ಕಲುಷಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡದ ಪ್ರವಾಸಿ ಮಂದಿರದ ಹಿಂಭಾಗದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಿದ್ದಳು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು ಮತ್ತೆ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಈ ಪೈಕಿ ಆರು ವಿದ್ಯಾರ್ಥಿನಿಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 14 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಬಾಲಕಿಯರು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ. ಆಹಾರ ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥರಾದರು. ವಾಂತಿ, ಬೇಧಿ ಕಾಣಿಸಿಕೊಂಡಿತು. ಬಳಿಕ ಅಸ್ವಸ್ಥಗೊಂಡರು. ಆರು ವಿದ್ಯಾರ್ಥಿನಿಯರು ತೀವ್ರವಾಗಿ ಸುಸ್ತಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಮಧ್ಯಾಹ್ನ ಮಾಡಿದ್ದ ಚಿಕನ್ ಸಾಂಬಾರನ್ನೇ ರಾತ್ರಿಗೂ ಉಣಬಡಿಸಲಾಗಿತ್ತು. ಬೆಳಿಗ್ಗೆ ಪಲಾವ್ ಮಾಡಲಾಗಿತ್ತು. ಇದನ್ನು ಸೇವಿಸಿದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಹಾಸ್ಟೆಲ್ನಲ್ಲಿ ಗುಣಮಟ್ಟದ ಅಡುಗೆ ಮಾಡುವುದಿಲ್ಲ. ಬೆಳಿಗ್ಗೆ ಉಳಿದ ಅಡುಗೆ ಮಧ್ಯಾಹ್ನ, ಮಧ್ಯಾಹ್ನ ಉಳಿದರೆ ರಾತ್ರಿಗೆ ಕೊಡಲಾಗುತ್ತಿದ್ದು, ಇದರಿಂದ ಯಾರೂ ಸಹ ಊಟ ಮಾಡಲ್ಲ. ಊಟ ಮಾಡಿದವರು ಅಸ್ವಸ್ಥಗೊಂಡಿದ್ದಾರೆ” ಎಂದು ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.
“ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಳಪೆ ಊಟ ನೀಡುತ್ತಿರುವುದೇ ಕಾರಣ. ಹಾಸ್ಟೆಲ್ ವಾರ್ಡನ್ ಅವರು ಈ ಬಗ್ಗೆ ಯಾವುದೇ ನಿಗಾ ವಹಿಸುತ್ತಿಲ್ಲ. ಗುಣಮಟ್ಟದ ಆಹಾರ ನೀಡಲಾಗುತ್ತಿಲ್ಲ. ಕೊಳೆತ ತರಕಾರಿ ಸೇರಿದಂತೆ ಉತ್ತಮ ಊಟ ನೀಡದ ಕಾರಣ ಆಗಾಗ್ಗೆ ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ 20 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಹಾಸ್ಟೆಲ್ ವಾರ್ಡನ್ ವಿರುದ್ದ ಕ್ರಮ ಕೈಗೊಳ್ಳಬೇಕು. ಬೇರೆ ಕಡೆಗೆ ವರ್ಗಾವಣೆ ಮಾಡಬೇಕು” ಎಂದು ಪೋಷಕರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ತಲುಪಿದೆ: ಚಲುವರಾಯಸ್ವಾಮಿ
“ಹಾಸ್ಟೆಲ್ನಲ್ಲಿನ ಪರಿಸ್ಥಿತಿ ಕುರಿತಂತೆ ತಿಳಿಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಹಾಸ್ಟೆಲ್ನಲ್ಲಿನ ಅವ್ಯವಸ್ಥೆ ಕುರಿತಂತೆ ಮಕ್ಕಳ ಬಳಿ ಕೇಳಿದರೆ ಹೇಳುತ್ತಾರೆ. ಯಾವ ರೀತಿಯ ಊಟ ಕೊಡಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಸ್ಥಳಕ್ಕೆ ಬಂದು ಪರಿಶೀಲಿಸಿ, ತಪ್ಪು ಎಸಗಿದ್ದರೆ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.