“ರಾಜಕಾರಣದಲ್ಲಿ ಬೆಳೆಯುತ್ತಿರುವ ಸಮಾಜದ, ಶೋಷಿತ ವರ್ಗದವರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬೇಡಿ. ಅವರನ್ನೂ ಪ್ರೋತ್ಸಾಹಿಸಿ ಬೆಳೆಸಿ. ನಿಮ್ಮಲ್ಲಿರುವ ಭಯ, ಆತಂಕ ನಮ್ಮನ್ನು ತುಳಿಯುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಅವಕಾಶ ಕೊಡಬೇಡಿ. ಯಾರಾದರೂ ಶೋಷಿತರಿಗೆ ಸ್ಥಾನಮಾನ ಕೊಟ್ಟರೆ ಅವರಿಗೆ ಧನ್ಯವಾದ ತಿಳಿಸೋಣ. ಹಾಗೆಯೇ ಅವರ ಗುಲಾಮರಾಗಿ ಬದುಕುವುದು ಬೇಡ” ಎಂದು ದಾವಣಗೆರೆಯಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.
ದಾವಣಗೆರೆ ನಗರದ ರೋಟರಿಭವನದಲ್ಲಿ ಹಾಲುಮತ ಮಹಾಸಭಾ, ಜಿಲ್ಲಾ ಕುರುಬರ ಸಂಘ, ಕುರುಬ ಸಮಾಜದ ಎಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಮತ್ತು ಕುರುಬ (ಹಾಲುಮತ) ಜಯಂತಿ ಹಾಗೂ ಸಮಾಜದ ಗುರುಗಳು, ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರ ಸುಪುತ್ರ ಡಾ. ಉದಯ ಶಂಕರ್ ಒಡೆಯರ್ ಅವರಿಗೆ ಹಾಲುಮತ ಚೇತನ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು “1995ರಿಂದ 2000 ಮಧ್ಯದಲ್ಲಿ ದಾವಣಗೆರೆಯಲ್ಲಿ ಏನೇ ಆಗು ಹೋಗುಗಳಾದರೂ ಕುರುಬರ ನೇತೃತ್ವದಲ್ಲಿ ನಡೆಯುತಿತ್ತು ಎಂಬುದು ನನ್ನ ತಿಳುವಳಿಕೆ. ಅಷ್ಟೊಂದು ಪ್ರಬಲವಾಗಿದ್ದ ಸಮಾಜವು ಹಿಡಿತ ಕಳೆದುಕೊಂಡಿದೆ. ಬೇರೆಯವರು ಆಕ್ರಮಿಸಿಕೊಂಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದರೆ ಮನೆಗೆ ಬಿಟ್ಟುಕೊಳ್ಳುವುದಿಲ್ಲ ಎಂಬ ಭಯ ಇರಬಹುದು. ಆದ್ದರಿಂದಲೇ ದಾವಣಗೆರೆ ಲೋಕಸಭೆ ಚುನಾವಣೆ ಮುಗಿದ ಬಳಿಕವೂ ನನ್ನನ್ನು ವೇದಿಕೆಗೆ ಆಹ್ವಾನಿಸಲು ಹತ್ತು ಬಾರಿ ಯೋಚಿಸುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ ಜಿಲ್ಲೆಯ ಹಲವೆಡೆ ಸುರಿದ ಮಳೆ; ಸ್ಥಳೀಯರಲ್ಲಿ ಮಂದಹಾಸ
“ಸಮಾಜದ ಮೇಲೆ ಅಭಿಮಾನ, ಪ್ರೀತಿ ಇರುವುದಕ್ಕೋಸ್ಕರವೇ ರಾಜಕಾರಣಕ್ಕೆ ಬಂದೆ. ಐಎಎಸ್ ಕೋಚಿಂಗ್ ಸೆಂಟರ್ ಕಟ್ಟಿ ಎಲೆಮರೆಯ ಕಾಯಿಯಂತೆ ಇರಬಹುದಿತ್ತು. ಆದ್ರೆ ಕುರುಬ ಸಮಾಜದ ಮಕ್ಕಳು, ಬಡವರ ಮಕ್ಕಳು ಮತ್ತು ಶೋಷಿತರಿಗೆ ವಿಶೇಷ ಕಾಳಜಿ ವಹಿಸಿ ಕೋಚಿಂಗ್ ನೀಡಲಾಗುತ್ತಿದೆ. ಹೆಚ್ಚಿನ ಸೇವೆ ಮಾಡಲು ಇರುವುದು ರಾಜಕೀಯ ಒಂದೇ ಮಾರ್ಗ ಎಂದು ಅರಿತು ರಾಜಕಾರಣಕ್ಕೆ ಬಂದಿದ್ದೇನೆ. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರನ್ನೂ ಹೆಚ್ಚಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ನಿಮ್ಮ ಆರೈಕೆಯೂ ಬೇಕಾಗುತ್ತದೆ” ಎಂದು ಆಶಿಸಿದರು.
“ಮೈಸೂರಿಗೆ ಸಮಾಜದ ಮುಖಂಡರು ಆಹ್ವಾನಿಸಿದ್ದರು. ದಾವಣಗೆರೆಗೆ ಬಂದು ಜನರ ಪ್ರೀತಿ, ವಿಶ್ವಾಸ, ನಂಬಿಕೆಗೆ ಕಟ್ಟುಬಿದ್ದು ಸ್ಪರ್ಧೆ ಮಾಡಿ ಹಲವು ಪಾಠ ಕಲಿತೆ. ದಾವಣಗೆರೆಗೆ ಬಂದರೆ ಒಳ್ಳೆಯ ರಾಜಕಾರಣ ಮಾಡಬಹುದು ಎಂದುಕೊಂಡು ಬಂದೆ. ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು ದಾವಣಗೆರೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ಇದ್ದು, ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಮಾರಕ ಎಂಬುದನ್ನು ಓದಿ ತಿಳಿದುಕೊಂಡಿದ್ದ ನಮಗೆ ಅರಿವಾಯಿತು” ಎಂದು ನೆನಪಿಸಿಕೊಂಡರು.
“ಮೈಸೂರಿನಲ್ಲಿ ಸಿದ್ದರಾಮಯ್ಯರ ಪರ ಕಾಂಗ್ರೆಸ್ ದೊಡ್ಡ ಸಭೆ ಆಯೋಜಿಸಿತ್ತು. ಆ ಕ್ಷಣ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿದ್ದರೂ ಸ್ವಾಭಿಮಾನ ಬಿಟ್ಟು ಬೆಂಬಲಕ್ಕೆ ಹೋಗಿದ್ದೆ. ‘ಬೆಳೆಯುವವರನ್ನು ತುಳಿಯುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ’ ಎಂಬುದು ಎಲ್ಲರಿಗೂ ಗೊತ್ತು. ಕೈಕಟ್ಟಿ ನಿಂತಿದ್ದೆ. ಸೇವಾದಳದಲ್ಲಿದ್ದ ಹಾಲಪ್ಪನವರು ಗುರುತಿಸಿ ವೇದಿಕೆ ಮೇಲೆ ಕೂರಿಸಿದರು. ಯಾವಾಗ ನಮ್ಮ ಜೀವನದ ಗುರಿ ಗಟ್ಟಿ ಇರುತ್ತದೆಯೋ, ಸ್ವಾಭಿಮಾನಿಯಾಗಿ, ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಪ್ರಬಲರಾಗಿದ್ದರೆ ಯಾರಿಗೂ ಹೆದರುವ ಪ್ರಶ್ನೆ ಇಲ್ಲ” ಎಂದು ಸ್ವಾಭಿಮಾನದ ಮಾತುಗಳನ್ನಾಡಿದರು.

“ಕುರುಬಜಯಂತಿ ಮಹತ್ವದ್ದು. ಇತಿಹಾಸ, ಸಂಸ್ಕೃತಿ ಅರಿವಾದಾಗ ನಮ್ಮಲ್ಲಿ ಬಾಂಧವ್ಯ, ಆತ್ಮೀಯತೆ, ಒಗ್ಗಟ್ಟು ಬೆಳೆಯುತ್ತದೆ. ಆಗಾಗ್ಗೆ ಸಭೆ ಸೇರಿ ವಿಚಾರ ವಿನಿಮಯ, ಚಿಂತನ -ಮಂಥನ ನೆಡೆಸೋಣ. ನಾವು ತಪ್ಪು ಮಾಡಿದ್ದರೆ ತಿಳಿಸಿ, ಸರಿಪಡಿಸಿಕೊಳ್ಳುತ್ತೇವೆ. ಎಲ್ಲರನ್ನೂ ಬೆಳೆಸೋಣ. ಒಳ್ಳೆಯ ವಿಚಾರ, ಪ್ರಾಮಾಣಿಕತೆ, ಉದ್ದೇಶ ಇದ್ದರೆ ಸಮಾರಂಭಕ್ಕೆ ಜನರು ಕರೆಯದಿದ್ದರೂ ಬಂದೇ ಬರುತ್ತಾರೆ. ಆಗ ದೊಡ್ಡ ಶಕ್ತಿಯಾಗಿ ಬೆಳೆದೇ ಬೆಳೆಯುತ್ತೇವೆ. ಇದರ ಅನಿವಾರ್ಯತೆಯೂ ಇದೆ. ನಮ್ಮ ಭಯ, ಸ್ವಹಿತಾಸಕ್ತಿ ಮರೆತು ಸಂಘಟಿತರಾಗೋಣ. ಪ್ರತಿಭೆಗಳಿಗೆ ವೇದಿಕೆಗಳನ್ನು ಸೃಷ್ಟಿಸಿ, ಕಲ್ಪಿಸೋಣ” ಎಂದು ಪ್ರತಿಪಾದಿಸಿದರು.
ಹೊಸದುರ್ಗ ಶ್ರೀ ಕನಕ ಗುರುಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ. ಉದಯ ಶಂಕರ್ ಒಡೆಯರ್ ಅವರಿಗೆ ಹಾಲುಮತ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕನಕ ಪಟ್ಟಣ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್. ಜಿ. ಸಂಗಪ್ಪ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ಧಪ್ಪ, ರೈತ ಹೋರಾಟಗಾರ ಸತೀಶ್ ಕೊಳೇನಹಳ್ಳಿ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಹೆಚ್. ಜಿ. ಗಣೇಶಪ್ಪ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಭಕ್ತ ಕನಕದಾಸ ಸಂಗೊಳ್ಳಿ ಹೋರಾಟ ಸಮಿತಿ ಅಧ್ಯಕ್ಷ ಪಿ. ಜೆ. ರಮೇಶ್, ಎಸ್. ಎಂ. ಸಿದ್ದಲಿಂಗಪ್ಪ, ಎಂ. ಮಂಜುನಾಥ್, ಕುಂಬಳೂರು ವಿರುಪಾಕ್ಷಪ್ಪ, ಹೆಚ್. ವೈ. ಶಶಿಧರ್ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.