ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಸಮಾಜೋಧಾರ್ಮಿಕ ಚಳವಳಿ ಆಧರಿಸಿ ಹಿಂದಿ ಭಾಷೆಯಲ್ಲಿ’ಬಸವೇಶ್ವರ ದರ್ಶನ’ ಎಂಬ ಮಹಾನಾಟಕ ನಿರ್ಮಾಣ ಮಾಡಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ನಿರ್ಣಯಿಸಲಾಯಿತು.
ಬೀದರ್ ನಗರದ ಲಾವಣ್ಯ ಫಂಕ್ಷನ್ ಹಾಲ್ನಲ್ಲಿ ಶನಿವಾರ ಕರೆದ ಸಮಾಲೋಚನೆ ಸಭೆಯಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ವಿವಿಧ ಸಂಘಟನೆಗಳ, ಸಮುದಾಯದ ಮುಖಂಡರು, ಬಸವಾನುಯಾಯಿಗಳು ಬಸವಣ್ಣನವರ ಕುರಿತಾದ ನಾಟಕ ನಿರ್ಮಾಣಕ್ಕೆ ಒಮ್ಮತದಿಂದ ತೀರ್ಮಾನಿಸಿದರು.
ಸಭೆಯ ನೇತೃತ್ವ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಕ್ರಾಂತಿ ಸೂರ್ಯ, ʼಜನತಾ ರಾಜಾʼ ಮಹಾನಾಟಕಗಳು ನೋಡಿದ ನಂತರ ಬಸವಣ್ಣನವರ ಕುರಿತಾದ ನಾಟಕ ಮಾಡಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಇದೀಗ ಅದಕ್ಕೆ ಎಲ್ಲರ ಒಮ್ಮತದ ನಿರ್ಧಾರದಿಂದ ‘ಬಸವೇಶ್ವರ ದರ್ಶನ’ ನಾಟಕ ಮಾಡಬೇಕೆಂಬ ಕನಸು ಈಡೇರುವ ಕಾಲ ಬಂದಿದೆ. ನಾಟಕಗಳ ಮುಖಾಂತರ ಶರಣರ ವಿಚಾರಧಾರೆಗಳನ್ನು ಪ್ರಸ್ತುತ ಸಮಾಜಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕುʼ ಎಂದು ಹೇಳಿದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ʼನಿರ್ದೇಶಕ ಜತೀನ್ ಪಾಟೀಲ್ ಅವರು ಈಗಾಗಲೇ ರಚಿಸಿ ನಿರ್ದೇಶಿಸಿದ ʼತತಾಗಥ, ಕ್ರಾಂತಿ ಸೂರ್ಯ, ಮೂಕನಾಯಕ, ರಮಾಯಿ, ಜನತಾ ರಾಜಾʼ ಮಹಾನಾಟಕಗಳು ದೇಶದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಂಡು ಜನಮಾನಸದಲ್ಲಿ ಹೊಸ ಛಾಪು ಮೂಡಿಸಿವೆ. ಅದೇ ಮಾದರಿಯಲ್ಲಿ ಬಸವಣ್ಣನವರ ಕಲ್ಯಾಣ ಕ್ರಾಂತಿ ಕುರಿತು ʼಬಸವೇಶ್ವರ ದರ್ಶನʼ ಎಂಬ ಮಹಾನಾಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಬಸವಾದಿ ಶರಣರ ವೈಚಾರಿಕ ತತ್ವಗಳನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ನಾಟಕ ಮೂಡಿ ಬರಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆʼ ಎಂದು ಹೇಳಿದರು.

ನಿರ್ದೇಶಕ ಜತೀನ್ ಪಾಟೀಲ್ ಮಾತನಾಡಿ, ʼಅಸಮಾನತೆಗಾಗಿ ಕ್ರಾಂತಿ ರೂಪಿಸಿದ ಬಸವಣ್ಣನವರ ಕುರಿತು ನಾಟಕ ಮಾಡುವುದು ಅತ್ಯಂತ ಹೆಮ್ಮೆಯ ವಿಚಾರ. ಬಸವಣ್ಣನವರ ಕುರಿತಾದ ಮಹಾನಾಟಕ ಬರೀ ನಾಟಕವಾಗದೇ, ದೇಶದ ಇತಿಹಾಸ ದಾಖಲೆ ನಿರ್ಮಿಸುವ ನಾಟಕವಾಗಿ ರೂಪುಗೊಳ್ಳುತ್ತದೆ. ಈ ನಾಟಕಕ್ಕೆ ಸುಮಾರು 74 ಲಕ್ಷ ಖರ್ಚಾಗುತ್ತದೆʼ ಎಂದು ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ‘ಬಸವಣ್ಣನವರ ಕುರಿತು ಕನ್ನಡದಲ್ಲಿ ಅನೇಕ ನಾಟಕಗಳು ಬಂದಿವೆ. ಆದರೆ ಹಿಂದಿ ಭಾಷೆಯಲ್ಲಿ ಮಾಡುತ್ತಿರುವುದು ಉತ್ತಮ ನಿರ್ಧಾರ. ಬಸವಣ್ಣನವರ ತತ್ವಗಳಿಗೆ ಚ್ಯುತಿ ಬಾರದಂತೆ ನಾಟಕ ಮೂಡಿ ಬರಲಿ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದುʼ ಎಂದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಸಿದ್ಧರಾಮ ಶರಣರು ಬೆಲ್ದಾಳ, ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ , ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ , ಬೀದರ್ ಬಸವ ಮಂಟಪದ ಸತ್ಯಾದೇವಿ ಮಾತಾಜಿ, ಲಿಂಗಾಯತ ಮಹಾಮಠದ ಪ್ರಭು ದೇವರು ಮಾತನಾಡಿ, ‘ಬಸವಣ್ಣನವರು ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗಿಲ್ಲ. ಇಡೀ ಜಗತ್ತಿನ ಮಾನವ ಕುಲಕ್ಕೆ ಸಮಸಮಾಜದ ತತ್ವ ಬೋಧಿಸಿದ್ದಾರೆ. ಅವರ ವಿಚಾರಗಳು ಜಗತ್ತಿನ ಜನರಿಗೆ ಪ್ರಚುರಪಡಿಸುವ ಮೂಲಕ ಕಲ್ಯಾಣ ಕ್ರಾಂತಿಯ ಆಶಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲು ನಾವೆಲ್ಲರೂ ಕೈಜೋಡಿಸುತ್ತೇವೆ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಸಮಿತಿ ರಚಿಸಬೇಕುʼ ಎಂದು ತಿಳಿಸಿದರು.
ಮರಾಠಾ ಸಮಾಜದ ನಾರಾಯಣ ಗಣೇಶ ಅವರು ಶಿವಾಜಿ ಜೀವನಾಧಾರಿತ ʼಜನತಾ ರಾಜಾʼ ಹಾಗೂ ಮಹೇಶ್ ಗೊರನಾಳಕರ್ ಅವರು ʼಕ್ರಾಂತಿ ಸೂರ್ಯʼ ಮಹಾನಾಟಕ ಪ್ರದರ್ಶನ ಕುರಿತು ಅನುಭವ ಹಂಚಿಕೊಂಡರು.
ಪ್ರಮುಖರಾದ ಬಸವರಾಜ ಧನ್ನೂರ, ಬಸವರಾಜ ಬುಳ್ಳಾ, ಶ್ಯಾಮಣ್ಣ ಬಾವಗಿ, ವೀರಭದ್ರಪ್ಪ ಉಪ್ಪಿನ, ರಮೇಶ್ ಬಿರಾದಾರ ಸೇರಿದಂತೆ ಅನೇಕರು ಮಾತನಾಡಿ ನಾಟಕ ರೂಪುರೇಷಗಳ ಕುರಿತು ಅನುಭವ ತಿಳಿಸಿ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಸಭೆಯಲ್ಲಿ ಪ್ರಮುಖರಾದ ಬಸವಕುಮಾರ ಪಾಟೀಲ್, ಸೋಮಶೇಖರ್ ಪಾಟೀಲ್ ಗಾದಗಿ, ವೀರುಪಾಕ್ಷ ಗಾದಗಿ, ಬಿ.ಜಿ.ಶೆಟಕಾರ್, ಜಗನ್ನಾಥ ಜಮಾದಾರ, ಓಂಪ್ರಕಾಶ್ ರೊಟ್ಪೆ, ರವಿ ಪಾಪಡೆ, ಶಿವಶಂಕರ್ ಟೋಕರೆ, ಜಗದೀಶ್ವರ ಬಿರಾದಾರ, ಶಂಭುಲಿಂಗ ವಾಲ್ಡೊಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿವಕುಮಾರ್ ಪಾಂಚಾಳ ವಚನ ಗಾಯನ ನಡೆಸಿಕೊಟ್ಟರು.