ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆಯಿಂದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ನಿಗದಿಪಡಿಸಿದ ಹಲವು ಬೆಳೆಗಳ ಬೆಳೆಸ್ಪರ್ಧೆ ಏರ್ಪಡಿಸಿದ್ದಾರೆ.
ಆಸಕ್ತಿಯುಳ್ಳ ರೈತರು, ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಆಗಸ್ಟ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಪ್ರವೇಶ ಶುಲ್ಕ ಭರಣಾ ಮಾಡುವುದು, ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬೆಳೆಸ್ಪರ್ಧೆಯಲ್ಲಿ ಭಾಗವಹಿಸಲು ಸಾಮಾನ್ಯ ವರ್ಗದ ರೈತರಿಗೆ ₹100 ಶುಲ್ಕ ಇದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ₹25 ಶುಲ್ಕವಿದೆ.
ರಾಜ್ಯ ಮಟ್ಟದ ಬೆಳೆಸ್ಪರ್ಧೆಗೆ ಮುಂಗಾರು ಹಂಗಾಮಿಗೆ ಭತ್ತ(ನೀರಾವರಿ), ಭತ್ತ(ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಸೋಯಾ ಅವರೆ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರು ಹಂಗಾಮಿಗೆ ಸೋಯಾ ಅವರೆ (ಮಳೆ ಆಶ್ರಿತ) ನಿಗದಿಪಡಿಸಲಾಗಿದೆ. ತಾಲೂಕು ಮಟ್ಟದ ಬೆಳೆಸ್ಪರ್ಧೆಗೆ ಸಂಬಂದಿಸಿದಂತೆ, ಧಾರವಾಡ ತಾಲೂಕಿಗೆ ಸೋಯಾ ಅವರೆ(ಮಳೆಆಶ್ರಿತ), ಹುಬ್ಬಳ್ಳಿ ನಗರ ತಾಲೂಕಿಗೆ ಸೋಯಾ ಅವರೆ (ಮಳೆಆಶ್ರಿತ), ಹುಬ್ಬಳ್ಳಿ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ಕಲಘಟಗಿ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ಅಳ್ನಾವರ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ನವಲಗುಂದ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ಅಣ್ಣಿಗೇರಿ ತಾಲೂಕಿಗೆ ಮುಸುಕಿನಜೋಳ(ಮಳೆಆಶ್ರಿತ) ಹಾಗೂ ಕುಂದಗೋಳ ತಾಲೂಕಿಗೆ ಶೇಂಗಾ (ಮಳೆಆಶ್ರಿತ) ಬೆಳೆಗಳನ್ನು ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆಆರ್ಐಡಿಎಲ್ ಕಾರ್ಯ ನಿರ್ವಾಹಕ ಹುದ್ದೆ ನೇಮಕಾತಿಗೆ ಆಗ್ರಹ
2023-24 ನೇ ಸಾಲಿನಲ್ಲಿಯೂ ಸಹ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿಯನ್ನು ನೀಡಲು ಸರ್ಕಾರವು ಅನುಮೋದನೆ ನೀಡಿದ ಪ್ರಯುಕ್ತ ಅರ್ಜಿಗಳನ್ನು ಸಲ್ಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.