- ದಾವಣಗೆರೆ ನಗರ ಅಭಿವೃದ್ಧಿಗೆ ಮಾಜಿ ಶಾಸಕ, ಶ್ರಮಿಜೀವಿ ಪಂಪಾಪತಿ ಅವರ ಕೊಡುಗೆ ಅಪಾರ.
- ಸಾರಿಗೆ ಬಸ್ ನಿಲ್ದಾಣಕ್ಕೆ ಪಂಪಾಪತಿಯವರ ಹೆಸರನ್ನು ನಾಮಕರಣ ಮಾಡದಿದ್ದರೆ ಹೋರಾಟ ಅನಿವಾರ್ಯ
ದಾವಣಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ, ಕಾರ್ಮಿಕ ನಾಯಕ ಪಂಪಾಪತಿ ಅವರ ಹೆಸರು ನಾಮಕರಣ ಮಾಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆ ಮುಖಂಡ ಸತೀಶ್ ಅರವಿಂದ್, “ಇತಿಹಾಸದಲ್ಲಿ ದಾವಣಗೆರೆ ನಗರವು ಬೆಳವಣಿಗೆ ಹೊಂದಲು ಹಲವು ನಾಯಕರು ಶ್ರಮಿಸಿದ್ದಾರೆ. ಅದರಲ್ಲಿ ಅಗ್ರಗಣ್ಯವಾಗಿ ಶ್ರಮಜೀವಿ ಕಾ.ಪಂಪಾಪತಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ. 1960-61 ರಲ್ಲಿ ಮಿಲ್ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮಾಲಿಕ ವರ್ಗ ಮತ್ತು ತಾಲ್ಲೂಕು ಆಡಳಿತದ ವಿರುದ್ಧದ ಹೋರಾಟದಲ್ಲಿ ಕಾಂ.ಪಂಪಾಪತಿಯವರು ಹೋರಾಟ ಕೈಗೊಂಡಿದ್ದರು. 1974ರಲ್ಲಿ ನಗರಸಭೆ ಚುನಾವಣೆಯಲ್ಲಿ ಗೆದ್ದು ಸಂಪೂರ್ಣ ನಾಲ್ಕು ವರ್ಷ ನಗರಸಭೆಯ ಅಧ್ಯಕ್ಷರಾದ ಸಂದರ್ಭದಲ್ಲಿ ದಾವಣಗೆರೆ ನಗರದಲ್ಲಿ 6 ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡಿದ್ದು ಶ್ಲಾಘನೀಯವಾಗಿತ್ತು” ಎಂದರು.
“ಬಾತಿಕೆರೆಯನ್ನು ಶುದ್ದೀಕರಣಗೊಳಿಸಿ ದಾವಣಗೆರೆ ಜನತೆಗೆ ದಿನಕ್ಕೆ ಎರಡು ಬಾರಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಯುವಕರಿಗಾಗಿ ವ್ಯಾಯಾಮ ಶಾಲೆಗಳು ಮತ್ತು ಗರಡಿಮನೆ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು. ಅಂದಿನ ವ್ಯಾಯಾಮ ಶಾಲೆಗಳು ನಗರದಲ್ಲಿ ಈಗಲೂ ಕಾಣಬಹುದು. 1978ರಲ್ಲಿ ಶಾಸಕರಾಗಿ ಚುನಾಯಿತರಾದ ಮೇಲೆ ಮೊದಲ ಬಾರಿಗೆ ದಾವಣಗೆರೆಗೆ ಎರಡು ನಗರ ಸಾರಿಗೆ ಬಸ್ ನೀಡಿದ್ದರು, ದಾವಣಗೆರೆಯು ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗಾಗಿ ಈಗಿನ ಮಹಾನಗರ ಪಾಲಿಕೆಯ ಗಾಂಧೀಜಿ ಪ್ರತಿಮೆ ಮುಂಭಾಗ ಸತತ ಐದು ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ ಅಂದಿನ ಸರ್ಕಾರ ದಾವಣಗೆರೆ ನಗರಕ್ಕೆ ಕೆಎಸ್ಆರ್ಟಿಸಿ ಬಸ್ ಡಿಪೋ ಹಾಗೂ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿತ್ತು” ಎಂದರು.
ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಮಾತನಾಡಿ, “ಪಂಪಾಪತಿ ಹಲವು ಕಾರ್ಮಿಕ ನಾಯಕರನ್ನು ಮುನ್ನೆಲೆಗೆ ತಂದಿದ್ದು, ಅದೇ ಸಂದರ್ಭದಲ್ಲಿ ನಗರದಲ್ಲಿ 11 ಹೊಸ ಬಡಾವಣೆಯನ್ನು ನಿರ್ಮಾಣ ಮಾಡುವುದರ ಜೊತೆಗೆ 18 ಸಾವಿರ ಆಶ್ರಯ ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಿಕೆಮಾಡಿ ಸೂರು ಮಾಡಿಕೊಟ್ಟಿರುವುದು ಈಗ ಇತಿಹಾಸವಾಗಿದೆ. ಇದೇ ರೀತಿ ಹಲವು ಯೋಜನೆಗಳನ್ನು ದಾವಣಗೆರೆ ನಗರಕ್ಕೆ ಶ್ರಮಿಜೀವಿ ಪಂಪಾಪತಿ ಅವರ ಕೊಡುಗೆ ಅಪಾರ. ಮರು ನಿರ್ಮಾಣವಾಗುತ್ತಿರುವ ಸಾರಿಗೆ ಬಸ್ ನಿಲ್ದಾಣಕ್ಕೆ ಶ್ರಮಜೀವಿ ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ ಬಡವರಿಗೆ ನೆರವಾಗುವ ಆರೋಗ್ಯ ಕೇಂದ್ರಗಳು
“ಎರಡನೇ ಹಂತವಾಗಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳುವುದು, ಮೂರನೇ ಹಂತವಾಗಿ ಮುಖ್ಯಮಂತ್ರಿಗಳಿಗೆ ಸಾರಿಗೆ ಸಚಿವರಿಗೆ ಮತ್ತು ಜಿಲ್ಲಾ ಮಂತ್ರಿಗಳ ಬಳಿ ನಿಯೋಗ ಹೋಗುವುದು ಹಾಗೂ ನಾಲ್ಕನೇ ಹಂತವಾಗಿ ದೊಡ್ಡಮಟ್ಟದ ಹೋರಾಟವನ್ನು, ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆನಂದರಾಜು, ಮಹಮ್ಮದ್ ರಫೀಕ್, ಎಸ್. ರಾಜೇಂದ್ರ ಬಂಗೇರಾ ಉಪಸ್ಥಿತರಿದ್ದರು.