ನಮ್ಮ ಶ್ರದ್ಧೆ ಪರಿಸರಕ್ಕೆ ಮಾರಕವಾಗಬಾರದು. ಇಂದು ನಾವು ಮಾಡುವ ಪೂಜೆ ಮುಂದಿನ ಪೀಳಿಗೆಗೆ ಶಾಪವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ವಿಗ್ರಹಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಎಲ್ಲರೂ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಂದು ಹಬ್ಬ ಆಚರಣೆ ಮಾಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದಲ್ಲಿ ಪಿಒಪಿ ಗಣೇಶ ವಿಗ್ರಹಗಳ ನಿಷೇಧ ಹಾಗೂ ನಿಯಂತ್ರಿಸುವ ಕುರಿತು ಜಲಮಾಲಿನ್ಯ ತಡೆ ಕಾರ್ಯಪಡೆ ಸಭೆ ಜರುಗಿಸಿ, ಮಾತನಾಡಿದ ಅವರು, “ಅಧಿಕಾರಿಗಳು ನಗರದಾದ್ಯಂತ ದಿಢೀರ್ ದಾಳಿ ನಡೆಸಿ, ಅಂತಹ ವಿಗ್ರಹಗಳು ಸಿಕ್ಕರೆ, ತಕ್ಷಣ ವಶಪಡಿಸಿಕೊಳ್ಳಬೇಕು. ಮಾರಾಟಗಾರರ ಮೇಲೆ ದಂಡ ವಿಧಿಸಬೇಕು. ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇ. ಬೇರೆ ಜಿಲ್ಲೆಗಳಿಂದ ಪಿಒಪಿ ವಿಗ್ರಹಗಳು ಬರದಂತೆ ತಡೆಯಲು ಜಿಲ್ಲೆಯ ಗಡಿ ಭಾಗಗಳಲ್ಲಿ ಹಾಗೂ ಮಹಾನಗರದ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಚೆಕ್ಪೋಸ್ಟ್ನಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ನಿಯಮ ಉಲ್ಲಂಘಿಸಿ ಸಾಗಾಟ ಮಾಡುವ ವಾಹನಗಳನ್ನು ಮತ್ತು ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ನಿಯಮ ಪಾಲನೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ನಿರ್ಲಕ್ಷ್ಯ ತೋರಿದ್ದು ಕಂಡುಬಂದಲ್ಲಿ, ಶಿಸ್ತು ಕ್ರಮ ಜರುಗಿಸಲಾಗುವುದು. ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನು ನಿಷೇಧಿಸುವ ಕುರಿತು ಕರ್ನಾಟಕ ಹೈಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಪಿಒಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ ಮತ್ತು ಅದರಲ್ಲಿರುವ ವಿಷಕಾರಿ ರಾಸಾಯನಿಕಗಳು ಕೆರೆ, ಬಾವಿ, ಹಳ್ಳ, ನದಿ ಸೇರಿ ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ. ಇದು ಜಲಚರಗಳಿಗೆ ಮತ್ತು ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗುವುದರಿಂದ ಹೈಕೋರ್ಟ್ ಈ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪೊಲೀಸ್, ಪರಿಸರ ಮಾಲಿನ್ಯ, ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು” ತಿಳಿಸಿದರು.
ಇದನ್ನೂ ಓದಿ: ಧಾರವಾಡ | ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ: ಭುವನೇಶ್ ಪಾಟೀಲ
ಸಾರ್ವಜನಿಕರು ಪಿಒಪಿ ಸಾಗಾಣಿಕೆ, ದಾಸ್ತಾನು, ಮಾರಾಟ ಹಾಗೂ ತಯಾರಿಕೆ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ ಅಥವಾ ವಾಟ್ಸಪ್ ಮೂಲಕವು ಮಾಹಿತಿ ನೀಡಬಹುದಾಗಿದೆ. ಮಾಹಿತಿದಾರರ ಪರಿಚಯವನ್ನು ಗೌಪ್ಯವಾಗಿ ಇಡಲಾಗುವುದು. ಸಹಾಯವಾಣಿ: ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ 0836-2445508 ಟೋಲ್ ಫ್ರೀ ನಂಬರ್:1077, ಧಾರವಾಡ ಉಪ ವಿಭಾಗಾಧಿಕಾರಿ ಕಚೇರಿ: 0836-2233860, ಧಾರವಾಡ ತಹಶೀಲ್ದಾರ ಕಚೇರಿ: 0836-2233822, ಅಳ್ಳಾವರ ತಹಶೀಲ್ದಾರ ಕಚೇರಿ: 0836-2385544, ಹುಬ್ಬಳ್ಳಿ ನಗರ: 0836-2358035, ಹುಬ್ಬಳ್ಳಿ: 0836-2233844, ಕಲಘಟಗಿ: 08370-284535, ನವಲಗುಂದ:08380-229240, ಅಣ್ಣಿಗೇರಿ:8618442759, ಕುಂದಗೋಳ:8304290239 ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 0836-2213888, 0836-2213889, 0836-2213869 ಹಾಗೂ ವಾಟ್ಸ್ಪ ಸಂಖ್ಯೆ: 8277803778 ಗೆ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು.