ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಲ್ಲದೇ ಇದ್ದರೂ ನೋಂದಣಿ ಮಾಡಿಕೊಂಡ 10,780 ಮಂದಿಯನ್ನು ಕಾರ್ಮಿಕ ಇಲಾಖೆ ಪತ್ತೆ ಮಾಡಿ, ಅವರು ಹೊಂದಿದ್ದ ಕಾರ್ಮಿಕ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎಸ್ ಮಾಹಿತಿ ನೀಡಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಕೆಲವರು ನೋಂದಾಯಿಸಿಕೊಂಡಿದ್ದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಅವರು ಸರ್ಕಾರದ ಯೋಜನೆಗಳನ್ನು ಪಡೆಯುವ ಮುನ್ನವೇ ಕಾರ್ಮಿಕ ಕಾರ್ಡ್ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗಾಗಿ ಇಲಾಖೆಯಿಂದ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇವು ಅರ್ಹರಿಗೆ ಸಿಗಬೇಕೆಂದು ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಆದರೂ, ಕೆಲವರು ಸುಳ್ಳು ಮಾಹಿತಿ ನೀಡಿ, ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳ ಪರಿಶೀಲನೆ, ದೂರವಾಣಿ ಮೂಲಕ ನಡೆಸಿದ ವಿಚಾರಣೆ ವೇಳೆ ಇವರು ಕಾರ್ಮಿಕರಲ್ಲವೆಂದು ತಿಳಿದುಬಂದಿದೆ. ಒಂದು ವೇಳೆ, ಇವರು ಸರ್ಕಾರದಿಂದ ಅನುಕೂಲ ಪಡೆದ ಫಲಾನುಭವಿಗಳಾಗಿದ್ದರೆ, ಎಫ್ಐಆರ್ ದಾಖಲಿಸಲಾಗುತ್ತಿತ್ತು ಎಂದು ವಿವರಿಸಿದರು.
ಕಟ್ಟಡ ಕಾರ್ಮಿಕರು ಈ ಹಿಂದೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಈಗ ಕಾರ್ಮಿಕ ಇಲಾಖೆಗಾಗಿಯೇ ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಮೂರು ತಿಂಗಳಿಂದ ಇದು ಕಾರ್ಯನಿರ್ವಹಿಸುತ್ತಿದೆ. ಇನ್ಮುಂದೆ ಯಾರಾದರೂ ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ, ಅವರ ಆಧಾರ್ ಕಾರ್ಡ್ ಮಾಹಿತಿ ದಾಖಲಿಸಿ, ಮತ್ತೊಮ್ಮೆ ಅರ್ಜಿ ಸಲ್ಲಿಸದಂತೆ ತಡೆಹಿಡಿಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.