ಧರ್ಮಸ್ಥಳದ ಸುತ್ತ ಹಲವಾರು ಮೃತದೇಹ ಹೂತು ಹಾಕಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ದಿನವಾದ ಶುಕ್ರವಾರ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಕರೆದುಕೊಂಡು ಬಂದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಗುರುತು ಮಾಡಲಾಗಿದ್ದ 7ನೇ ಮತ್ತು 8ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಿದ್ದರೂ ಯಾವುದೇ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ, ಬೆಳ್ತಂಗಡಿ ಪೊಲೀಸರು 2000 ಮತ್ತು 2015 ರ ನಡುವೆ ದಾಖಲಿಸಿಕೊಂಡಿದ್ದ ಗುರುತಿಸಲಾಗದ ಅಸ್ವಾಭಾವಿಕ ಪ್ರಕರಣಗಳ ಪ್ರಮುಖ ದಾಖಲೆಗಳನ್ನು ನಾಶಪಡಿಸಿದ್ದಾಗಿ ಒಪ್ಪಿಕೊಂಡಿರುವುದು ಆರ್ಟಿಐನಲ್ಲಿ ಬಹಿರಂಗಗೊಂಡಿದೆ.
ಈ ಬಗ್ಗೆ ದಾಖಲೆ ಈದಿನ ಡಾಟ್ ಕಾಮ್ಗೂ ಲಭ್ಯವಾಗಿದೆ., ಧರ್ಮಸ್ಥಳದಲ್ಲಿ ಅಕ್ರಮವಾಗಿ ಸಾಮೂಹಿಕ ಅಂತ್ಯಕ್ರಿಯೆಗಳು ನಡೆದಿರುವ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದ್ದಾಗಲೇ ಈ ವಿಚಾರ ಬಹಿರಂಗಗೊಂಡಿದೆ. ಬೆಳ್ತಂಗಡಿ ಪೊಲೀಸರು 2000 ಮತ್ತು 2015ರ ನಡುವೆ ದಾಖಲಿಸಿಕೊಂಡಿದ್ದ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸದೆಯೇ ದಾಖಲೆಗಳನ್ನು ಅಳಿಸಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ವರದಿಯಲ್ಲಿ ಉಲ್ಲೇಖಿಸಿದೆ.

ಕಡಬ ತಾಲೂಕಿನ ಕಲ್ಮತ್ತಡ್ಕದಲ್ಲಿರುವ ‘ನೀತಿ’ ಎಂಬ ಹೋರಾಟಗಾರರ ತಂಡವು ಆರ್ಟಿಐ ಅರ್ಜಿಯನ್ನು ಸಲ್ಲಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನ ಸೆಕ್ಷನ್ 174(A) ಅಡಿಯಲ್ಲಿ 15 ವರ್ಷಗಳ ಅವಧಿಯಲ್ಲಿ ದಾಖಲಾದ ಗುರುತಿಸಲಾಗದ ಅಸ್ವಾಭಾವಿಕ ಸಾವಿನ ಪ್ರಕರಣಗಳನ್ನು ಒಳಗೊಂಡ ವಿವರಗಳನ್ನು ಕೋರಿತ್ತು. ಇದಕ್ಕೆ ಉತ್ತರಿಸಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, “ವಿನಂತಿಸಿದ ದಾಖಲೆಗಳು, ವಿವಿಧ ಸುತ್ತೋಲೆಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿರುವುದರಿಂದ ಇನ್ನು ಮುಂದೆ ಲಭ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಎಸ್ಐಟಿ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿನ ಸಾಕ್ಷಿ ದೂರುದಾರನು, 1998ರಿಂದ 2014ರ ನಡುವೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ಹೂಳಲು ಮತ್ತು ದಫನ ಮಾಡಲು ಒತ್ತಾಯಿಸಲಾಗಿತ್ತು. ನನಗೆ ಜೀವ ಬೆದರಿಕೆ ಇತ್ತು ಎಂದು ಹೇಳಿಕೊಂಡಿದ್ದ. ಸದ್ಯ ಎಸ್ಐಟಿ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಇಂಡಿಯಾ ಟುಡೇ ಕೂಡ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಶಾಲಾ ಮಕ್ಕಳು ಕುಡಿಯುವ ನೀರಿಗೆ ಕೀಟನಾಶಕ, ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ
ಧರ್ಮಸ್ಥಳದಲ್ಲಿ ಈ ಹಿಂದೆ ಪೊಲೀಸ್ ಠಾಣೆ ಇರಲಿಲ್ಲ. ಔಟ್ಪೋಸ್ಟ್ ಠಾಣೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ, ಧರ್ಮಸ್ಥಳ ಸೇರಿದಂತೆ ಇತರೆ ಪ್ರದೇಶಗಳ ಅಸ್ವಾಭಾವಿಕ ಸಾವುಗಳನ್ನು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ದಾಖಲಿಸಿಕೊಳ್ಳಲಾಗುತ್ತಿತ್ತು. 2023ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯು ಉದ್ಘಾಟನೆಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
