“ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕಿಡಿಗೇಡಿಗಳ ಒತ್ತಡಕ್ಕೆ ಮಣಿಯದೆ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿಯನ್ನು ಆಗಸ್ಟ್ 15ರೊಳಗೆ ಜಾರಿಗೊಳಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸಿಎಂ ಶವ ಯಾತ್ರೆ ನೆಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು “ಎಂದು ಮಾದಿಗೆ ಮಹಾಸಭೆ ಹಾಗೂ ದಲಿತ ಸಂಘರ್ಷ ಸಮಿತಿಯ ನ ಟಿ.ರವಿಕುಮಾರ್ ಹಾಗೂ ಪಂಜು ಪೈಲ್ವಾನ್ ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 1 ಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷವಾದರೂ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ಕಾಲಹರಣ ಮಾಡುತ್ತಿದೆ. ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಿದೆ. ಆದರೆ ವರದಿಯ ಶಿಫಾರಸ್ಸನ್ನು ಜಾರಿ ಮಾಡಲು ಮುಂದಾಗದೇ ಮತ್ತೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನಾಯಕತ್ವದ ಗುಣ ತೋರಿಸುವಲ್ಲಿ ವಿಫಲರಾಗಿದ್ದಾರೆ. ನ್ಯಾ ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ಅನ್ವಯ ಒಳ ಮೀಸಲಾತಿ ಜಾರಿ ಮಾಡುವ ತೀರ್ಮಾನವನ್ನು ಘೋಷಿಸಬೇಕಿತ್ತು. ಆದರೆ ನಮ್ಮ ಈ ನಿರೀಕ್ಷೆ ಹುಸಿಯಾಗಿದೆ” ಎಂದು ಹೇಳಿದರು.
“ಸದಾಶಿವ ಆಯೋಗ, ನ್ಯಾ ಮಾಧುಸ್ವಾಮಿ ಆಯೋಗ ಮತ್ತು ಈಗ ನ್ಯಾ. ನಾಗಮೋಹನ ದಾಸ್ ಆಯೋಗ ಎಲ್ಲ ಮೂರೂ ಆಯೋಗಗಳು ಕರ್ನಾಟಕದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹ ಎಂದು ಸ್ಪಷ್ಟವಾಗಿ ಹೇಳಿವೆ. ಈ ಎಲ್ಲಾ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ 6% ಮೀಸಲಾತಿಯನ್ನು ನಿಗದಿಪಡಿಸಿವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಮಾದಿಗರ ಪಾಲಿನ 6% ಮೀಸಲಾತಿಯನ್ನು ಪ್ರತ್ಯೇಕಿಸಿ ಘೋಷಿಸಲಿ. ಉಳಿದ ಹಂಚಿಕೆಯನ್ನು ನಿಧಾನವಾಗಿ ಮಾಡಲಿ” ಎಂದು ಆಗ್ರಹಿಸಿದರು.
“ಕರ್ನಾಟಕ ಸರ್ಕಾರ ಮಾದಿಗರಿಗೆ ಪ್ರತ್ಯೇಕ ಶೇ 6ರ ಮೀಸಲಾತಿಯನ್ನು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಘೋಷಿಸಬೇಕು. ಇಲ್ಲವಾದ್ದರೆ ಮತ್ತೆ ಮಾದಿಗೆ ಸಂಬಂಧಿತ ಜಾತಿಗಳು ಉಗ್ರ ಹೋರಾಟಕ್ಕೆ ಬೀದಿಗೆ ಇಳಿಯಲಿದ್ದೇವೆ ಎಂದು ಎಚ್ಚರಿಕೆ ಕೊಡುತ್ತಿದ್ದೇವೆ. ನಾಗಮೋಹನ್ ನ್ಯಾಯಮೂರ್ತಿ ದಾಸ್ ವರದಿಯನ್ನು ಸುಟ್ಟು ಹಾಕಿರುವ ಕಿಡಿಗೇಡಿಗಳ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಇದೇ ಆಗಸ್ಟ್ ತಿಂಗಳ 15 ರಂದು ದಾವಣಗೆರೆ ನಗರದಲ್ಲಿ ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದರ ಮುಖಾಂತರ ಪ್ರತಿಭಟನೆಯನ್ನು ಮಾದಿಗ ಮಹಾಸಭೆ ಹಾಗೂ ದಲಿತ ಸಂಘರ್ಷ ಸಮಿತಿ ದಾವಣಗೆರೆ ವತಿಯಿಂದ ಸರ್ಕಾರಕ್ಕೆ, ಎಚ್ಚರಿಕೆ ನೀಡುತ್ತಿದ್ದೇವೆ” ಎಂದು ತಿಳಿಸಿದರು
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ದಸಂಸ ನೇತೃತ್ವದಲ್ಲಿ ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಸಂತ್ರಸ್ತರ ಹೋರಾಟ 8ನೇ ದಿನಕ್ಕೆ
ಸುದ್ದಿಗೋಷ್ಠಿಯಲ್ಲಿ ಪಂಜು ಪೈಲ್ವಾನ್, ಗುಮ್ಮನೂರು ಮಂಜಪ್ಪ, ಮಲ್ಲಿಕಾರ್ಜುನ ವಂದಾಲಿ, ಆಲೂರು ಕೆ.ಹೆಚ್.ಹನುಮಂತಪ್ಪ, ರಾಘವೇಂದ್ರ ಡಿ.ಕಡೇಮನಿ, ಹೂವಿನಮಡು ಮೈಲಾರಪ್ಪ, ಹಳಗವಾಡಿ ನಿಂಗಪ್ಪ, ಗುಮ್ಮನೂರು ರಾಮಚಂದ್ರ, ಎಂ.ರವಿ, ಸಿ.ಬಸವರಾಜ್, ರವಿಕುಮಾರ್ ಇತರರು ಹಾಜರಿದ್ದರು.