ಗ್ರಾಮಗಳ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ, ಸಾಗುವಳಿ ಚೀಟಿ ಮತ್ತು ಬ್ಯಾಂಕ್ ಗಳ ಸಾಲ ವಸೂಲಾತಿ ಮೊಕದ್ದಮೆ , ಅತಿವೃಷ್ಟಿಯಿಂದ ತರಕಾರಿ ಬೆಳೆಗಳ ನಾಶ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವನಹಳ್ಳಿ ಮಂಜುನಾಥ ಬಣ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪರಿಹಾರಕ್ಕೆ ಒತ್ತಾಯಿಸಿತು.
ದಾವಣಗೆರೆ ನಗರದ ಜಯದೇವ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಘೋಷಣೆಗಳನ್ನು ಕೂಗಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಮಂಜುನಾಥ್, ಜಿಲ್ಲೆಯಲ್ಲಿ ಸಾವಿರಾರು ಸಾಗುವಳಿದಾರರ ಅರಣ್ಯ ಭೂಮಿ ಹಕ್ಕು ಅರ್ಜಿಗಳು ಬಾಕಿ ಉಳಿದಿದ್ದು ಅರಣ್ಯ ಸಮಿತಿ ಸಭೆ ಕರೆದು ಹಕ್ಕುಪತ್ರಗಳನ್ನು ನೀಡಬೇಕು ಮತ್ತು ಮುಖ್ಯವಾಗಿ ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಅಧಿನಿಯಮ 75 ವರ್ಷಗಳ ಸಾಕ್ಷಿ ದಾಖಲೆ ಕೇಳಿದ್ದು ಇದನ್ನು 25 ವರ್ಷಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ಸಾಲ ವಸೂಲಾತಿ ಬ್ಯಾಂಕ್ ಗಳು ದೂರದ ಕೊಲ್ಕತ್ತಾ ಮದ್ರಾಸ್, ಬಾಂಬೆ, ಬೆಂಗಳೂರು ಇಂತಹ ಕಡೆ ರೈತರು ಸಾಲಕಟ್ಟಿಲ್ಲ ಎಂದು ಅಲ್ಲಿನ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಿದ್ದು ಅಲ್ಲಿಗೆ ರೈತರು ಹೋಗಿ ವಾದ ಮಾಡಲು ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ, ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಬ್ಯಾಂಕ್ಗಳಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಧಾವೆಗಳನ್ನು ಹೂಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ನಿವೇಶನ ರಹಿತರಿಗೆ ನಿವೇಶನ ಮತ್ತು ಬಗರ್ ಹುಕುಂ ಸಮಿತಿಗಳನ್ನು ಸಮಿತಿಗಳನ್ನು ರಚಿಸಿ ಹಕ್ಕು ಪತ್ರಗಳನ್ನು ನೀಡಬೇಕು ಮತ್ತು ಮತ್ತು ದಾವಣಗೆರೆ ಆಂಜನೇಯ ನಗರದ 200ಕ್ಕೂ ಹೆಚ್ಚಿನ ಮನೆಗಳ ಇ-ಸ್ವತ್ತು ಖಾತೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಚೆನ್ನಗಿರಿ ತಾಲೂಕಿನಲ್ಲಿ ಗೌಳಿ ಜನಾಂಗದವರು ಕಾಡಿನಲ್ಲಿ ಬಹಳ ವರ್ಷಗಳಿಂದ ದನಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ತೊಂದರೆ ಕೊಡುತ್ತಿದ್ದು ಇವರನ್ನು ಕಾಡಿನಿಂದ ಹೊರದಬ್ಬಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ನಾಡು ಗೊತ್ತಿಲ್ಲದ ಇವರಿಗೆ ಕಾಡಂಚಿನಲ್ಲಿ ಸರ್ಕಾರಿ ಜಮೀನಿನಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು 45 ದಿನದೊಳಗೆ ಪರಿಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಾರು ರೈತರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು
ಪ್ರತಿಭಟನೆಯಲ್ಲಿ ಎಲೊದಹಳ್ಳಿ ರವಿಕುಮಾರ್, ಚಿರಂಜೀವಿ ಚಿಕ್ಕಮಲ್ಲನಹೊಳೆ, ರಾಜು, ಹೂವಿನ ಮಡ ನಾಗರಾಜ್, ಅಸ್ಥಾಪನಹಳ್ಳಿ ಗಂಡುಗಲಿ, ಕುಮಾರ ಕೋಗಲೂರು, ಪರಶುರಾಮ, ಹನುಮಂತ, ರುದ್ರಪ್ಪ, ಕೃಷ್ಣಮೂರ್ತಿ ಶಿವಪುರ, ಕುರ್ಕಿ ಹನುಮಂತ, ಹುಚ್ಚೇವನಹಳ್ಳಿ ಪ್ರಕಾಶ್, ಸಹದೇವರಡ್ಡಿ ಜಗಳೂರು, ಶರಣಮ್ಮ, ಸತೀಶ್ ಹಾಗೂ ಇನ್ನಿತರ ನೂರಾರು ರೈತರು ಭಾಗವಹಿಸಿದ್ದರು
