ದೇಶದ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ, ಅಕ್ರಮವಾಗಿ ಬಂಧಿಸಲು ಯತ್ನಿಸಿರುವ ಘಟನೆ ನ.30ರ ಸಂಜೆ ನಡೆದಿದೆ.
ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ ನಾಲ್ವರು ಅಧಿಕಾರಿಗಳು ವಾರಂಟ್ ಅಥವಾ ಪೂರ್ವ ಸೂಚನೆಯಿಲ್ಲದೆ ಶನಿವಾರ ಸಂಜೆ 5ರ ಸುಮಾರಿಗೆ ನದೀಮ್ ಖಾನ್ ಅವರ ಬೆಂಗಳೂರಿನ ನಿವಾಸಕ್ಕೆ ಬಂದಿದ್ದರು. ಆ ಬಳಿಕ ರಾತ್ರಿ 10.45 ಕ್ಕೆ ಅಧಿಕಾರಿಗಳು ಬಿಎನ್ಎಸ್ಎಸ್ ಸೆಕ್ಷನ್ 35 (3) ರ ಅಡಿಯಲ್ಲಿ ನೋಟಿಸ್ ಅಂಟಿಸಿ, ಶಾಹೀನ್ ಬಾಗ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಕೇಳಿಕೊಂಡಿರುವ ಬೆಳವಣಿಗೆ ನಡೆದಿದೆ.
ಕೋಮುಗಳ ನಡುವೆ ದ್ವೇಷ ಹರಡುತ್ತಿರುವ ಸುಳ್ಳು ಆರೋಪ ಹೊರಿಸಿ ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಮಧ್ಯಾಹ್ನ 12:48 ಕ್ಕೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ದಾಖಲಾದ ಕೆಲವೇ ಗಂಟೆಗಳಲ್ಲಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ ನಾಲ್ವರು ಅಧಿಕಾರಿಗಳು, ನದೀಮ್ ಖಾನ್ ಅವರನ್ನು ಬಂಧಿಸಲು ಯತ್ನಿಸಿದ್ದಾರೆ.

ನೋಟಿಸ್ ಹಾಗೂ ಇತರೆ ದಾಖಲೆಗಳನ್ನು ಕುಟುಂಬಸ್ಥರು ಹಾಗೂ ಎಪಿಸಿಆರ್ನ ಕರ್ನಾಟಕದ ಮುಖಂಡರು ಪ್ರಶ್ನಿಸಿದಾಗ ತಬ್ಬಿಬ್ಬಾದ ಪೊಲೀಸರು, ರಾತ್ರಿ 10.30ರ ಸುಮಾರಿಗೆ ಮನೆಗೆ ನೋಟಿಸ್ ಅಂಟಿಸಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ನದೀಮ್ ಖಾನ್ ಅವರ ಮನೆಗೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಆದರೂ ಕೂಡ ದೆಹಲಿಯಿಂದ ಬಂದಿದ್ದ ಪೊಲೀಸರು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಕೂಡ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.
ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಎಪಿಸಿಆರ್ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಡ್ವೊಕೇಟ್ ನಿಯಾಝ್ ಅಹ್ಮದ್ ಉಪ್ಪಿನಂಗಡಿ, “ಹೊಸ ಬಿಎನ್ಎಸ್ ಕಾಯ್ದೆಯ ಅಡಿಯಲ್ಲಿ ಶಾಹೀನ್ ಭಾಗ್ ಪೊಲೀಸರು ಮಧ್ಯಾಹ್ನ 12:48ಕ್ಕೆ ಎಫ್ಐಆರ್ ಅನ್ನು ದಾಖಲಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿ ಸಂಜೆ 5 ಗಂಟೆಗೆ ನದೀಮ್ ಅವರ ಮನೆಗೆ ಶರವೇಗದಲ್ಲಿ ಆಗಮಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗು ಈ ಬಗ್ಗೆ ಮಾಹಿತಿ ನೀಡದೆ, ಅಕ್ರಮವಾಗಿ ಬಂಧಿಸಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ತಮ್ಮ ವರಸೆ ಬದಲಾಯಿಸಿ, ನೋಟಿಸ್ ಅಂಟಿಸಿ ತೆರಳಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ದೆಹಲಿ ಪೊಲೀಸರು ಈಗ ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ ಆರೋಪಿಗಳ ಬಂಧನಕ್ಕೂ ಮೊದಲು ನೋಟಿಸ್ ನೀಡಬೇಕಿದೆ. ಅಲ್ಲದೇ, ಈ ಬಗ್ಗೆ ಸುಪ್ರೀಂ ಕೋರ್ಟ್ನ ಮಾರ್ಗಸೂಚಿ ಕೂಡ ಇದೆ. ಇದು ಯಾವುದನ್ನೂ ಅನುಸರಿಸದೆ, ಅಕ್ರಮ ಬಂಧನಕ್ಕೆ ಯತ್ನಿಸಿದ್ದಾರೆ. ಮನೆಗೆ ಬಂದವರ ಬಳಿಯಲ್ಲಿ ಐಡಿ ಕಾರ್ಡ್ ಕೂಡ ಇರಲಿಲ್ಲ. ಅಲ್ಲದೇ, ಯಾವುದೇ ಮಾಹಿತಿ ನೀಡದೆ ಮನೆಗೆ ನುಗ್ಗಿದ್ದಾರೆ. ಅತಿಕ್ರಮಣ ಪ್ರವೇಶ ಮಾಡಿರುವುದರಿಂದ ದೆಹಲಿ ಪೊಲೀಸರ ಮೇಲೆ ಎಫ್ಐಆರ್ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ನದೀಮ್ ಖಾನ್ ಕುಟುಂಬಸ್ಥರು ದೂರು ನೀಡಿದ್ದಾರೆ. ಎಲ್ಲ ನಿಯಮಗಳನ್ನು ಗಾಳಿಯಲ್ಲಿ ತೂರಿರುವ ದೆಹಲಿ ಪೊಲೀಸರ ಈ ನಡೆಯು ಖಂಡನೀಯ” ಎಂದು ಅಡ್ವೊಕೇಟ್ ನಿಯಾಝ್ ತಿಳಿಸಿದರು.
ಪಿಯುಸಿಎಲ್ ಖಂಡನೆ
ವಾರಂಟ್ ಇಲ್ಲದಿದ್ದರೂ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ, ಪೊಲೀಸರು ಸುಮಾರು ಆರು ಗಂಟೆಗಳ ಕಾಲ ನದೀಮ್ ಖಾನ್ ನಿವಾಸದಲ್ಲಿ ಕಳೆದಿದ್ದಾರೆ. ಖಾನ್ ಮತ್ತು ಅವರ ಕುಟುಂಬವನ್ನು ಬೆದರಿಸಿರುವ ಪೊಲೀಸರ ನಡೆಯನ್ನು ಖಂಡಿಸುತ್ತೇವೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲಿ ಲಿಬರ್ಟೀಸ್(ಪಿಯುಸಿಎಲ್) ಹೇಳಿದೆ.
ವಾರಂಟ್ ಇಲ್ಲದಿದ್ದರೂ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ, ಪೊಲೀಸರು ಸುಮಾರು ಆರು ಗಂಟೆಗಳ ಕಾಲ ನಿವಾಸದಲ್ಲಿ ಕಳೆದರು, ಖಾನ್ ಮತ್ತು ಅವರ ಕುಟುಂಬವನ್ನು ಬಲವಂತಪಡಿಸಿದರು ಮತ್ತು ಬೆದರಿಸಿದರು” ಎಂದು ಪಿಯುಸಿಎಲ್ ಹೇಳಿದೆ.
PUCL Condemns Harassment of and Malicious FIR against human rights activist Nadeem Khan of the APCR by Delhi Police.
— Kavita Srivastava (@kavisriv) November 30, 2024
Demands FIR quashing, Compensation, FIR against the SHO of Shaheen Bagh Police station for criminal intimidation, harassment, trespassing be lodged. pic.twitter.com/zVnJDL2p5O
ಈ ಬಗ್ಗೆ ಹೇಳಿಕೆ ನೀಡಿರುವ ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ.ಸುರೇಶ್, “ನದೀಮ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಶನಿವಾರ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದ ವಿಚಾರಣೆಗಾಗಿ ಸ್ವಯಂಪ್ರೇರಿತವಾಗಿ ದೆಹಲಿಗೆ ಬರುವಂತೆ ಅವರು ಖಾನ್ ಮೇಲೆ ಒತ್ತಡ ಹೇರಿದ್ದಾರೆ. ವಾರಂಟ್ ಇಲ್ಲದಿದ್ದರೂ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ದೆಹಲಿ ಪೊಲೀಸರು ಅಕ್ರಮ ಬಂಧನಕ್ಕೆ ಯತ್ನಿಸಿರುವುದು ಖಂಡನೀಯ. ದುರುದ್ದೇಶಪೂರಿತ ಪ್ರಯತ್ನವಿದು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು; ಡ್ರಗ್ ಕಂಟ್ರೋಲರ್ ಸಸ್ಪೆಂಡ್: ಸಿ.ಎಂ.ಸಿದ್ದರಾಮಯ್ಯ
ಇಂತಹ ನಡೆಗಳು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಮತ್ತು ನಾಗರಿಕ ಸ್ವಾತಂತ್ರ್ಯಗಳು ಮತ್ತು ಸಾಂವಿಧಾನಿಕ ಹಕ್ಕುಗಳ ಸಮರ್ಥನೆಯನ್ನು ಅಪರಾಧೀಕರಿಸುವ ಪ್ರಯತ್ನವಾಗಿದೆ. ಎಫ್ಐಆರ್ ಅನ್ನು ತಕ್ಷಣ ರದ್ದುಗೊಳಿಸಬೇಕು, ದೆಹಲಿ ಪೊಲೀಸರು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಪಿಯುಸಿಎಲ್ ಒತ್ತಾಯಿಸಿದೆ.
