ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳವು ರೈತ ಜಾತ್ರೆ ಎಂದೇ ಪ್ರಸಿದ್ಧಿ ಹೊಂದಿದೆ. ಈ ರೈತ ಜಾತ್ರೆಗೆ ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ರೈತರು, ಕೃಷಿ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ಬರುತ್ತಾರೆ. ಅದರ ಪರಿಣಾಮವೇ ವರ್ಷದಿಂದ ವರ್ಷಕ್ಕೆ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ.
ರೈತ ಸಮುದಾಯಕ್ಕಾಗಿ ರೂಪುಗೊಂಡ ಕೃಷಿ ಮೇಳವು ಒಂದು ದೊಡ್ಡ ಕಾರ್ಯಕ್ರಮವಾಗಿದ್ದು, ಕೃಷಿ ವಿಶ್ವವಿದ್ಯಾಲಯ ಮತ್ತು ಖಾಸಗಿ ಉದ್ಯಮಗಳು ಬಿಡುಗಡೆಗೊಳಿಸುವ, ಕೃಷಿ ಸಂಬಂಧಿತ ತಂತ್ರಜ್ಞಾನ, ಯಂತ್ರೋಪಕರಣ ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ನೀಡುತ್ತಾ ಬಂದಿದೆ. ಕೃಷಿ ಮೇಳದಲ್ಲಿ ವ್ಯವಸಾಯಕ್ಕೆ ಉಪಯುಕ್ತವಾದ ಉಪಕರಣ, ಜಾನುವಾರು, ಬೀಜೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತವೆ.
ನಿರಂತರವಾಗಿ 4 ದಿನಗಳ ಕಾಲ ನಡೆಯುವ ಈ ಕೃಷಿ ಮೇಳದ ವೀಕ್ಷಣೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಬರುತ್ತಾರೆ. ಎಲ್ಲೆಡೆಯಿಂದ ಕಿಕ್ಕಿರಿದು ಜನ ಸೇರುವ ಕಾರಣಕ್ಕೆ ಇದು ರೈತ ಜಾತ್ರೆ ಎಂದೇ ಕರೆಸಿಕೊಳ್ಳುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನ ಕೃಷಿ ಮೇಳ ಜನಸಾಗರವೇ ಹರಿದು ಬರುವ ವಾತಾವರಣ ಕೃಷಿ ವಿಶ್ವವಿದ್ಯಾಲಯದಲ್ಲಿ ಎದ್ದು ಕಾಣುತ್ತಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಹಬ್ಬದ ಕಳೆಕಟ್ಟಿದೆ.
ಇಲ್ಲಿಗೆ ಬರುವ ರೈತರು, ಜನಸಾಮಾನ್ಯರು, ಕೃಷಿ ಪ್ರೇಮಿಗಳು ಈದಿನ.ಕಾಮ್ ಜೊತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ…

ʼಕಳೆದ ಐದು ವರ್ಷಗಳಿಂದ ಪ್ರತಿ ಕೃಷಿ ಮೇಳಕ್ಕೆ ಬರುತ್ತಿದ್ದೇವೆ. ಇಲ್ಲಿ ಕೃಷಿ ಸಂಬಂಧಿತ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ. ಅದರಲ್ಲೂ ಬಡ ರೈತರಿಗೆ ಬಹಳಷ್ಟು ಉಪಯುಕ್ತ ಮಾಹಿತಿಗಳು ಈ ಮೇಳದಲ್ಲಿ ಲಭ್ಯವಾಗುತ್ತದೆʼ ಎನ್ನುತ್ತಾರೆ ಸಣ್ಣ ರೈತರು.
ʼಇತ್ತೀಚಿಗೆ ಜಾನುವಾರು ಸಾಕಾಣೆ ಕಡಿಮೆ ಆಗಿರುವ ಪರಿಣಾಮ ರೈತರು ಅನಿವಾರ್ಯ ಕಾರಣದಿಂದ ರಸಾಯನಿಕ ಗೊಬ್ಬರ ಬಳಕೆಗೆ ಮುಂದಾಗಿದ್ದು, ಹೀಗಾಗಿ ಇಳುವರಿ ಕೂಡ ಕಡಿಮೆ ಬರುತ್ತದೆ. ಯುವಕರಲ್ಲಿ ದುಡಿಯುವ ಆಸಕ್ತಿ ಕಡಿಮೆಯಾಗಿದೆ. ಕಳಪೆ ಮಟ್ಟದ ಬೀಜಗಳು ವಿತರಣೆ ಬಿತ್ತನೆಯಿಂದ ನಿರೀಕ್ಷೆಯಂತೆ ಹೆಚ್ಚಿನ ಇಳುವರಿ ಬರುತ್ತಿಲ್ಲ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ವ್ಯವಸಾಯದಲ್ಲಿ ಏರುಪೇರಾಗಿದೆ, ಮಳೆ ಬಂದಿಲ್ಲ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಬಚಾವ್ ಆಗುತ್ತಾರೆʼ ಎಂದು ವಿಜಯನಗರ ಜಿಲ್ಲೆಯ ರೈತ ಮುಖಂಡ ಸಿದ್ದಣ್ಣ ಹೇಳಿದರು.
ʼಕೃಷಿ ಮೇಳದಲ್ಲಿ ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ಕೃಷಿ ಇಲಾಖೆ ಮತ್ತು ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ ಕೃಷಿ ಮೇಳ ಅಷ್ಟೊಂದು ಲಾಭದಾಯಕವಿಲ್ಲ. ಅನೇಕ ಉಪಯುಕ್ತ ಮಾಹಿತಿಗಳೇನೊ ದೊರಕುತ್ತವೆ. ಆದರೆ ಸಣ್ಣ ರೈತರಿಗೆ ಹೆಚ್ಚಿನ ಲಾಭ ಇಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಯೋಜನೆ ರೂಪಿಸಬೇಕು.ರೈತರ ಪ್ರಚಾರದಿಂದ ಉದ್ಯಮಿಪತಿಗಳು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆʼ ಎಂದು ಕಳಸಾ-ಬಂಡೂರಿ ಹೋರಾಟದ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಜೋಗಣ್ಣವರ್ ಅಸಮಧಾನ ವ್ಯಕ್ತಪಡಿಸಿದರು.
ಕೃಷಿ ಮೇಳ ವೀಕ್ಷಿಸಲು ಬಂದು ವಾಪಸ್ ಹೋಗುವಾಗ ಹರ್ಷಗೊಳ್ಳುತ್ತಾರೆ. ವಿಧ-ವಿಧ ತಳಿಯ ಎತ್ತು, ಎಮ್ಮೆ, ಆಕಳು, ಕೋಳಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ಕಂಡು ಆಶ್ಚರ್ಯ ಮತ್ತು ಖುಷಿ ಪಡುತ್ತಾರೆ. ಪಕ್ಕದಲ್ಲಿ ನಿಂತು ಪೋಟೊ ತೆಗೆಸಿಕೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ಇದೇ ರೀತಿಯ ಅನಿವಾರ್ಯತೆ ಬರಬಹುದು ಎಂದು ಹಿರಿಯ ರೈತರು ಕಳವಳ ವ್ಯಕ್ತಪಡಿಸುತ್ತಾರೆ.
ಹೊಸ ಹೊಸ ತಂತ್ರಜ್ಞಾನಗಳನ್ನು ಒಳಗೊಂಡು ಯಂತ್ರೋಪಕರಣ, ಟ್ರ್ಯಾಕ್ಟರ್ ಇತ್ಯಾದಿ ಯಂತ್ರಗಳನ್ನು ಕೊಂಡುಕೊಳ್ಳುವವರು ಕೊಳ್ಳುತ್ತಾರೆ. ವಿಶೇಷವೆಂದರೆ ರೈತರು ಕೃಷಿ ಮೇಳದಲ್ಲಿ ಏನಾದರೂ ಖರೀದಿಸಿದರೆ ಸಬ್ಸಿಡಿ ಸಿಗಬಹುದು ಏನೋ ಎಂಬ ಅಭಿಲಾಷೆಯಿಂದ ಕೃಷಿ ಮೇಳಕ್ಕೆ ಬರುತ್ತಾರೆ. ಅದೇ ರೀತಿ ವ್ಯವಸಾಯಕ್ಕೆ ಬೇಕಾದ ಸಲಕರಣೆಗಳನ್ನು ಕೊಂಡೊಯ್ಯುವ ರೂಢಿ ರೈತರು ಬೆಳೆಸಿಕೊಂಡಿದ್ದಾರೆ.

ಬರುವಂತಹ ರೈತರಿಗೆ ಮದ್ಯಾಹ್ನದ ಊಟವನ್ನಾದರೂ ಹಾಕಿಸಿದರೆ ದೂರದಿಂದ ಬರುವ ಕೃಷಿ ಕಾರ್ಮಿಕ ಮತ್ತು ಕೃಷಿ ಪ್ರೇಮಿಗಳಿಗೆ ಮತ್ತಷ್ಟು ರೈತ ಜಾತ್ರೆಯಲ್ಲಿ ಓಡಾಡಿ ವೀಕ್ಷಿಸಲು, ಖರೀದಿ ಮಾಡಲು ಹುಮ್ಮಸ್ಸು ಬರಬಹುದು. ಬಿಸಿಲಿನ ಬೇಗೆ ಇರುವ ಕಾರಣ ಅಲ್ಲಲ್ಲಿ ನೀರಿನ ಅರವಟಿಗೆಗಳನ್ನು ಅಳವಡಿಸಿದ್ದು ಸ್ವಾಗತಾರ್ಹ.
ಅದೇನೇ ಇದ್ದರೂ ಕೃಷಿ ಮೇಳ ಹೀಗೆಯೇ ಮುಂದುವರೆಯಲಿ, ಮತ್ತಷ್ಟು ಕೃಷಿ ಪ್ರೇಮಿಗಳನ್ನು ಹುಟ್ಟಹಾಕಲಿ ಎಂಬುದೊಂದೇ ಸಾರ್ವಜನಿಕರ ಆಶಯ. ಇಂತಹ ‘ರೈತ ಹಬ್ಬ’ಕ್ಕೆ ಸಾಕ್ಷಿಯಾದ ಕೃಷಿ ಮೇಳವು ಸೆ.24ಕ್ಕೆ ನಾಲ್ಕನೇ ದಿನ ಪೂರೈಸುತ್ತದೆ. ಬರುವ ವರ್ಷವಾದರೂ ಈ ಸಲದ ಏರುಪೇರು, ಊಟದ ವ್ಯವಸ್ಥೆ ಇತ್ಯಾದಿ ಅವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಸೂಕ್ತ ವ್ಯವಸ್ಥೆಯೊಂದಿಗೆ ಕೃಷಿ ಮೇಳ ಆಯೋಜಿಸಲಿ ಎಂಬುದೇ ರೈತರ ಅಭಿಮತವಾಗಿದೆ.
