ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಮುಖ್ಯವಾಗಿ ಕಲಿಸುವಿಕೆಗೆ ಮಾತ್ರ ತೊಡಗಿಸಿಕೊಂಡು ಬೋಧಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಿ ಮಕ್ಕಳ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಪ್ರಜಾ ಪರಿವರ್ತನಾ ವೇದಿಕೆ ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಪ್ರಕರಣ 27ರನ್ವಯ ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ, ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ ಅಥವಾ ಸಂಸತ್ತು ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಶಿಕ್ಷಣ ಹೊರತು ಪಡಿಸಿದ ಅನ್ಯ ಉದ್ದೇಶಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು. ಆದರೆ ನಿಯಮ ಮೀರಿ ಬೇರೆ ಬೇರೆ ಶಿಕ್ಷಣೇತರ ಕಾರ್ಯಭಾರದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ಮಕ್ಕಳ ಶೈಕ್ಷಣಿಕ ಹಕ್ಕಿನ ಮೇಲೆ ಪ್ರಭಾವ ಬೀರುತ್ತದೆ. ಕೂಡಲೇ ಶಿಕ್ಷಕರಿಗೆ ಬೋಧಕೇತರ ಕಾರ್ಯಾಭಾರ ಕಡಿಮೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿತು.
ʼಕ್ಷೀರಭಾಗ್ಯ, ಅಕ್ಷರ ದಾಸೋಹ, ಆಧಾರ್ ನೋಂದಣಿ, ಮಾತ್ರೆ ವಿತರಣೆ, ಶೂ, ಬೈಸಿಕಲ್, ಸಮವಸ್ತ, ಪಠ್ಯಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕಾರ್ಯಕ್ರಮಗಳ ದಾಖಲೆ ನಿರ್ವಹಣೆ, ಬೋಧಕೇತರ ಸಿಬ್ಬಂದಿ ಇಲ್ಲದಿರುವ ಎಲ್ಲಾ ಶಾಲಾ ದಾಖಲೆಗಳ ನಿರ್ವಹಣೆ, ವಿವಿಧ ಅನುದಾನಗಳ ಸಮರ್ಪಕ ವೆಚ್ಚ ಹಾಗೂ ದಾಖಲೆ ನಿರ್ವಹಣೆ, ವೆಚ್ಚವಾದ ಅನುದಾನಗಳ ಲೆಕ್ಕಪತ್ರ ಹಾಗೂ ದಾಖಲೆ ನಿರ್ವಹಣೆ, ಬ್ಯಾಂಕ್ನೊಂದಿಗೆ ಶಾಲೆಯ ವ್ಯವಹಾರ ಖಾತೆಯ ನಿರ್ವಹಣೆ, ಜನಗಣತಿ, ಜಾತಿಗಣತಿ, ಮಕ್ಕಳ ಗಣತಿ ಇಷ್ಟೆಲ್ಲಾ ಕಾರ್ಯಭಾರಗಳು ಶಿಕ್ಷಕರ ಮೇಲಿದೆ. ಇದರಿಂದಾಗಿ ಬೋಧನೆಗೆ ಸಮಯ ಕೊಡುವ ಸಮಯ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಮಕ್ಕಳ ಕಲಿಕೆಗೆ ಅಡ್ಡಿಯುಂಟು ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆʼ ಎಂದು ಆತಂಕ ವ್ಯಕ್ತಪಡಿಸಿತು.
ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ಕಲಿಕೇತರ ಕಾರ್ಯಭಾರವನ್ನು ಕಡಿಮೆ ಮಾಡಿ ಶಿಕ್ಷಕರು ಪೂರ್ಣವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಕ್ರಮ ವಹಿಸಬೇಕೆಂದು ಸಮಿತಿ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರ; ಯತ್ನಾಳ್ ಪರ ನಿಂತ ಜಯಮೃತ್ಯುಂಜಯ ಶ್ರೀ
ಈ ವೇಳೆ ಸಮಿತಿಯ ಕಾರ್ಯಾಧ್ಯಕ್ಷ ಎ ಡಿ ಈಶ್ವರಪ್ಪ, ಜಿಲ್ಲಾ ಅಧ್ಯಕ್ಷ ಹೆಚ್ ಕೆ ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು ಎಂ, ಧನಿಕ, ಮಹಮ್ಮದ್ ಹನೀಫ್ ಕೆ, ಜಿಲ್ಲಾ ಕಾನೂನು ಸಲಹೆಗಾರ ರಾಕೇಶ್ ಕಕ್ಕರಗೊಳ್ಳ, ನಾಗರಾಜ್ ಕಲ್ಕೆರೆ, ಸಿದ್ದಪ್ಪ ಸಿಂಗಟಗೇರಿ ಸೇರಿದಂತೆ ಇತರರು ಹಾಜರಿದ್ದರು.
