗೇರ ಹಾಗೂ ದಲಿತ, ಕಾರ್ಮಿಕ, ಸಾಹಿತ್ಯ ಸಂಘಟನೆಗಳ ಕಾರ್ಯಕರ್ತರು, ಸಾಹಿತ್ಯಾಸಕ್ತರು ಇದ್ದರು.
