“ದೇಶದ ಮುಂದಿನ ಭವಿಷ್ಯವೇ ಇಂದಿನ ಮಕ್ಕಳು. ಹಾಗಾಗಿ ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಅವಕಾಶ ನೀಡುವ ಅಗತ್ಯತೆ ಇದೆ”ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರತಿಪಾದಿಸಿದರು. ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲಯ ಕಾಲೇಜಿನ ಮಕ್ಕಳ ಥೀಮ್ ಪಾರ್ಕ್ ನಲ್ಲಿ ಜವಾಹರ್ ಬಾಲ್ ಮಂಚ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳಿಗೆ ಪರಿಸರ, ನೀರು ಸಂರಕ್ಷಣೆ ಬಗ್ಗೆ ತಿಳಿಸಿ. ಹಿರಿಯರನ್ನು ಗೌರವಿಸುವ ಬಗ್ಗೆ ಹೇಳಿಕೊಡಿ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಿ” ಎಂದು ಸಲಹೆ ನೀಡಿದರು.
“ಇತ್ತೀಚೆಗೆ ಸಮಾಜದ ಎಲ್ಲಾ ಜನರು ರಾಜಕೀಯದ ಜಂಜಾಟದಲ್ಲಿ ಮುಳುಗಿ ಹೋಗಿದ್ದಾರೆ. ಇದೆಲ್ಲದರ ನಡುವೆ ರಾಜಕೀಯದ ಪ್ರಭಾವವಿಲ್ಲದೆ ಕೇವಲ ಮಕ್ಕಳಿಗಾಗಿ ಅನೇಕ ಸಮಾಜಮುಖಿ ಕೆಲಸಗಳು ಹೆಚ್ಚಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಜವಾಹರ್ ಬಾಲ್ ಮಂಚ್ ಏರ್ಪಡಿಸಿರುವ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ” ಮೆಚ್ಚುಗೆ ವ್ಯಕ್ತಪಡಿಸಿದರು.

“ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಂವಿಧಾನ, ಮಕ್ಕಳ ಹಕ್ಕು, ಹಾಗೂ ಇನ್ನಿತರ ಮಕ್ಕಳ ಉಪಯೋಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಂಥ ಅತ್ಯುತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಅತ್ಯುತ್ತಮ ಕೆಲಸ. ಇಂಥ ಅನೇಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ಸ್ಫೂರ್ತಿ ತುಂಬುತ್ತಿರುವ ಜವಾಹರ್ ಬಾಲ್ ಮಂಚ್ ಸಂಘಟನೆ ಒಂದು ಉತ್ತಮ ಮಕ್ಕಳ ಸ್ನೇಹಿ ಸಂಘಟನೆಯಾಗಿದೆ. ಸಂಘಟಕರು ಉಪಯುಕ್ತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇಂಥ ಸಂಘಟನೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕು” ಎಂದು ಆಶಿಸಿದರು.

ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200ರಿಂದ 300 ಮಕ್ಕಳು ಆಗಮಿಸಿದ್ದರು. ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ಪ್ರಬಂಧ, ಕರಾಟೆ, ಹಾಡುಗಾರಿಕೆ, ಭಾಷಣ, ವೇಷಭೂಷಣ,ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಖುಷಿಪಟ್ಟರು. ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ಇದೇ ವೇಳೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಪ್ರಿಲ್ 26ಕ್ಕೆ ಸಂವಿಧಾನ ಸಂರಕ್ಷಣಾ ಸಮಾವೇಶ, ಚನ್ನಗಿರಿಯಲ್ಲಿ ಕರಪತ್ರ ಬಿಡುಗಡೆ.
ಮಕ್ಕಳೋತ್ಸವದಲ್ಲಿ ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮದ್ ಜಿಕ್ರಿಯಾ, ರಾಜ್ಯಾಧ್ಯಕ್ಷ ಮೈನುದ್ದಿನ್, ಜವಾಹರ್ ಬಾಲ್ ಮಂಚ್ ರಾಷ್ಟ್ರೀಯ ಸಂಯೋಜಕ ಜಯ ಕುಮಾರ್ ಪಿಳ್ಳಯ್ , ದಾವಣಗೆರೆ ಉಸ್ತುವಾರಿ ಸೋಮಶೇಖರ್, ಮಂಚ್ ನ ಪದಾಧಿಕಾರಿಗಳಾದ ಪ್ರೇಮ ಕೆ. ಹೆಚ್., ಶಿಲ್ಪಾ ಪರಶುರಾಮ್, ಫಯಾಜ್ ಅಹ್ಮದ್, ನಾಗರಾಜ್, ಮಂಜುನಾಥ, ದರ್ಶನ್, ಪ್ರವೀಣ್, ವೀರೇಶ್, ಆಫ್ರಿದ್, ತೇಜಸ್ವಿ,ಹಾಗೂ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲಾ ಅಧ್ಯಕ್ಷರು, ವಿದ್ಯಾ ಸಾಗರ ಶಾಲೆಯ ಎನ್. ಎಂ. ಪ್ರಜ್ಞಾ ಸೇರಿದಂತೆ ನೂರಾರು ಮಕ್ಕಳು ಹಾಜರಿದ್ದರು.