79ನೇ ಸ್ವಾತಂತ್ರ್ಯೋತ್ಸವವು ನಮ್ಮೆಲ್ಲರ ಪಾಲಿಗೆ ಅತ್ಯಂತ ಹೆಮ್ಮೆಯ ಹಾಗೂ ಸಂಭ್ರಮದ ದಿನ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ನಮ್ಮ ಭಾರತ ಮಾತೆಯನ್ನು ಮುಕ್ತಗೊಳಿಸಲು ಅಸಂಖ್ಯಾತ ವೀರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ದಿನವಿದು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿಭವನದಲ್ಲಿ ಪ್ರಥಮ ಬಾರಿಗೆ 79ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಭಾರತ ಸ್ವಾತಂತ್ರ್ಯದ ಸಂಕೇತವಾದ ನಮ್ಮ ತ್ರಿವರ್ಣ ಧ್ವಜವು ಆಗಸದಲ್ಲಿ ಮುಗಿಲೆತ್ತರಕ್ಕೆ ಹಾರಾಡುತ್ತಿರುವುದನ್ನು ನೋಡುವಾಗ, ನಮ್ಮೆಲ್ಲರ ಮನಸ್ಸು ದೇಶಪ್ರೇಮದಿಂದ ಪುಳಕಿತಗೊಳ್ಳುತ್ತದೆ. ಸ್ವಾತಂತ್ರ್ಯವನ್ನು ಗಳಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಇಲ್ಲಿಗೆ ಮುಗಿಯುವುದಿಲ್ಲ. ಬಡತನ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಯಂತಹ ಸವಾಲುಗಳು ಇನ್ನೂ ನಮ್ಮ ಮುಂದಿವೆ. ಈ ಸವಾಲುಗಳನ್ನು ಎದುರಿಸಿ, ನಮ್ಮ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
“ನಮ್ಮ ಯುವಜನತೆ ಈ ದೇಶದ ಭವಿಷ್ಯ, ಜ್ಞಾನ ಮತ್ತು ಉತ್ಸಾಹವನ್ನು ದೇಶ ಕಟ್ಟುವ ಕಾಯಕದಲ್ಲಿ ಬಳಸಿಕೊಳ್ಳಬೇಕು ಹೊರತು ದೇಶಕ್ಕೆ ಹಾನಿಯಾಗುವ ಕೆಲಸವನ್ನು ಮಾಡಬಾರದು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನೂ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ನೈಸರ್ಗಿಕ ಸಂಪನಮೂಲಗಳನ್ನು ಉಳಿಸುವುದರಿಂದ ದೇಶವನ್ನು ಇಂದು ರಕ್ಷಿಸಿ ಬೆಳೆಸಬಹುದಾಗಿದೆ. ಅನಗತ್ಯ ವಿದ್ಯುತ್ ಬಳಕೆ, ಮಿತವಾಗಿ ನೀರನ್ನು ಬಳಸುವುದು, ಅರಣ್ಯವನ್ನು ಸಂರಕ್ಷಿಸುವುದು ಇವೆಲ್ಲವೂ ಕೂಡ ದೇಶಕ್ಕೆ ಕೊಡುವ ಆದ್ಯತೆ ಮತ್ತು ಗೌರವಿಸುವುದೂ ಆಗಿದೆ” ಎಂದರು.
“ಗಾಂಧೀಜಿಯವರ ಅಹಿಂಸಾ ತತ್ವ ಶ್ರೇಷ್ಠವಾಗಿದೆ. ಇದು ಪಾಪವನ್ನು ದ್ವೇಷಿಸು, ಪಾಪಿಯನ್ನಲ್ಲ ಮತ್ತು ಶತ್ರುಗಳನ್ನು ಪ್ರೀತಿಯಿಂದ ಗೆಲ್ಲು ಎನ್ನುವ ಅವರ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ತಮ್ಮನ್ನು ಹಿಂಸಿಸಿದ ವ್ಯಕ್ತಿಯ ಮೇಲೂ ದ್ವೇಷ ಸಾಧಿಸದೆ, ಪ್ರೀತಿಯನ್ನು ತೋರಿದ ಅವರ ವ್ಯಕ್ತಿತ್ವಕ್ಕೆ ಇದು ಸಾಕ್ಷಿಯಾಗಿದೆ” ಎಂದು ಗಾಂಧೀಜಿ ಅವರ ಬಗ್ಗೆ ಒಂದು ಸನ್ನಿವೇಶ ಹೇಳುವ ಮೂಲಕ ವಿವರಿಸಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅದರಿಂದ ಛಲದಿಂದ ಬದುಕಿ, ಸಮಾಜದಲಿ ಒಳ್ಳೆಯ ವ್ಯಕ್ತಿಗಳಾಗಿ ಜೀವಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಹನೀಯರ ತ್ಯಾಗ ಬಲಿದಾನದ ಫಲವೇ ಇಂದಿನ ಸ್ವಾತಂತ್ರ್ಯ: ಸಚಿವ ಕೃಷ್ಣ ಭೈರೇಗೌಡ
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರೆ ಸುಜಾತಾ ಕಾಳೆ ಸ್ವಾಗತಿಸಿದರು. ಸರ್ಕಾರಿ ಪದವಿ ಮಾಹಾವಿದ್ಯಾಲಯದ ಪ್ರಾಚಾರ್ಯ ಡಾ.ಗುರುನಾಥ ಬಡಿಗೇರ ವಂದಿಸಿದರು. ಕೃಷಿ ಅಧಿಕಾರಿ ಮಹಾದೇವ ಸರಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹೊಸ ಬಸ್ ನಿಲ್ದಾಣ ಹಾಗೂ ಬಿಆರ್ಟಿಎಸ್ ನಿಲ್ದಾಣದ ಸಿಬ್ಬಂದಿಗಳು, ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಕ್ರೇಡಿಲ್ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿಗಳು ಇದ್ದರು.