ಸಜೀವ ಮತ್ತು ನಿರ್ಜೀವಗಳೂ ಸಹ ಮಾನವನ ಔನ್ಯತ್ಯದ ಸಲುವಾಗಿ ಸದಾ ತೊಡಗಿಕೊಂಡಿರುವುದನ್ನು ಶರಣರು ಅರಿತಿದ್ದರು. ಆದ್ದರಿಂದ ವಚನಗಳ ರಕ್ಷಣೆ ಮತ್ತು ಪೂಜೆ ಅವಶ್ಯಕ ಎಂದು ಶರಣ ಸಾಹಿತಿ ರಂಜಾನ್ ದರ್ಗಾ ಹೇಳಿದರು.
ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನೀಲಮ್ಮ ಎಂ ಸಾತ್ಮಾರ ಮತ್ತು ಮಹಾದೇವಗೌಡ ಎಸ್ ಸಾತ್ಮಾರ ದತ್ತಿ ಉಪನ್ಯಾಸ ಮತ್ತು ಈಶ್ವರ ಇಟಗಿ ಅವರಿಂದ ರಚಿಸಲಾದ “ಧರ್ಮಾಂತರಂಗ ಮತ್ತು ಗುರು ಕಾರುಣ್ಯ” ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು.
ಕೃತಿಗಳನ್ನು ಬಿಡುಗಡೆಗೊಳಿಸಿದ ಶರಣ ಸಾಹಿತ್ಯ ಚಿಂತಕ, ಹಿರಿಯ ಸಾಹಿತಿಗಳು ಡಾ. ರಂಜಾನ್ ದರ್ಗಾ ಮಾತನಾಡಿ, ಸಮಾನತೆ ಸಾರುವ, ಕಾಯಕ ಮತ್ತು ದಾಸೋಹಗಳ ಬಗ್ಗೆ ವಿವರಿಸುತ್ತ ಸಜೀವ ಮತ್ತು ನಿರ್ಜೀವಗಳೂ ಸಹ ಮಾನವನ ಔನ್ಯತ್ಯದ ಸಲುವಾಗಿ ಸದಾ ತೊಡಗಿಕೊಂಡಿರುವುದನ್ನು ಶರಣರು ಅರಿತಿದ್ದರು. ಆದ್ದರಿಂದ ಅವುಗಳ ರಕ್ಷಣೆ ಮತ್ತು ಪೂಜೆ ಅವಶ್ಯಕ ಎಂದು ಪ್ರತಿಪಾದಿಸಿದರು.
ಬಸವ ಧರ್ಮದ ಬಗೆಗಿನ ಚಿಂತನ ಕ್ರಮ ಬದಲಾಗಬೇಕು. ಬಸವಣ್ಣ ಒಂದು ವ್ಯಕ್ತಿಯಲ್ಲ ಒಟ್ಟೂ ಶರಣರ ಮೂಲ ದ್ರವ್ಯ. ಅಂದು ಗುರು ಶಿಷ್ಯ ವ್ಯವಸ್ಥೆ ಇರದ, ಸಮ ಸಮಾಜದ, ಸಮ-ಚಿಂತನ ಮತ್ತು ಮಂಥನದಿಂದ 12ನೇ ಶತಮಾನದ ಜೀವನಕ್ರಮದೊಂದಿಗೆ ಬಸವ ಧರ್ಮ ಹುಟ್ಟಿಬಂದಿದೆ. ಎರಡೂ ಕೃತಿಗಳ, ರಚನೆ ಮತ್ತು ಅವುಗಳ ಹಿಂದಿರುವ ಅಧ್ಯಯನಶೀಲತೆ ಮತ್ತು ಕಾಳಜಿ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಇವುಗಳ ಹಿಂದಿರುವ ವಿಷಯಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೊ. ಕೆ ಎಸ್ ಕೌಜಲಗಿ ವಚನ ಸಾಹಿತ್ಯದಲ್ಲಿ ಅಲ್ಲಮಪ್ರಭು ಕುರಿತು ಮಾತನಾಡಿದರು. ಕೃತಿ ರಚನೆಕಾರ ಈಶ್ವರ ಇಟಗಿ ಮಾತನಾಡಿ ಕೃತಿ ರಚನೆಗಳ ಹಿಂದಿನ ತಮ್ಮ ಆಲೋಚನಾ ಕ್ರಮ, ಹಿನ್ನೆಲೆ, ಅಧ್ಯಯನ ಮತ್ತು ನಿಲುವುಗಳನ್ನು ಮತ್ತು ಅವರು ಬೆಳೆದು ಬಂದ ದಾರಿಯನ್ನು ನೆನೆದರು.
ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಇಟಗಿ ಕುಟುಂಬ ನನಗೆ ವೈಯಕ್ತಿಕವಾಗಿ ಹತ್ತಿರವಾಗಿದ್ದಲ್ಲದೇ ಅವರ ಸಾಹಿತ್ಯಿಕ ಕೃಷಿ ಅಭಿನಂದನಾರ್ಹ. ಜಿಲ್ಲೆಯ ಎಲ್ಲರ ಕೃತಿ ಬಿಡುಗಡೆ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಪ್ರಯತ್ನ ನನ್ನ ಮತ್ತು ಜಿಲ್ಲಾ ಪರಿಷತ್ತಿನ ಏಕಮಾತ್ರ ಉದ್ದೇಶ ಎಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಸ್ಮಶಾನ ಭೂಮಿಯಲ್ಲಿ ‘ಇಂದಿರಾ ಕ್ಯಾಂಟೀನ್’ ನಿರ್ಮಾಣ : ತೆರವುಗೊಳಿಸಲು ಬಿಜೆಪಿ ಹರಸಾಹಸ?
ಕಾರ್ಯಕ್ರಮದಲ್ಲಿ ಪ್ರಮೀಳಾ ಜಕ್ಕಣ್ಣವರ, ಅಜ್ಜಪ್ಪ ಹೊರಕೇರಿ, ಶಿವಾನಂದ ಕರಡಿ, ವಿ ಎಸ್ ಶಿರಗುಪ್ಪಿ, ದತ್ತಿ ದಾನಿ ನಿವೃತ್ತ ಪ್ರಾಚಾರ್ಯ ಶಂಕರಗೌಡ ಸಾತ್ಮಾರ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಎ ಎಸ್ ಇಟಗಿ, ಡಾ. ಆರ್ ಬಿ ಖಾದಿರನಾಯಕರ, ಚಂದ್ರಶೇಖರ ಕುಬಿಹಾಳ, ಬಸವಂತಪ್ಪ ಕುಬಿಹಾಳ, ಸುವರ್ಣ ಸುರಕೊಡ, ಎಫ್ ಬಿ ಕಣವಿ, ಮಲ್ಲಮ್ಮ ವಡ್ಡಟ್ಟಿ, ಶಶಿಕಲಾ ಇಟಗಿ, ಮಂಜು ಇಟಗಿ, ನ್ಯಾಯವಾದಿ ಮಂಜುಳಾ ಪಡೆಸೂರ, ಎಸ್ ಸಿ ಜಾಲಿಕಟ್ಟಿ, ಪ್ರಸನ್ನ ಕುರ್ತಕೋಟಿ , ಜಿ ಆರ್ ಕಲ್ಮಠ ಇದ್ದರು.
ಡಾ. ಜಿನದತ್ ಹಡಗಲಿ ಸ್ವಾಗತಿಸಿದರು. ಡಾ. ಎಸ್ ಎಸ್ ದೊಡಮನಿ ನಿರೂಪಿಸಿದರು. ಸೋಮಶೇಖರ ಇಟಗಿ ವಂದನಾರ್ಪಣೆ ಮಾಡಿದರು.