ಹರಿಹರ ನಗರದ ಜೆ.ಸಿ.ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ದಾವಣಗೆರೆ ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ ಲೋಕಾಯುಕ್ತ ಡಿವೈಎಸ್ಪಿ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಮುಂದೆ ವಿದ್ಯಾರ್ಥಿನಿಯರು ಹಾಸ್ಟೆಲ್ನ ಅವ್ಯವಸ್ಥೆಯ ಅನಾವರಣವನ್ನು ಮಾಡಿದರು. ಈದಿನ ಡಾಟ್ ಕಾಮ್ ಮಂಗಳವಾರವಷ್ಟೇ ಆಹಾರದಲ್ಲಿ ಹುಳು ಮತ್ತು ಇತರ ಅವ್ಯವಸ್ಥೆ ಬಗ್ಗೆ ಸುದ್ದಿ ಮಾಡಿತ್ತು.
ಹಾಸ್ಟೆಲ್ನಲ್ಲಿ ಹುಳ ಭರಿತ ಆಹಾರ ವಿತರಣೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ ಪೆಕ್ಟರ್ ಮೇಘರಾಜ್, ಸಬ್ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ತಂಡ ಸಂಜೆ 4ಕ್ಕೆ ಹಾಸ್ಟೆಲ್ಗೆ ಭೇಟಿ ನೀಡಿದ್ದರು.
ವಿದ್ಯಾರ್ಥಿನಿಯರಿಗೆ ಸಭೆಯಲ್ಲಿ ಮಾತನಾಡಿದ ಇನ್ಸ್ ಪೆಕ್ಟರ್ ಮೇಘರಾಜ್, “ಹಾಸ್ಟೆಲ್ನಲ್ಲಿರುವ ಲೋಪಗಳ ಬಗ್ಗೆ ನಿರ್ಭಯವಾಗಿ ಮಾಹಿತಿ ನೀಡಿರಿ” ಎಂದು ತಿಳಿಸಿದರು. ಈ ವೇಳೆ ಒಬ್ಬೊಬ್ಬರೆ ವಿದ್ಯಾರ್ಥಿನಿಯರು ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ, ಎಳೆಯಾಗಿ ಹೇಳಿಕೊಂಡರು.
ಒಬ್ಬ ವಿದ್ಯಾರ್ಥಿನಿ ಮಾತನಾಡಿ, “ಕಳೆದ ವಾರದ ಶನಿವಾರ ಮಾಡಿಟ್ಟಿದ್ದ ವಗ್ಗರಣೆಯನ್ನು ಬುಧವಾರದ ಊಟ ತಯಾರಿಕೆಗೆ ಬಳಿಸಿದ್ದಾರೆ” ಎಂದು ಆರೋಪಿಸದರೆ, ಇನ್ನೊಬ್ಬ ವಿದ್ಯಾರ್ಥಿನಿ ಮಾತನಾಡಿ, “ಹುಳ ಇದ್ದ ಅನ್ನ ನಮಗೆ ನೀಡಿದ್ದು ನಿಜ, ಡಿಎಸ್ಎಸ್ನವರು ಬಂದು ಹೋದ ನಂತರ ಹುಳ ಇಲ್ಲದ ಅಕ್ಕಿಯ ಊಟ ನೀಡುತ್ತಿದ್ದಾರೆ” ಎಂದು ತಿಳಿಸಿದರು.
ಉಳಿದಂತೆ ಹಾಸ್ಟೆಲ್ನಲ್ಲಿ ತಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿನಿಯರು ಹೇಳಿಕೊಂಡರು.
ನಂತರ ಮಾತನಾಡಿದ ಮೇಘರಾಜ್, ಹಾಸ್ಟೆಲ್ನಲ್ಲಿ ಏನೇ ಸಮಸ್ಯೆಗಳಿದ್ದರೂ ನಮಗೆ ತಿಳಿಸಿರಿ ಎಂದು ತಮ್ಮ ಮೊಬೈಲ್ ಸಂಖ್ಯೆ ನೀಡಿ, ನಂತರ ಕೊಠಡಿಗಳಲ್ಲಿ ಸಂಚರಿಸಿದ ಅವರು, ಬೆಡ್ಶೀಟ್ ಹಾಗೂ ಹಾಸಿಗೆಗಳು ಕೊಳಕಾಗಿವೆ, ಇಂತಹ ಹಾಸಿಗೆಗಳನ್ನು ಬಳಸಿದರೆ ಕಾಯಿಲೆ ಪೀಡಿತರಾಗುತ್ತಾರೆ, ಹಾಸಿಗೆ ಸ್ವಚ್ಚವಾಗಿರುವಂತೆ ನೋಡಿಕೊಳ್ಳಿ, ಗುಣಮಟ್ಟದ ಊಟ ಸರಬರಾಜು ಮಾಡಿರಿ, ಇಲ್ಲಿನ ಲೋಪಗಳ ಕುರಿತು ನಿರ್ದೇಶನಾಲಯದ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಎಂದು ಹಾಸ್ಟೆಲ್ ಸಿಬ್ಬಂದಿಗೆ ತಿಳಿ ಹೇಳಿದರು.
ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡವು ಭೇಟಿ ನೀಡಿ ಹಾಸ್ಟೆಲ್ನ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ದಾಸ್ತಾನು ಕೊಠಡಿಗೆ ತೆರಳಿ ಅಕ್ಕಿಯನ್ನು ಪರಿಶೀಲಿಸಿದಾಗ ಅಕ್ಕಿಯಲ್ಲಿ ಹುಳ ಹಾಗೂ ಕಸವನ್ನು ಕಂಡು, ಈ ಅಕ್ಕಿಯನ್ನು ಅಡುಗೆಗೆ ಬಳಸಬೇಡಿ, ಬೇರೆ ಅಕ್ಕಿ ತರಿಸಿ ಬಳಸಿ, ಸ್ವಚ್ಚತೆಗೆ ಗಮನ ಕೊಡಿ, ಇಲ್ಲಿನ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಂಚಾಯಿತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳು, ಗೊಂದಲ ಸರಿಪಡಿಸಲು ರೈತ ಸಂಘ ಪ್ರತಿಭಟನೆ
“ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದೆ, 190 ವಿದ್ಯಾರ್ಥಿನಿಯರಿದ್ದು ಕೂಡಲೆ ಕಟ್ಟಡ ದುರಸ್ತಿ ಮಾಡಿಸಿ ಅಥವಾ ಬೇರೆಡೆಗಾದರೂ ಸ್ಥಳಾಂತರಿಸಿ” ಎಂದು ಲೋಕಾಯುಕ್ತ ಪಿಎಸ್ಐ ಗುರುಬಸವರಾಜ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪರಿಗೆ ಸೂಚಿಸಿದರು.
ಆಗ ಹನುಮಂತಪ್ಪನವರು ಮಾತನಾಡಿ, “ಎಪಿಎಂಸಿ ಆವರಣದಲ್ಲಿ ಕೆಲವು ಕಟ್ಟಡಗಳಿದ್ದು ಅಲ್ಲಿಗೆ ಈ ಹಾಸ್ಟೆಲನ್ನು ಸ್ಥಳಾಂತರಿಸಲು ಪರಿಶೀಲಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಆಹಾರದಲ್ಲಿ ಹುಳುಪತ್ತೆ: ಶಿಸ್ತು ಕ್ರಮಕ್ಕೆ ದಸಂಸ ಆಗ್ರಹ
ಭೇಟಿ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹಾಗೂ ಇತರರು ಹಾಜರಿದ್ದರು.