ಅಪಾಯದ ಅಂಚಿನಲ್ಲಿರುವ ತುಂಗಭದ್ರ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಿ ಹಾಗೂ ನದಿ ಖರಾಬು ಜಮೀನನ್ನು ರಕ್ಷಿಸುವ ಮೂಲಕ ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜೀವ ನದಿಯಾಗಿರುವ ತುಂಗಭದ್ರೆಯನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹರಿಹರ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತಹಶೀಲ್ದಾರರಿಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು “ತುಂಗಭದ್ರ ನದಿಯು ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜೀವ ನದಿಯಾಗಿದೆ. ಕಳೆದ ಎರಡು ದಶಕಗಳಿಂದ ಸಕ್ರಮ ಹಾಗೂ ಅಕ್ರಮ ವಿಧಾನದಲ್ಲಿ ಅತಿಯಾದ ಮರಳುಗಾರಿಕೆ ನಡೆಸಿರುವುದು ಹಾಗೂ ನದಿ ದಡದ ನದಿ ಖರಾಬ್ ಪ್ರದೇಶದ ಜಮೀನಿನಲ್ಲಿಯೂ ಅತಿಯಾದ ಮಣ್ಣು ಗಣಿಗಾರಿಕೆ ನಡೆಸಿದ ಪರಿಣಾಮ ಈ ನದಿಯ ಅಸ್ತಿತ್ವಕ್ಕೆ ತೀವ್ರ ಅಪಾಯ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ನದಿಯು ಹರಿದು ಬರುವ ಪ್ರದೇಶಗಳ ಬ್ಲಾಕ್ಗಳಿಗೆ ಸರ್ಕಾರದಿಂದಲೆ ಮರಳುಗಾರಿಕೆ ನಡೆಸಲು ಟೆಂಡರ್ ನೀಡಲಾಗುತ್ತಿದೆ. ಬಹುತೇಕ ಟೆಂಡರ್ ದಾರರು ನಿಯಮ ಉಲ್ಲಂಘಿಸಿ ನದಿಯ ಒಡಲನ್ನು ಬಗೆದು ನಿಯಮ ಬಾಹಿರವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಉಳಿದಂತೆ ಟೆಂಡರ್ ಪ್ರದೇಶಕ್ಕೆ ಒಳಪಡದ ಪ್ರದೇಶಗಳಲ್ಲಿ ಹಾಗೂ ಟೆಂಡರ್ ಅವಧಿ ಮುಗಿದ ನಂತರವೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅತಿಯಾದ ಮರಳುಗಾರಿಕೆ ನದಿ ದಡ ಹಾಗೂ ನದಿ ಒಡಲಿನ ರಚನೆಯನ್ನೆ ಹದಗೆಡಿಸಿದೆ, ನದಿ ಪಾತ್ರದಲ್ಲಿ ಮರಳಿಗಾಗಿ 10 ರಿಂದ 20 ಅಡಿ ಆಳದವರೆಗೆ ಗುಂಡಿಗಳನ್ನು ತೋಡಿದ್ದು ಜಲಚರ ಪ್ರಾಣಿಗಳಿಗೆ, ನದಿಯನ್ನು ಆಶ್ರಯಿಸಿದ ಜನ ಜಾನುವಾರುಗಳ ಅಸ್ತಿತ್ವಕ್ಕೆ ತೀವ್ರ ಧಕ್ಕೆ ಒದಗಿಸಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಜಾರಿಗೆ ತರದೇ ಸರ್ಕಾರ ವಂಚನೆ; ಮಾದಿಗ ಸಂಘಟನೆಗಳ ಒಕ್ಕೂಟ.
“ನದಿಗೆ ಇಳಿಯುವ ಅಸಂಖ್ಯಾತ ಜನ, ಜಾನುವಾರುಗಳು ಈ ಗುಂಡಿಗಳಲ್ಲಿ ಸಿಲುಕಿ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಉಳಿದವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ”
“ನದಿಯ ನೂರಾರು ಎಕರೆ ನದಿ ಖರಾಬ್ ಜಮೀನಿನ ಫಲವತ್ತಾದ ಮಣ್ಣು, ಗಿಡಗಂಟಿ, ಕುರುಚಲು ಕಾಡು ಮಣ್ಣು ಮಾಫಿಯಾಕ್ಕೆ ಬಲಿಯಾಗಿದೆ, ಅಕ್ರಮ ಹಾಗೂ ಅತಿಯಾದ ಮಣ್ಣು ಗಣಿಗಾರಿಕೆಯಿಂದಾಗಿ ಈ ನದಿಯ ಬಹುತೇಕ ನದಿ ಖರಾಬ್ ಜಮೀನು 10 ರಿಂದ 20 ಅಡಿ ಆಳದ ಗುಂಡಿಮಯವಾಗಿದೆ. ಮಣ್ಣು ಮಾಫಿಯಾಕ್ಕೆ ನದಿ ದಡದ ಹಲವು ರುದ್ರಭೂಮಿ, ಖಬರಸ್ತಾನ್ಗಳು ಅಸ್ತಿತ್ವ ಕಳೆದುಕೊಂಡಿವೆ. ನದಿಗೆ ತಲುಪಲು ಇದ್ದ ಬಂಡಿ ರಸ್ತೆ ಕಾಲುದಾರಿಗಳು ಮಾಯವಾಗಿವೆ, ಒಟ್ಟಾರೆ ನೂರಾರು ವರ್ಷಗಳಿಂದ ಮಧ್ಯ ಮತ್ತು ಕಲ್ಯಾಣ ಕರ್ನಾಟಕದ ಜೀವ ನದಿ ಎನಿಸಿದ ಈ ನದಿಯು ಅಳಿವಿನ ಅಂಚಿಗೆ ತಲುಪುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರದ ಆದಾಯಕ್ಕೆ ತೊಂದರೆಯಾದರೂ, ನದಿಯನ್ನು ಸಂರಕ್ಷಿಸಲು 10 ವರ್ಷಗಳ ಅವಧಿಗೆ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಹಾಗೂ ನದಿ ಖರಾಬ್ ಜಮೀನಿನ ರಕ್ಷಣೆಗಾಗಿ ಸೂಕ್ತ ತುರ್ತು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.
ಮನವಿ ಸಲ್ಲಿಸುವ ವೇಳೆ ಹರಿಹರ ತಾಲೂಕಿನ ಸಂಚಾಲಕ ಮಹಾಂತೇಶ ಪಿಜೆ, ಚೌಡಪ್ಪ ಸಿ ಭಾನುವಳ್ಳಿ, ಗ್ರಾಮ ಪಂಚಾಯತಿ ಸದಸ್ಯ ಮಂಜಪ್ಪ , ರಾಜಪ್ಪ. ಬೆಣ್ಣಿ ರಾಜಪ್ಪ, ಚೌಡಪ್ಪ ಸ್ವಾಮಿ, ಲಿಂಗಪ್ಪ.ಎಸ್, ಪರಶುರಾಮ್ ಜಿಗಳಿ, ಹನುಮಂತ್ ರಾಜ್ ಎಲವಟ್ಟಿ, ಕೀರ್ತಿ ಟಿ. ರಾಜು. ಮಹೇಶ್, ಸೋಮಶೇಖರ್, ಪರಶುರಾಮ್, ಯುವರಾಜ್ ಹೊಸಪಾಳ್ಯ, ತಿಮ್ಮಣ್ಣ ಕಡ್ಲಿಗುಂದಿ. ಹಾಗೂ ಇತರರು ಹಾಜರಿದ್ದರು.