- ದೇವರಾಜ ಅರಸು ಈ ನೆಲದ ಹಿಂದುಳಿದ ಮಕ್ಕಳ ಬದುಕು ರೂಪಿಸಿದ ಧೀಮಂತ ನಾಯಕರು.
- ಬುದ್ದಿಜಿವಿಗಳ ಒಡನಾಟದಿಂದ ಪ್ರಭುತ್ವಕ್ಕೆ ಜನರ ನಾಡಿ ಮಿಡಿತ ಅರಿಯಲು ಸಾಧ್ಯ.
ರಾಜ್ಯದ ಇತಿಹಾದಲ್ಲಿ ಡಿ.ದೇವರಾಜ ಅರಸು ಅವರ ಹೆಸರು ಅಜರಾಮರವಾಗಿದೆ. ಅವರು ನಾಡು ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿಯಾಗಿದ್ದಾರೆ. ಅವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಅಮರವಾಗಿರುತ್ತದೆ ಎಂದು ಬಸವಕಲ್ಯಾಣದ ಶಾಸಕ ಶರಣು ಸಲಗರ ನುಡಿದರು.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಬಿಕೆಡಿಬಿ ಸಭಾ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜಯಂತ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ದೇವರಾಜ ಅರಸು ಅವರು ಈ ನೆಲದ ಹಿಂದುಳಿದ ಮಕ್ಕಳ ಬದುಕು ರೂಪಿಸಿದ ಧೀಮಂತ ನಾಯಕ. ವಿದ್ಯಾರ್ಥಿಗಳು ಇಂದು ಮೊಬೈಲ್ ಗೀಳಿನಿಂದ ಹೊರಬಂದು ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಮೊಬೈಲ್ಗೆ ಜೀವನ ಹಾಳುಮಾಡುವ ಗುಣವೂ ಇದೆ, ಓದಿಗೆ ಅನುಕೂಲ ಮಾಡುವ ಗುಣವನ್ನೂ ಹೊಂದಿದೆ. ಸಾಧನೆಗೆ ಬಡತನ ಎಂದೂ ಅಡ್ಡಿ ಪಡಿಸುವುದಿಲ್ಲ. ಶ್ರಮ ಮತ್ತು ನಿರಂತರ ಅಭ್ಯಾಸದಿಂದ ಸಾಧ್ಯನೆ ಸಾಧ್ಯ” ಎಂದು ಹೇಳಿದರು.
ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭಿಮಾಶಂಕರ ಬಿರಾದರ ಮಾತನಾಡಿ, “ಬುದ್ದಿಜೀವಿಗಳ ಒಡನಾಟದಿಂದ ಪ್ರಭುತ್ವಕ್ಕೆ ಜನರ ನಾಡಿ ಮಿಡಿತ ಅರಿಯಲು ಸಾಧ್ಯವಾಗುತ್ತದೆ. ಜನ ಸಂಸ್ಕೃತಿಗೆ ಮನ್ನಣೆ ದೊರೆಯುತ್ತದೆ. ಆಡಳಿತ ಹೆಚ್ಚು ಪ್ರಗತಿಪರಗೊಳ್ಳುತ್ತದೆ. ಬುದ್ದಿಜೀವಿಗಳ ಮತ್ತು ಶ್ರೀಸಾಮಾನ್ಯರ ಈ ಇಬ್ಬರ ಅಭಿಪ್ರಾಯಗಳಿಗೂ ಮನ್ನಣೆ ನೀಡಿದ ಡಿ. ದೇವರಾಜ ಅರಸು ಅವರು ರಾಜಕೀಯ ತತ್ವಜ್ಞಾನಿಯಾಗಿದ್ದರು” ಎಂದು ಸ್ಮರಿಸಿದರು.
“ರಾಜಕಾರಣದಲ್ಲಿ ಯಾರೂ ಬಳಸಲಾಗದ ‘ಸೋಷಿಯಲ್ ಜಸ್ಟೀಸ್’ ಪದವನ್ನು ಮೊದಲು ಬಳಸಿದ್ದು ಅರಸು ಅವರು. ಸಾಮಾಜಿಕ ನ್ಯಾಯದ ನೆರಳಿನಲ್ಲಿ ಹಿಂದುಳಿದ, ದಲಿತ, ಶೂದ್ರ, ಮುಸ್ಲಿಂ, ಲಿಂಗಾಯತ, ಒಕ್ಕಲಿಗ ಹೀಗೆ ಹಲವು ಸಮುದಾಯಗಳು ಸಾಮಾಜಿಕ, ಆರ್ಥಿಕ ಬದಲಾವಣೆ ಮತ್ತು ಬೆಳವಣಿಗೆ ಕಂಡವು. ಯಾರೂ ಎಂದಿಗೂ ಅಧಿಕಾರ ಕಾಣಲಿಲ್ಲವೋ ಅವರೆಲ್ಲ ಪ್ರಭುತ್ವದ ಭಾಗವಾಗಲು ಕಾರಣರಾದದ್ದೇ ಡಿ. ದೇವರಾಜ ಅರಸು ಅವರಿಂದ” ಎಂದು ಹೇಳಿದರು.
“ಭೂ ಸುಧಾರಣೆ ಕಾಯ್ದೆ, ಹಾವನೂರು ವರದಿ, ಮಲ ಹೊರುವ ಪದ್ದತಿ ನಿಷೇಧ, ಜೀತ ಪದ್ದತಿ ನಿರ್ಮೂಲನೆ ಸೇರಿದಂತೆ ಹಲವು ಕ್ರಾಂತಿಕಾರಕ ಬದಲಾವಣೆ ಮಾಡಿದ ಅವರು, ಜಮಿನ್ದಾರಿ ಪದ್ದತಿ ಹೋಗಲಾಡಿಸುವ, ಕೃಷಿ ಉತ್ಪಾದನೆ ಹೆಚ್ಚಿಸುವ, ಬಂಡವಾಳ ಶಾಹಿತ್ವ ತಡೆಗಟ್ಟುವ, ಆರ್ಥಿಕ-ಸಾಮಾಜಿಕ ಸಮಾನತೆಯನ್ನು ರೂಪಿಸುವ, ಎಲ್ಲರಿಗೂ ಉದ್ಯೋಗ ದೊರಕಿಸುವ ದೂರ ದೃಷ್ಠಿ ಹೊಂದಿದ್ದರು” ಎಂದರು.
“ಯಾವುದೇ ಗುಂಪು ಕಟ್ಟಿಕೊಳ್ಳದೆ ಗುಂಪುಗಾರಿಕೆ ರಾಜಕಾರಣದಿಂದ ದೂರ ಉಳಿದ ಅರಸು ಅವರು ಹಲವರನ್ನು ರಾಜಕಾರಣದಲ್ಲಿ ಬೆಳೆಸಿದರು ಮತ್ತು ಅವರವರ ದಾರಿಗೆ ಬಿಟ್ಟರು. ಕೊನೆಗೆ ಒಂಟಿಯಾಗಿ, ನಿಸ್ಸಾಹಯಕವಾಗಿ ಉಳಿದ ಅವರು ಮನುಷ್ಯ ಮತ್ತು ಸಮಾಜದಲ್ಲಿ ಅರ್ಥ ಮಾಡಿಕೊಳ್ಳುವ ಧ್ಯಾನಸ್ಥ ಸ್ಥಿತಿಯಲ್ಲಿ ಉಳಿದಂತಿದ್ದರು. ಈ ನಾಡು ಎಲ್ಲರದ್ದು, ಎಲ್ಲರು ನಾಡಿನ ಅಧಿಕಾರದಲ್ಲಿ ಇರಬೇಕೆಂದು ಕನಸು ಕಂಡ ಅರಸು ಅವರ ಆಡಳಿತಾತ್ಮಕ ಯೋಚನೆಗಳು, ಅರಸು ಅವರ ಬದುಕು ಪ್ರಸ್ತುತದ ಹಲವು ರಾಜಕಾರಣಿಗಳಿಗೆ ಪಾಠವಾಗಬೇಕು, ಮಾದರಿಯಾಗಬೇಕು” ಎಂದು ಹೇಳಿದರು.
ಇದು ಓದಿದ್ದೀರಾ? ಭ್ರಷ್ಟಾಚಾರ ನಿಯಂತ್ರಣಕ್ಕೆ ’ಪಂಚತಂತ್ರ’ ಜಾರಿಗೆ ತರಲಿದ್ದೇವೆ: ಸಚಿವ ಪ್ರಿಯಾಂಕ್ ಖರ್ಗೆ
ಸಮಾರಂಭದಲ್ಲಿ ತಹಶೀಲ್ದಾರ್ ಶಾಂತಗೌಡ ಬಿರಾದರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಸಿಪಿಐ ಅಲಿಸಾಬ್, ನಗರಸಭೆ ಆಯುಕ್ತ ಮನೋಜ ಕುಮಾರ ಕಾಂಬಳೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ ಮುಂತಾದವರುಿದ್ದರು.
ಶಿವಕುಮಾರ ಜಡಗೆ ನಿರೂಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಿ ಬಿ ಈರೇಗೌಡರ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಹಲವು ವಸತಿ ನಿಲಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅಡುಗೆ ಕೆಲಸಗಾರರಿಗೆ, ಮುಂಬಡ್ತಿ ಪಡೆದ ಇಲಾಖೆ ಕೆಲಸಗಾರರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿದರು.