ಹೋಳಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಶನಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಾಂಸ್ಕೃತಿಕ, ಸಾಂಪ್ರದಾಯಿಕ ಹೋಳಿ ಆಚರಿಸಿದರು. ಜಾನಪದ ಕಲಾವಿದರು, ಕಲಾತಂಡಗಳು ಮತ್ತು ಸರಕಾರಿ ನೌಕರರು, ಹವ್ಯಾಸಿ ಹಾಡುಗಾರರು ಹೋಳಿ ಹಬ್ಬದ, ಜಾನಪದ ಹಾಗೂ ಭಾವಗೀತೆಗಳನ್ನು ಹಾಡಿದರು. ಪೊಲೀಸ ಆಯುಕ್ತ ಎನ್.ಶಶಿಕುಮಾರ ಹಾಗೂ ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾವಗೀತೆ, ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ ಆಡಳಿತಾಧಿಕಾರಿ ಡಾ. ರಾಮ್ ಪ್ರಸಾಥ್ ಮನೋಹರ ವಿ. ಅವರು ಮಾತನಾಡಿ, ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಒಂದೆಡೆ ಸೇರಿ, ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ಹಬ್ಬ ಹರಿದಿನಗಳ ಆಚರಣೆ ಸಮಯದಲ್ಲಿ ಯಾವ ಬೇದ-ಭಾವಗಳಿಲ್ಲದೆ ಎಲ್ಲರೂ ಬೆರೆಯುವುದರಿಂದ ಸಾಮರಸ್ಯ, ಸರಳತೆ, ಆಪ್ತತೆ ಹೆಚ್ಚುತ್ತದೆ. ನಾವು ಮಾಡುವ ಕರ್ತವ್ಯದಲ್ಲಿ ಧನ್ಯತೆ ಮೂಡುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಉತ್ತರ ಕರ್ನಾಟಕದ ಹೋಳಿ ಹಬ್ಬಕ್ಕೆ ವಿಶೇಷವಾದ ಮಹತ್ವ ಮತ್ತು ಪ್ರಸಿದ್ದಿ ಇದೆ. ಹೋಳಿ ಹಬ್ಬದ ಮೂಲಕ ಕೆಟ್ಟ ಗುಣಗಳನ್ನು ಬಿಟ್ಟು, ಉತ್ತಮವಾದ ಗುಣಗಳನ್ನು ಉಳಿಸಿ, ಬೇಳೆಸಿಕೊಳ್ಳಬೇಕು. ಬಣ್ಣಗಳು ಬದುಕಿನ ಮೌಲ್ಯಗಳ ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ತೋರುತ್ತವೆ ಎಂದರು.
ಧಾರವಾಡ ತಾಲೂಕಿನ ಸಾವಿರ ಹಾಡುಗಳ ಸರದಾರಿಣಿ ಮಲ್ಲಮ್ಮ ಕುಂಬಾರ, ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಭಾವೈಕ್ಯದ ಹಾಡುಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ಮತ್ತು ಕಲಘಟಗಿ ತಾಲೂಕಿನ ಸೂರಶಟ್ಟಿಕೊಪ್ಪದ ಜಾನಪದ ತಜ್ಞ, ದೇಸಿ ಹಾಡುಗಾರ ಕಬ್ಬೇರಗೌಡ ಮರಳಿ ಕಲಾ ತಂಡಗಳೊಂದಿಗೆ ಹೋಳಿ ಹಾಡು, ಉತ್ತರ ಕರ್ನಾಟಕದ ಜಾನಪದ ಹಾಡುಗಳನ್ನು ಸಂಗೀತ ಪರಿಕರದೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿದರು.
ಸಾಂಸ್ಕೃತಿಕ ಹೋಳಿ ಹಬ್ಬದಲ್ಲಿ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ ಆಯುಕ್ತ ಮಾನಿಂಗ ನಂದಗಾವಿ, ಮಹಾನಗರಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ, ಡಿಮಾನ್ಸ್ ಆಡಳಿತಾಧಿಕಾರಿ ಮೇಜರ ಸಿದ್ದಲಿಂಗಯ್ಯ ಹಿರೇಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಜಿ.ಪಂ.ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಾದ ರೇಖಾ ಡೊಳ್ಳಿನವರ, ಡಾ. ಶಶಿ ಪಾಟೀಲ, ಡಾ.ಸುಜಾತಾ ಹಸವೀಮಠ, ಇ.ಇ. ಪ್ರಶಾಂತ ಪಾಟೀಲ, ಎಲ್ಲ ತಹಶಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಪಿಐ ದಯಾನಂದ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ನೌಕರ ಸಂಘದ ಪದಾಧಿಕಾರಿಗಳು, ಕಂದಾಯ ನೌಕರ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಮಹಿಳಾ ಮತ್ತು ಪುರುಷ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು