ಇಂದಿನ ಶಿಕ್ಷಣ ವ್ಯವಸ್ಥೆ ಕೆಟ್ಟೋಗಿದೆ. ಖಾಸಗೀಕರಣ ಮತ್ತು ಕಾರ್ಪೊರೇಟ್ ಹಿಡಿತದಿಂದ ಶಿಕ್ಷಣ ಬಂಡವಾಳ ಶಾಹಿಗಳ ಪರವಾಗಿ ಕೇಂದ್ರೀಕೃತವಾಗುತ್ತಿದೆ. ಇದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಐಐಟಿ, ಐಐಎಂ ಮುಂತಾದ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ, ಓಬಿಸಿ ನೌಕರರ ಪ್ರಮಾಣ ತುಂಬಾ ಕಡಿಮೆ. ಒಂದು ವಿಶಿಷ್ಟ ವರ್ಗದವರು ಶೇ. 80 ರಷ್ಟು ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಇಡೀ ಶಿಕ್ಷಣ ವ್ಯವಸ್ಥೆ ಬ್ರಾಹ್ಮಣ್ಯ ಸಿದ್ಧಾಂತದ ಪ್ರಭಾವದಲ್ಲಿದೆ ಎಂದರೆ ತಪ್ಪಾಗುವುದಿಲ್ಲ ಎಂದು ಲೇಖಕ ಹಾಗೂ ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ ತೀವ್ರವಾಗಿ ಟೀಕಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗ, ಮಾನವ ಬಂಧುತ್ವ ವೇದಿಕೆ (ಕರ್ನಾಟಕ) ಮತ್ತು ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ‘ಅರಿವೇ ಅಂಬೇಡ್ಕರ’- ಬಾಬಾಸಾಹೇಬರ ಬರಹಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಅಂಬೇಡ್ಕರ್ ಸಮಾಜದಲ್ಲಿ ಸಮಾನತೆಯನ್ನು ತರಲು ಶ್ರಮಿಸಿದರು. ಅವರು ನೂರು ವರ್ಷಗಳ ಹಿಂದೆಯೇ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಬೇಕು ಎಂಬ ನಿಲುವು ಹೊಂದಿದ್ದರು. ಬ್ರಿಟಿಷರು ಶಿಕ್ಷಣ ನೀಡಿದರೂ, ಅದು ಮುಖ್ಯವಾಗಿ ಜಮೀನ್ದಾರರು ಮತ್ತು ಅಧಿಕಾರಿಗಳ ಮಕ್ಕಳಿಗೆ ಸೀಮಿತವಾಗಿತ್ತು. ಆದರೆ ಅಂಬೇಡ್ಕರ್ ದೃಷ್ಟಿಯಲ್ಲಿ ಪ್ರತಿ ವ್ಯಕ್ತಿಗೂ, ಎಲ್ಲ ವರ್ಗದವರಿಗೂ ಶಿಕ್ಷಣ ಲಭ್ಯವಾಗಬೇಕು ಎಂಬುದಾಗಿತ್ತು” ಎಂದರು.
“ಅಂಬೇಡ್ಕರ್ ಸಂವಿಧಾನದಲ್ಲಿ ಶಿಕ್ಷಣವನ್ನು ಎಲ್ಲರ ಹಕ್ಕಾಗಿ ರೂಪಿಸಿದರು. ವಿಶೇಷವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದ ಸಮುದಾಯಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶವನ್ನು ಸಂವಿಧಾನದಲ್ಲಿ ಅಳವಡಿಸಿದರು. ಇದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಈ ಮೌಲ್ಯಗಳಿಂದ ದೂರ ಸರಿದು, ಕೇವಲ ಶೇ.1ರಷ್ಟು ಇರುವ ವರ್ಗದ ಸಿದ್ಧಾಂತವನ್ನು ಹೊಂದಿದೆ. ಇದನ್ನೆಲ್ಲ ಆತ್ಮಾವಲೋಕನ ಮಾಡಿಕೊಂಡರೆ, ಶಿಕ್ಷಣ ವ್ಯವಸ್ಥೆ ಬ್ರಾಹ್ಮಣ್ಯ ಸಿದ್ಧಾಂತದ ಪ್ರಭಾವದಲ್ಲಿದೆ ಎನ್ನುವುದು ತಿಳಿಯುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ ಡಿ ಕುಂಬಾರ ಮಾತನಾಡಿ, “ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ನಾವು ಇಂದು ಉತ್ತಮವಾಗಿ ಬದುಕುತ್ತಿರುವೆವು ಎಂದರೆ, ಅದಕ್ಕೆ ಮಾನವತಾವಾದಿ ಅಂಬೇಡ್ಕರ್ ಕಾರಣ. ಅಂಬೇಡ್ಕರ್ ಅವರನ್ನು ಅನುಸರಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಅಪಾರ ಕೊಡುಗೆ ನೀಡಿದರು. ಆದರೆ ಇಂದು ಹಲವಾರು ಹೆಣ್ಣುಮಕ್ಕಳು ಅವರನ್ನು ನೆನೆಸಿಕೊಳ್ಳುತ್ತಿಲ್ಲ ಎಂಬುದು ದುರಾದೃಷ್ಟಕರ. ಅವರ ಬರಹಗಳು ಮತ್ತು ಭಾಷಣಗಳು ದಲಿತರ, ಹಿಂದುಳಿದವರ ಹಾಗೂ ಹೆಣ್ಣುಮಕ್ಕಳ ಮನೆಗಳಲ್ಲಿ ಇರಬೇಕು. ಸರಕಾರ ಅವರ ಬರಹ ಮತ್ತು ಭಾಷಣಗಳನ್ನು ಮುದ್ರಿಸಿ ಪ್ರತಿಯೊಂದು ಮನೆಗೆ ತಲುಪುವಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ:ದಾವಣಗೆರೆ | ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದುರುಪಯೋಗದ ವಿರುದ್ಧ ಕಾನೂನಾತ್ಮಕ ಕ್ರಮ; ಎಸ್ಪಿ ಉಮಾ ಪ್ರಶಾಂತ್
ಸಾಮಾಜಿಕ ಹೋರಾಟಗಾರ್ತಿ, ವಕೀಲೆ ರಾಜಲಕ್ಷ್ಮೀ ಅಂಕಲಗಿ ಮಾತನಾಡಿ, “ಅಂಬೇಡ್ಕರ್ ಬರೆದಿರುವ ಸಂವಿಧಾನವು ಮಹಿಳೆಯರಿಗೆ ಸಮಾನತೆಯ ಹಕ್ಕು, ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಮಹಿಳೆಯರ ಜವಾಬ್ದಾರಿ. ಆದರೆ ಇಂದಿಗೂ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ಮಹಿಳೆಯರಿಗೆ ಈ ಹಕ್ಕುಗಳ ಅರಿವು ತೀರಾ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಜನಜಾಗೃತಿ ಕಾರ್ಯಗಳ ಮೂಲಕ ಮಹಿಳೆಯರಲ್ಲಿ ಹಕ್ಕುಗಳ ಅರಿವು ಮೂಡಿಸುವುದು ಅತೀ ಅವಶ್ಯಕ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
https://www.facebook.com/share/v/15Z1V2BAZW
ಕಾರ್ಯಕ್ರಮದಲ್ಲಿ ಇಂಗ್ಲೀಷ್ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಫಕ್ಕಿರೇಶ ಹಳ್ಳಳ್ಳಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ ಬಿ ರಾಮಚಂದ್ರಪ್ಪ, ಇಂಗ್ಲೀಷ್ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವಿಕುಮಾರ ಎಸ್ ಕುಂಬಾರ, ವಿವಿ ಕುಲಸಚಿವ ಶಬ್ಬೀರ್ ಭಾಷಾ ಗಂಟಿ, ಇಂಗ್ಲಿಷ್ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಯಜ್ಞಶ್ರೀ ಎಸ್, ಈದಿನ ಡಾಟ್ ಕಾಮ್ ತುಮಕೂರು ಜಿಲ್ಲಾ ವರದಿಗಾರ ಚಂದನ್, ಈದಿನ ಡಾಟ್ ಕಾಮ್ ಕೇಂದ್ರ ಸಂಯೋಜಕ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಜಿಲ್ಲಾ ವರದಿಗಾರ ವಿನಾಯಕ್ ಚಿಕ್ಕಂದವಾಡ ಹಾಗೂ ಮದಕರಿ ನಾಯಕ ಹೆಚ್ ಆರ್ ಇದ್ದರು.