“ಕಾಡಿನ ಸಂರಕ್ಷಣೆ ಮಾಡಬೇಕು ಎಂದರೆ ಮನುಷ್ಯ ಕಾಡಿನೊಳಗೆ ಕಾಲಿಡಬಾರದು. ಆಗ ಕಾಡು ತಂತಾನೆ ರಕ್ಷಿಸಲ್ಪಡುತ್ತದೆ. ಸಂಸ್ಕೃತಿಯ ಪರಿವೇ ಇಲ್ಲದೆ ಅಭಿವೃದ್ಧಿಯನ್ನು ಕಟ್ಟುವ ಬಗೆ ಒಂದು ವಿನಾಶಕಾರಿ ಪ್ರವೃತ್ತಿ” ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ದಿನಮಾನ ಪ್ರಕಾಶನ, ಲಡಾಯಿ ಪ್ರಕಾಶನ, ಮೇ ಸಾಹಿತ್ಯ ಬಳಗ ದಾವಣಗೆರೆ, ಶ್ರಮಿಕಾ ಪ್ರಕಾಶನ, ಜನಸೇವಾ ಪೌಂಡೇಶನ್ 9 ಫೆಬ್ರುವರಿ 2025ರಂದು ದಾವಣಗೆರೆಯ ನಿವೃತ್ತ ಪೊಲೀಸ್ ನೌಕರರ ಭವನದಲ್ಲಿಆಯೋಜಿಸಿದ್ದ ಬಿ.ಶ್ರೀನಿವಾಸರ ʼಸಂಡೂರಿನ ಕಗ್ಗತ್ತಲೆಯ ಕಥನಗಳುʼ ʼಸಂವಿಧಾನದ ಮೂಲ ಸ್ವರೂಪ ಮತ್ತು ಕೇಶವಾನಂದ ಭಾರತಿʼ ಪ್ರಕರಣ ಸೇರಿದಂತೆ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ, ಪುಸ್ತಕ ಕುರಿತು ಮಾತನಾಡಿದ ಅವರು, “ನಾನು ಸಂಡೂರನ್ನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಈ ಪುಸ್ತಕ ಸಂಡೂರಿನ ಇತಿಹಾಸ ಮತ್ತು ದುರಂತಕ್ಕೆ ಒಂದು ಕೈಗನ್ನಡಿಯಾಗಿದೆ. ಆ ಬೆಟ್ಟಗಳಲ್ಲಿ ನಡೆಯುವ ಗಣಿಗಾರಿಕೆ ಕೆಲಸಗಳು, ಗಣಿಗಾರಿಕೆಯಿಂದ ಎದ್ದ ಕೆಂಪು ಧೂಳು ಮಳೆಗಾಲದಲ್ಲಿ ರಕ್ತವಾಗಿ ಹರಿಯುತ್ತದೆ ಎನ್ನುವ ರೀತಿಯ ರೂಪಕವನ್ನು ಅತ್ಯಂತ ಮಾರ್ಮಿಕವಾಗಿ ಲೇಖಕರು ಕೃತಿಯಲ್ಲಿ ದಾಖಲಿಸಿದ್ದಾರೆ. ಏನನ್ನು ಬರೆಯುತ್ತೇವೆ, ಯಾವ ಕಾರಣಕ್ಕಾಗಿ ಬರೆಯುತ್ತಿದ್ದೇವೆ ಮತ್ತು ಆ ಬರವಣಿಗೆಯಿಂದ ಜನಸಾಮಾನ್ಯರ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವ ಅರಿವು ಲೇಖಕನಿಗೆ ಇರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಿಕ್ಷಣಕ್ಕೆ ಯಾವುದೇ ಧರ್ಮ, ಜಾತಿ, ಪಂಥ, ಪಕ್ಷ ಭೇದವಿಲ್ಲ: ಮಧು ಬಂಗಾರಪ್ಪ
“21ನೇ ಶತಮಾನದ ಅತಿ ದೊಡ್ಡ ದುರಂತ ಎಂದರೆ ಸಣ್ಣ ಸಣ್ಣ ಸಮುದಾಯಗಳು ನಶಿಸಿ ಹೋಗುತ್ತಿರುವುದು. ದೊಡ್ಡಸಮುದಾಯಗಳು, ಬಂಡವಾಳಶಾಹಿಗಳು, ಬಲಾಢ್ಯರು ಸಣ್ಣ ಸಮುದಾಯಗಳನ್ನು ಅವರು ಇಲ್ಲವೇ ಇಲ್ಲ ಎನ್ನುವ ರೀತಿ ಮಾಡುತ್ತಿದ್ದಾರೆ. 20ನೇ ಶತಮಾನದಲ್ಲಿದ್ದ ಕೊರಗ ಸಮುದಾಯದ ಜನಸಂಖ್ಯೆ 60,000. 2011 ರ ಜನಗಣತಿಯ ಪ್ರಕಾರ ಕೊರಗ ಮಾತಾಡುವವರ ಜನಸಂಖ್ಯೆ ಕೇವಲ 2,000 ಇದೆ. ಮುಂದಿನ ಐವತ್ತು ಅರವತ್ತು ವರ್ಷಗಳಲ್ಲಿ ಈ ಸಮುದಾಯ ಕಾಣೆಯಾಗಲಿದೆ ಎಂದು ವರದಿ ಇದೆ. ಇದೇ ರೀತಿ ಹಲವು ಸಣ್ಣ ಸಣ್ಣ ಸಮುದಾಯಗಳ ಸ್ಥಿತಿಯಿದೆ. ತಮ್ಮ ತಮ್ಮ ಗ್ರಾಮಗಳಲ್ಲಿ ಹಲವು ಸಮುದಾಯಗಳು ತಮ್ಮ ದೇವರುಗಳನ್ನು ತಾವೇ ಪೂಜಿಸುವ ಸ್ಥಿತಿಯಿಂದ ಮನೆಯೊಳಗೊಂದು ರಾಮನ ಪಟವನ್ನು, ಊರಿನೊಳಗೊಂದು ರಾಮನ ದೇವಸ್ಥಾನವನ್ನು ಕಟ್ಟಿ, ಅದಕ್ಕೊಬ್ಬ ಪೂಜೆಗೆ ಬಂದಾಗ, ತಮ್ಮ ಸಮುದಾಯದ ಅಂತಸತ್ವವನ್ನು ಕಳೆದುಕೊಂಡು ಅವನತಿಯತ್ತ ಸಾಗುತ್ತವೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಬಲಿಷ್ಠ ಸಮುದಾಯಗಳ ರಾಜಕೀಯ ಶಕ್ತಿ, ಆರ್ಥಿಕ ಶಕ್ತಿ, ಅನುಸರಿಸುವ ಧಾರ್ಮಿಕ ಶ್ರದ್ಧೆಗಳಿಂದ ಸಣ್ಣ ಸಮುದಾಯಗಳು ಸ್ಥಿತ್ಯಂತರಗೊಂಡು ನಾಶವಾಗುತ್ತಿವೆ. ಈ ರೀತಿ ಸಮುದಾಯಗಳ ನಾಶದ ಕುರಿತ ಉಲ್ಲೇಖವನ್ನು ಲೇಖಕರು ಕೃತಿಯಲ್ಲಿ ಸೂಚ್ಯವಾಗಿ ನಮೂದಿಸಿದ್ದಾರೆ. ನಮ್ಮಲ್ಲಿ ಪ್ರಕೃತಿಯನ್ನು ರಕ್ಷಿಸಲು ದೈವಗಳನ್ನು ಮಾಡಿಕೊಂಡಿದ್ದೇವೆ. ದೈವಗಳೇ ಇಂದು ಕಲುಷಿತಕೊಂಡಿವೆ. ಇಂದು ಮತ್ತೊಂದು ದೊಡ್ಡ ಅನಾಹುತ ಪ್ರಕೃತಿ ನಾಶ ಆಗುತ್ತಿರುವುದು. ನದಿಗಳನ್ನು ತಿರುಗಿಸುವುದು, ಕಾಡನ್ನು ಕಡಿಯುತ್ತಿರುವುದು, ಅಭಿವೃದ್ಧಿ ಹೆಸರಿನಲ್ಲಿ ಪರಿಸರದ, ಕಾಡಿನ ನಿರಂತರ ನಾಶ ನಡೆಯುತ್ತಿದೆ. ಕುಡಿಯುವ ನೀರು ಎಂದು ತೋರಿಸಿ ಕೋರ್ಟುಗಳಿಗೂ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಂಕಿ ಅಂಶಗಳಲ್ಲೂ ಕೂಡ ಇಂದು ನಾವು ಸರ್ಕಾರವನ್ನು ನಂಬುವ ಸ್ಥಿತಿಯಲ್ಲಿಲ್ಲ. ಎನ್ ಜಿ ಓ ಸಂಸ್ಥೆಗಳು, ಸರ್ಕಾರ ಕೊಡುವ ಅಂಕಿ ಅಂಶಗಳೇ ಬೇರೆಯಾಗಿರುತ್ತದೆ. ಇಂದು ಸರ್ಕಾರ ಹೇಳುವ ಪ್ರಕಾರ ಕರ್ನಾಟಕದಲ್ಲಿ ಕಾಡಿನ ಪ್ರದೇಶ ಶೇಕಡ 20.1ರಷ್ಟು, ಆದರೆ ಅಂಕಿ ಅಂಶಗಳನ್ನು ತೋರಿಸುವ ಸ್ವತಂತ್ರ ಸಂಸ್ಥೆಗಳು 9.2% ರಷ್ಟು ಮಾತ್ರ ಕಾಡು ಉಳಿದಿದೆ ಎಂದು ತೋರಿಸುತ್ತಾರೆ. ಹಾಗಾಗಿ ಇಂದು ಸರ್ಕಾರ ಕೊಡುವ ಕೊರೋನಾ, ಭಾಷೆಗೆ ಸಂಬಂಧಪಟ್ಟ ಅನುದಾನ, ಕಾಡು ಮತ್ತು ಯೋಜನೆಗಳಿಗೆ ಕೊಡುವ ಅಂಕಿ ಅಂಶಗಳನ್ನು ನಂಬುವ ಸ್ಥಿತಿಯಲ್ಲಿ ನಾವು ಇಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್, ಲೇಖಕ ಬಿ ಶ್ರೀನಿವಾಸ್, ಸಾಹಿತಿಗಳಾದ ಲಕ್ಷ್ಮಣ ಹೂಗಾರ್, ಡಾಕ್ಟರ್ ಜಾಜಿ ದೇವೇಂದ್ರಪ್ಪ, ಸತೀಶ್ ಕುಲಕರ್ಣಿ, ಅಬ್ದುಲ್ ಗಣಿ ತಾಹಿರ್, ಅನ್ವೇಷಣೆ ಪತ್ರಿಕೆಯ ಆರ್ ಜಿ ಹಳ್ಳಿ ನಾಗರಾಜ್, ಕುವೆಂಪು ವಿವಿಯ ಪ್ರಾಧ್ಯಾಪಕಿ ಹಸೀನಾ ಹೆಚ್ ಕೆ, ಹಿರಿಯ ಚಿಂತಕ ಬಿ ಎಂ ಹನುಮಂತಪ್ಪ, ಲಡಾಯಿ ಪ್ರಕಾಶನದ ಬಸವರಾಜು ಸೂಳಿಭಾವಿ, ದಿನಮಾನ ಪ್ರಕಾಶನದ ಎಚ್ ಎನ್ ಪ್ರಕಾಶ್, ಶ್ರಮಿಕಾ ಪ್ರಕಾಶನದ ಮಾಲತೇಶ್ ಅಂಗೂರು, ತಳಮಳ ಪ್ರಕಾಶನದ ಮಹೇಶ್ ಬಳ್ಳಾರಿ, ಜನ ಸೇವಾ ಫೌಂಡೇಶನ್ ನ ಎ ಫಕ್ರುದ್ದೀನ್, ಶಿಕ್ಷಕ ನಾಗರಾಜ್, ಗುರುಸಿದ್ಧಸ್ವಾಮಿ, ಅಲ್ಲಾಭಕ್ಷಿ, ಪರಶುರಾಮ ಕಲಾಲ್, ಶಿವಕುಮಾರ್, ಲೋಹಿಯಾ ಚನ್ನಬಸವಣ್ಣ, ಟಿ ಆರ್ ವೆಂಕಟೇಶ್, ಪೀರ್ ಬಾಷಾ, ಹುಲಿಕಟ್ಟಿ ಚನ್ನಬಸಪ್ಪ, ಡಿಬಿ ಬಡಿಗೇರ ಹಾಗೂ ದಲಿತ, ಕಾರ್ಮಿಕ, ಸಾಹಿತ್ಯ ಸಂಘಟನೆಗಳ ಕಾರ್ಯಕರ್ತರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
