ಜೋಳ ಖರೀದಿ ಆರಂಭಿಸಲು ಒತ್ತಾಯಿಸಿ ರೈತಪರ, ಪ್ರಗತಿಪರ ಸಂಘಟನೆಗಳಿಂದ ಕರೆ ನೀಡಿದ ಸಿಂಧನೂರು ಬಂದ್ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಸಿಂಧನೂರು ಬಂದ್ ಅಂಗವಾಗಿ ವಿವಿಧ ರಸ್ತೆಗಳಲ್ಲಿ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ನೀಡಿದರು. ರಸ್ತೆಗಿಳಿದ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರು ತಾಲೂಕು ಬಂದ್ ಹೋರಾಟಕ್ಕೆ ಸಿಪಿಐಎಂ ಲಿಬರೇಷನ್ ಸೇರಿ ವಿವಿಧ ಪಕ್ಷಗಳು, ಜಮಾತೆ ಇಸ್ಲಾಂ, ರೈತಪರ, ಕನ್ನಡಪರ, ವರ್ತಕರ, ಗುತ್ತಿಗೆದಾರರ ಸಂಘ, ತಾಲೂಕು ವಕೀಲರ ಸಂಘ, ಗಂಜ್ ವರ್ತಕರು, ಗೊಬ್ಬರ ಅಂಗಡಿಗಳ ಮಾಲಿಕರು, ಗುತ್ತೆದಾರರ ಸಂಘ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದವು.

ಪ್ರತಿಭಟನಾ ನಿರತ ಹೋರಾಟಗಾರರು ಮಾತನಾಡಿ, “ರೈತರು ಅನೇಕ ದಿನಗಳಿಂದ ಜೋಳ ಖರೀದಿ ಆರಂಭಿಸಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನಮ್ಮ ಹೋರಾಟ ತೀವ್ರವಾಗುತ್ತಿದ್ದಂತೆ ಸ್ಥಳೀಯ, ಜನಪ್ರತಿನಿಧಿಗಳು ಬೆಂಕಿ ಹತ್ತಿದಾಗ ಬಾವಿ ತೋಡಲು ಹೊರಟಿದ್ದಾರೆ. ಇದು ಅನುಪಯುಕ್ತ ಈ ಮುಂಚೆಯೇ ನಿರ್ಧಾರ ಮಾಡಬೇಕಾಗಿತ್ತು. ಇದು ರೈತರ ಬಗ್ಗೆ ಕಾಳಜಿ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ನಿನ್ನೆ ರೈತರ ಅರೆಬೆತ್ತಲೆ ರಸ್ತೆತಡೆ ರಸ್ತೆಯಲ್ಲಿ ಕುಳಿತ ಊಟ ಮಾಡಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಳೆದ ವಾರ ಇದೇ ರೀತಿ ತಹಶೀಲ್ದಾರ್ ಕಚೇರಿ ಮುಖ್ಯದ್ವಾರದಲ್ಲಿ ಲಾರಿ ನಿಲ್ಲಿಸಿ ಪ್ರತಿಭಟನೆ ನಡೆಸಿದ ಸಮಯದಲ್ಲಿ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಹಾಗೂ ಪ್ರಭಾರ ತಹಶೀಲ್ದಾರ್ ಶೃತಿ ಅವರು ಬೇಡಿಕೆ ಈಡೇರಿಕೆಗೆ ನಾಲ್ಕು ದಿನ ಸಮಯ ಕೇಳಿದ್ದರು. ರೈತರು ಪ್ರತಿಭಟನೆ ವಾಪಸ್ ಪಡೆದಿದ್ದರು. ಸರ್ಕಾರ ಈವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಕಾರಣ ರೈತರು ಆಕ್ರೋಶಗೊಂಡು ರಸ್ತೆಗೆ ಇಳಿದು ಪ್ರತಿಭಟನೆ ತೀವ್ರಗೊಳಿಸಿದರು.
“ಕಳೆದ ಡಿಸೆಂಬರ್ ನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಗೆ ಬೆಂಬಲ ಬೆಲೆಯ ಹಣ ಬಿಡುಗಡೆ ಮಾಡಿಲ್ಲ ಹೊಸದಾಗಿ ಜನವರಿಯಲ್ಲಿ ಜೋಳ ಖರೀದಿ ಮಾಡಬೇಕಾಗಿತ್ತು. ಆದರೆ ಸರ್ಕಾರ ಫೆಬ್ರವರಿಯಲ್ಲಿ ನೋಂದಣಿ ಮೇನಲ್ಲಿ ಖರೀದಿ ಆರಂಭಿಸಿದೆ. ಇದು ಅಧಿಕಾರಿಗಳ ಲೋಪವೇ ಹೊರತು ರೈತರ ತಪ್ಪಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಐಎಫ್ಎಸ್ ಅಧಿಕಾರಿ ಆರ್ ಗೋಕುಲ್ ಸೇರಿ ಇತರ ವಿರುದ್ಧ ಕ್ರಮಕ್ಕೆ ನೈಜ ಹೋರಾಟ ವೇದಿಕೆ ಆಗ್ರಹ
“45 ದಿನಗಳಾದರೆ ನುಸಿ, 60 ದಿನಗಳಾದರೆ ಹುಳ ಬರುತ್ತದೆ ಎಂಬುದು ಸಾಮಾನ್ಯ ಜನರಿಗೂ ಗೊತ್ತು. ಇದರ ಬಗ್ಗೆ ಅಧಿಕಾರಿಗಳಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶಿಸಿದರು. ತಡವಾಗಿ ಆರಂಭಿಸಿ ತಾವೇ ತಪ್ಪು ಮಾಡಿ ರೈತರಿಗೆ ಶಿಕ್ಷೆ ಕೊಡುತ್ತಿರುವುದು ರೈತ ದ್ರೋಹಿ ಧೋರಣೆಯಾಗಿದೆ” ಎಂದು ಆರೋಪಿಸಿದರು.