ದಾವಣಗೆರೆ | ಹಿರಿಯ ಕಮ್ಯುನಿಸ್ಟ್ ಮುಖಂಡ ಕಾಮ್ರೇಡ್ ಆನಂದರಾಜ್ ಇನ್ನಿಲ್ಲ

Date:

Advertisements

ದಾವಣಗೆರೆ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ಮುಖಂಡ ಕಾಮ್ರೇಡ್ ಆನಂದರಾಜ್ ಅವರು ವಿಧಿವಶರಾಗಿದ್ದಾರೆ. ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದಾವಣಗೆರೆಯ ಕೆಟಿಜೆ ನಗರದ 14ನೇ ತಿರುವಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆಯುವುದರ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮತ್ತೊಂದು ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಆ.16ರ ಬೆಳಗ್ಗೆ 6 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

2021ರ ಇಸವಿ ಮೇ ತಿಂಗಳಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಅವರ ಅಗಲುವಿಕೆಯ ನೋವನ್ನು ಮರೆಯುವುದರೊಳಗೆ ಮತ್ತೊಬ್ಬ ಹಿರಿಯ ಕಾರ್ಮಿಕ ನಾಯಕನ ನಿರ್ಗಮನವಾಗಿರುವುದು ಕಾರ್ಮಿಕ ವರ್ಗಕ್ಕೆ ಬರಸಿಡಿಲು
ಬಡಿದಂತಾಗಿದೆ.

ಮೂಲತಃ ತಮಿಳುನಾಡಿನವರಾದ ಆನಂದರಾಜ್ ರವರು 1962 ರಲ್ಲಿ ಸಿದ್ಧೇಶ್ವರ ಮಿಲ್ಲಿಗೆ ಕಾರ್ಮಿಕನಾಗಿ ಸೇರಿ ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದರು‌. ಅಲ್ಲಿ ಸರಿಸುಮಾರು 4 ದಶಕಗಳವರೆಗೆ ಕೆಲಸ ಮಾಡಿ ಅಲ್ಲಿ‌ನ ಯೂನಿಯನ್‌ನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಬಹುಮುಖ್ಯ ಜವಾಬ್ದಾರಿಗಳನ್ನು ನಿಭಾಯಿಸಿದರು.

Advertisements

ಮಿಲ್ ಮಾಲೀಕರ ವಿರುದ್ಧ ಹೋರಾಟ

2002ರಲ್ಲಿ ಹತ್ತಿಮಿಲ್ ಮುಚ್ಚುವವರೆಗೂ ಅಲ್ಲಿ ಕೆಲಸ ಮಾಡಿದರು‌. ಮಿಲ್ ಮುಚ್ಚಿದ ತರುವಾಯವೂ ಕಾರ್ಮಿಕರಿಗೆ ಮಾಲೀಕರಿಂದ ಬರಬೇಕಾದ ಹಣವನ್ನು ಕೊಡಿಸುವಲ್ಲಿ ಅವರು ಪಟ್ಟ ಶ್ರಮ ಹೋರಾಟ ಸ್ಮರಣೀಯ. ಇಂದಿಗೂ ಅನೇಕ ಕಾರ್ಮಿಕರು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.

ನೋಡಲು ಕೃಷ ಶರೀರದ ಮೈಕಟ್ಟನ್ನು ಹೊಂದಿದ್ದರೂ, ಕಮ್ಯುನಿಸಮ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡ ಹಾರ್ಡ್ ಕೋರ್ ಕಮ್ಯುನಿಸ್ಟ್ ಆಗಿದ್ದರು. ಕಾಮ್ರೇಡ್ ಪಂಪಾಪತಿಯವರ ನೆರಳಿನಲ್ಲೇ ಬೆಳೆದ ಆನಂದರಾಜ್ ಕಾರ್ಮಿಕ ಸಂಘಟನೆಯ ಎಲ್ಲ ಪಟ್ಟುಗಳನ್ನು ಕಲಿತಿದ್ದರು. ಕಾಮ್ರೇಡ್ ಪಂಪಾಪತಿಯವರ ಬಲಗೈಯಂತೆ ಕೆಲಸ ಮಾಡಿದ್ದರೂ ಎಂದಿಗೂ ಚುನಾವಣೆ ಅವರಿಗೆ ದೂರ. ಸ್ಪರ್ಧಿಸದೇ ಪಕ್ಷದ ಕೆಲಸಗಳನ್ನು ಬಹು ನಿಷ್ಠೆಯಿಂದ ನಿಭಾಯಿಸಿದವರು. ಅವರು ಮನಸ್ಸು ಮಾಡಿದ್ದರೆ ಕನಿಷ್ಠ ದಾವಣಗೆರೆ ನಗರಸಭೆಯ ಸದಸ್ಯರಾದರೂ ಆಗಬಹುದಿತ್ತು. ಆದರೆ ಅದರಿಂದ ದೂರ ಉಳಿದು ಪಕ್ಷ ನಿಷ್ಠೆ ಮತ್ತು ಹೋರಾಟ ಬೆಳೆಸಿದವರು.

ಕಮ್ಯುನಿಸ್ಟ್ ಸಾಮ್ರಾಜ್ಯದಲ್ಲೂ ಸರಳತೆ

ಯಾಕೆಂದರೆ 70-80 ದಶಕದಲ್ಲಿ ದಾವಣಗೆರೆಯಲ್ಲಿ ಕಮ್ಯುನಿಸ್ಟರ ಪ್ರಭಾವ ಅಷ್ಟಿಷ್ಟಲ್ಲ. ಆದರೆ ಎಲ್ಲರೂ ಚುನಾವಣಾ ರಾಜಕಾರಣಿಗಳಾದರೆ ಪಕ್ಷ ಮತ್ತು ಐಸಂಘಟನೆಯ ಕೆಲಸ ಮಾಡುವವರಾರು ಎನ್ನುವ ಸ್ಪಷ್ಟತೆ ಅವರಲ್ಲಿತ್ತು. ಹಾಗಾಗಿ ಚುನಾವಣಾ ರಾಜಕಾರಣದಿಂದ ದೂರವೇ ಉಳಿದರು.

1970 ರಲ್ಲಿ ಮಾಲೀಕ ವರ್ಗದ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಆನಂದರಾಜ್ ರವರು ಕಾಮ್ರೇಡ್ ಸುರೇಶ್, ಕಾಮ್ರೇಡ್ ಶೇಖರಪ್ಪ ಅವರಂತೆಯೇ ಕೊಲೆಯಾಗಬೇಕಾಗಿತ್ತು‌. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಕಾಮ್ರೇಡ್ ಪಂಪಾಪತಿ ಹಾಗೂ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರ ಅತ್ಯಂತ ಆಪ್ತ ಒಡನಾಡಿಯಾಗಿದ್ದರು. ದಾವಣಗೆರೆಯಲ್ಲಿ ಕಾರ್ಮಿಕ ಯುಗದ ಉತ್ತುಂಗ ಹಾಗೂ ಬಹುತೇಕ ರಾಜಕೀಯ ಅವನತಿ ಎರಡಕ್ಕೂ ಸಾಕ್ಷಿಯಾಗಿದ್ದ ಆನಂದರಾಜ್ ಪ್ರಸ್ತುತ ಕಾಲಮಾನದ ಅತ್ಯಂತ ಅನುಭವಿ ಹಾಗೂ ಹಿರಿಯ ಕಮ್ಯುನಿಸ್ಟ್ ಆಗಿದ್ದರು.

ಕೋಪಿಷ್ಟರಲ್ಲ, ತಾಳ್ಮೆ, ಸಮಾಧಾನದ ವ್ಯಕ್ತಿ

ಕಮ್ಯುನಿಸ್ಟರು ಕೋಪಿಷ್ಟರು ಎನ್ನುವ ಮಾತಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ತಾಳ್ಮೆ, ಸಮಾಧಾನದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯ ಕೆಲಸಗಳನ್ನು ಮಾಡುತ್ತಿದ್ದರಿಂದ ಎಲ್ಲಾ ಕಾರ್ಮಿಕರಿಗೂ ಅದರಲ್ಲೂ ಬಹುಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದರು‌. ಅವರ ಸಮಸ್ಯೆಗಳನ್ನು ಸಮಾಧಾನದಿಂದ ಮತ್ತು ತಾಳ್ಮೆಯಿಂದ ಕೇಳಿಸಿಕೊಂಡು ಅವರಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಈ ಅವರ ಗುಣ ಬಹುತೇಕರಿಗೆ ಮೆಚ್ಚುಗೆಯಾಗುತ್ತಿತ್ತು.

ಭಾರತ ಕಮ್ಯುನಿಸ್ಟ್ ಪಕ್ಷ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಜಿಲ್ಲಾ ಸಮಿತಿಗಳ ಹಾಗೂ ಕಾಂ.ಸುರೇಶ್ ಶೇಖರಪ್ಪ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಮಂಡಳಿಗಳ ಖಜಾಂಚಿಯಾಗಿ ಅತ್ಯಂತ ಪಾರದರ್ಶಕ ಆಡಳಿತವನ್ನು ನಡೆಸಿ ಮೂರೂ ಸಂಘಟನೆಗಳ ಆರ್ಥಿಕ ಶಿಸ್ತನ್ನು ಕಾಪಾಡುವುದರ ಮೂಲಕ ತಾನೊಬ್ಬ ಕಾರ್ಮಿಕ ಮುಖಂಡ ಮಾತ್ರವಲ್ಲದೆ ಒಬ್ಬ ಶಿಸ್ತಿನ ಆಡಳಿತಗಾರ ಎಂತಲೂ ಸಾಬೀತು ಪಡಿಸಿದ್ದರು.

ಅಧಿಕಾರಕ್ಕೆ ಆಸೆಪಟ್ಟವರಲ್ಲ

ಹೆಚ್ ಕೆ ಆರ್ ಕಾಲದಲ್ಲೂ ಖಜಾಂಚಿಗಳಾಗಿದ್ದ ಆನಂದರಾಜ್‌ರವರು ಹೆಚ್‌ಕೆಆರ್ ತರುವಾಯ ಅವರಿದ್ದ ಪಕ್ಷದ ಕಾರ್ಯದರ್ಶಿ ಸ್ಥಾನ, ಎಐಟಿಯುಸಿ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನವನ್ನು ಹೊಂದುವ ಎಲ್ಲ ಅವಕಾಶವಿದ್ದರೂ ಪಕ್ಷದ ಕಾರ್ಯದರ್ಶಿ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನಕ್ಕೆ ಅವರಗೆರೆ ಚಂದ್ರು ಅವರನ್ನು, ಎಐಟಿಯುಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಘವೇಂದ್ರ ನಾಯರಿ ಅವರನ್ನು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೆಚ್‌.ಜಿ.ಉಮೇಶ್ ಅವರಗೆರೆ ಅವರಂತಹ ಮುಂದಿನ ತಲೆಮಾರಿನ ನಾಯಕರನ್ನು ನೇಮಿಸುವ ಮೂಲಕ ಹೊಸ ನಾಯಕರು ಬೆಳೆಯಲು ಅವಕಾಶ ಮಾಡಿಕೊಟ್ಟು ತಾವು ಖಜಾಂಚಿಗಳಾಗಿಯೇ ಉಳಿದು ತಾನೊಬ್ಬ ಹೊಸ ತಲೆಮಾರಿನ ನಾಯಕರನ್ನು ಬೆಳೆಸುವ ಕಮ್ಯುನಿಸ್ಟ್ ನಾಯಕ ಎಂದು ಇತರರಿಗೆ ಮಾದರಿಯಾದರು.

ಇದನ್ನು ಓದಿದ್ದೀರಾ? ಜೇವರ್ಗಿ | ಮಾರಾಟವಾಗದ ಅಡುಗೆ ಮನೆಯಲ್ಲಿ ಉಪಯೋಗಿಸುವ ಕಲ್ಲಿನ ಉಪಕರಣಗಳು; ಸಂಕಷ್ಟದಲ್ಲಿ ವ್ಯಾಪಾರಿಗಳು

ಸ್ವಾಭಿಮಾನಿ ಬದುಕು ಆದರ್ಶನೀಯ:

ಅವರು ಅತೀವ ಇಷ್ಟ ಪಡುತ್ತಿದ್ದ ಕಾಮ್ರೆಡ್ ಪಂಪಾಪತಿಯವರು ಮೂರು ಬಾರಿ ಶಾಸಕರಾದರೂ ಹೇಗೆ ಅತೀ ಸರಳವಾಗಿ ಬದುಕಿದರೋ ಅದೇ ಮಾದರಿಯಲ್ಲಿ ಆನಂದರಾಜ್ ಸಹ ತಮ್ಮ ಜೀವಿತಾವಧಿಯಲ್ಲಿ ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೊನೆ ತನಕವೂ ಸ್ವಾಭಿಮಾನಿ ಮತ್ತು ಶ್ರಮ ಜೀವಿ ಕಮ್ಯುನಿಸ್ಟ್ ಆಗಿಯೇ ಕೊನೆಯುಸಿರೆಳೆದರು. ಸರಳವಾಗಿ ಜೀವನ ನಡೆಸಿದ, ನಿಷ್ಠೆ ಪ್ರಾಮಾಣಿಕತೆ ಪ್ರಬುದ್ಧತೆ, ಸೌಹಾರ್ದತೆ ಮೈಗೂಡಿಸಿಕೊಂಡು ಹಣ, ಅಧಿಕಾರಕ್ಕೆ ಆಸೆ ಪಡದೆ ಎಲ್ಲರೊಳಗೊಂದಾಗಿ ಬದುಕಿದ ಅವರ ಜೀವನವು ಈಗಿನ ತಲೆಮಾರಿನ ಕಮ್ಯುನಿಸ್ಟ್ ನಾಯಕರಿಗಲ್ಲದೇ ಎಲ್ಲಾ ಸಂಘಟನೆಗಳವರಿಗೂ, ಪಕ್ಷದವರಿಗೂ, ಇತರರಿಗೂ ಮಾದರಿಯಾಗಬೇಕಾಗಿದೆ.

ರಾಘವೇಂದ್ರ ನಾಯರಿ
ಬರೆಹ: ರಾಘವೇಂದ್ರ ನಾಯರಿ
ಕಾರ್ಮಿಕ ಮುಖಂಡರು,
ಕಾರ್ಯದರ್ಶಿ, ಬ್ಯಾಂಕ್ ನೌಕರರ ಅಸೋಸಿಯೇಷನ್ , ದಾವಣಗೆರೆ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X