ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿ ಸರ್ವರೂ ಸಮಾನರು ಎಂಬ ಸಂದೇಶ ಜಗತ್ತಿಗೆ ಕೊಟ್ಟ ಕನಕದಾಸರ ಆದರ್ಶ ಯುವ ಪೀಳಿಗೆಗೆ ಮಾದರಿ. ಅವರ ಬದುಕಿನ ಮಜಲುಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವಾಗಬೇಕು ಎಂದು ಧಾರವಾಡ ಕಸಾಪ ತಾಲೂಕ ಗೌರವ ಕಾರ್ಯದರ್ಶಿ, ಸಾಹಿತಿ ಮಾರ್ತಾಂಡಪ್ಪ ಕತ್ತಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನಕ ಜಯಂತಿ ಅಂಗವಾಗಿ ಕಸಾಪ ಸಭಾಭವನದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕನಕದಾಸರ ಬದುಕಿನ ಕುರಿತು ಉಪನ್ಯಾಸ ಮಾಡಿ ಮಾತನಾಡುತ್ತಾ, ಅಸಮಾನತೆ ತುಂಬಿದ್ದ ಸಮಾಜದಲ್ಲಿ, ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಜನರನ್ನು ಎಚ್ಚರಿಸಿದ ಕನಕದಾಸರು ತಮ್ಮ ಜಾಗೃತ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಭಕ್ತಿ ಮಾರ್ಗದತ್ತ ಜನರನ್ನು ಕೊಂಡೊಯ್ದ ಕನಕದಾಸರ ಮೌಲ್ಯಯುತ ಕೀರ್ತನೆಗಳ ಸಾರವನ್ನು ಎಲ್ಲರೂ ಅರಿಯಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಸಮಾನತೆ ವಿರುದ್ಧ ಹೋರಾಡಿದ ದಾರ್ಶನಿಕರ ಪಟ್ಟಿಗೆ ಕನಕದಾಸರು ಸೇರುತ್ತಾರೆ. ಸಮಾನತೆಗಾಗಿ ಇಡೀ ಬದಕನ್ನೆ ಸವೆಸಿದ ಕನಕದಾಸರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಜಿನದತ್ತ ಹಡಗಲಿ ಮತ್ತು ಕೆ ಎಸ್ ಕೌಜಲಗಿ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಉಮಾ ಬಾಗಲಕೋಟ ಇದ್ದರು. ಗಾಯಕ ಬಸವರಾಜ ಗೊರವರ, ಪ್ರೇಮಾನಂದ ಶಿಂಧೆ, ಮೇಘಾ ಹುಕ್ಕೇರಿ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ ನಿರೂಪಿಸಿದರು, ಪ್ರಮೀಳಾ ಜಕ್ಕಣ್ಣವರ ಸ್ವಾಗತಿಸಿದರು. ಉಮಾ ಬಾಗಲಕೋಟ ವಂದಿಸಿದರು.
ಇದನ್ನು ಓದಿದ್ದೀರಾ? ಮನುವಾದದ ಮಡಿವಂತಿಕೆ, ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಬಂಡಾಯಗಾರ ಕನಕದಾಸ
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಸಂಘಟಕ ಎಫ್ ಬಿ ಕಣವಿ, ಶಾಂತವೀರ ಬೇಟಗೇರಿ, ಡಾ. ಶರಣಮ್ಮ ಗೋರೆಬಾಳ, ಸುಮಂಗಲಾ ದಂಡಿನ, ಗೀತಾ ಕುಲಕರ್ಣಿ, ಗಂಗಾಧರ ಗಾಡದ, ಉದಯಚಂದ ದಿಂಡವಾರ, ಎಮ್ ಪಿ ಕುಂಬಾರ, ಸಿದ್ದರಾಮ ಹಿಪ್ಪರಗಿ, ಗೀತಾ ಕುಲಕರ್ಣಿ, ಸುನಂದಾ ಯಡಾಲ್ ಇದ್ದರು.