ಈಗಾಗಲೇ ಕೃಷಿ ಬೆಳೆ ಬಹುತೇಕ ಒಣಗುವ ಹಂತ ತಲುಪಿವೆ. ಇದರಿಂದ ರೈತ ಸಾಲಗಾರನಾಗಿದ್ದಾನೆ. ಕೆಲವು ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗೆ ನೆರವು ನೀಡಿ, ರೈತರ ನಷ್ಟವನ್ನು ತಪ್ಪಿಸಲು ಹಿಡಕಲ್ ಜಲಾಶಯದಿಂದ ನೀರು ಹರಿಸಬೇಕು ಎಂದು ಕಬ್ಬು ಬೆಳೆಗಾರರು ಒತ್ತಾಯಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುದೋಳದಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ತಹಶೀಲ್ದಾರ್ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ ಸೂರಗಾವಿ, “ಘಟಪ್ರಭಾ ನದಿಯ ನೀರುನೀರು ಸಂಪೂರ್ಣ ಖಾಲಿಯಾಗಿ ಸುಮಾರು ನಲವತ್ತು ದಿನಗಳು ಕಳೆದಿವೆ. ಇದರಿಂದ ಘಟಪ್ರಭಾ ನದಿಯ ಅವಲಂಬಿತ ಮುಧೋಳ ಹಾಗೂ ಮಹಾಲಿಂಗಪೂರ ಪಟ್ಟಣಗಳು ಒಳಗೊಂಡಂತೆ ಸುಮಾರು 30 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಚಟುವಟಿಕೆಗೆ ನೀರು ಇಲ್ಲದ ಕಾರಣ ಇತರೆ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಇಂತಹ ಬೆಳೆಗಳಿಗೆ ಹಿಡಕಲ್ ಜಲಾಶಯದಿಂದ 2 ಟಿ.ಎಂ.ಸಿ ತಿಂಗಳಿಗೊಮ್ಮೆ ನೀರನ್ನು ಬಿಡಿಸಲು ನಮ್ಮ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆರ್.ಬಿ.ತಿಮ್ಮಾಪೂರ ಮೌಖಿಕವಾಗಿ ಹೇಳಿದರು ಇದೂವರೆಗೂ ಕ್ರಮ ಜರುಗಿಸದಿರುವುದು ಎಂದು ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ದುಂಡಪ್ಪ ಯರಗಟ್ಟಿ ಮಾತನಾಡಿ, “ಪ್ರಸಕ್ತ ವರ್ಷವು ಹಿಡಕಲ್ ಜಲಾಶಯದಲ್ಲಿ ಸುಮಾರು 36 ಟಿ.ಎಂ.ಸಿ ನೀರು ಇಲ್ಲಿಯವರೆಗೂ ಸಂಗ್ರಹವಿದ್ದರೂ ನಮ್ಮ ಜಿಲ್ಲೆಗೆ ಬರಬೇಕಾದಂತಹ ಘಟಪ್ರಭಾ ನದಿಯ ನೀರನ್ನು ಬಿಟ್ಟಿರುವುದಿಲ್ಲ. ಕಾರಣ ತಾಲೂಕ ಆಡಳಿತ ಹಾಗೂ ಜಿಲ್ಲಾಡಳಿತ ಇಂತಹ ಘಟನೆಗಳಿಗೆ ಆಸ್ಪದ ನೀಡದೇ ನ್ಯಾಯಬದ್ಧವಾಗಿ ನಮ್ಮ ನದಿಯ ನೀರನ್ನು ಈ ಕೂಡಲೇ ನೀರು ಹರಿಸಲು ಜರೂರು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಮುಧೋಳ ತಾಲೂಕಾ ರೈತರು ಹಾಗೂ ಕಾರ್ಮಿಕರು ಮತ್ತು ಜನಸಾಮಾನ್ಯರು ಸೇರಿ ಮುಧೋಳ ನಗರದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಮ್ ಡಿ ಗಾಯಕವಾಡ. ಮಹೇಶ ಗೌಡ ಪಾಟೀಲ್, ತಿಮಣ್ಣ ಬಟಗುಡಕ್, ಮುತ್ತು ಹೊಸಕೋಟೆ, ಎಸ್ ಎಸ್ ಅಕ್ಕಿ ರೈತರು ಉಪಸ್ಥಿತರಿದ್ದರು.