ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಶಯದಂತೆ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಸಲಹೆಯಂತೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಕೆ. ಪಿ. ಮಾರ್ಗದರ್ಶನದಲ್ಲಿ 2024 ರ ಅಗಸ್ಟ ತಿಂಗಳಲ್ಲಿ ಅಖಂಡ ಧಾರವಾಡ ಜಿಲ್ಲೆಯ 77 ಸ್ವಾತಂತ್ರ್ಯ ಹೋರಾಟಗಾರರ ಕುರಿತಂತೆ ಆಯ್ದ 77 ಕಾಲೇಜುಗಳಲ್ಲಿ 77 ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಆ ಹಿನ್ನೆಲೆಯಲ್ಲಿ 77 ಉಪನ್ಯಾಸ ಮಾಲಿಕೆ ಗ್ರಂಥವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜ. 26ರಂದು ಬಿಡುಗಡೆಗೊಳಿಸಿದರು.
ಧಾರವಾಡದ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಆ ಸ್ಥಳಗಳ ಐತಿಹಾಸಿಕ ಮಹತ್ವವನ್ನು ಉಪನ್ಯಾಸಕರು ತಿಳಿಸಿಕೊಟ್ಟರು. ನಂತರದಲ್ಲಿ 77 ಉಪನ್ಯಾಸ ಮಾಲಿಕೆಗಳನ್ನು ಒಳಗೊಂಡ ಗ್ರಂಥವನ್ನು ಗೌರವ ಸಂಪಾದಕರಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪ್ರಧಾನ ಸಂಪಾದಕರಾಗಿ ಉಪನಿರ್ದೇಶಕ ಸುರೇಶ ಕೆ.ಪಿ., ಸಂಪಾದಕರಾಗಿ ಪ್ರೋ. ಪ್ರಕಾಶ ನಿಂ. ಸುಣಗಾರ, ಸಹ ಸಂಪಾದಕರಾಗಿ ಉದಯ ನಾಯಕ, ಅಶೋಕ ವಾಯ್.ಸವಣೂರ ಗ್ರಂಥ ರಚನೆಗೆ ಕಾರಣರಾಗಿದ್ದಾರೆ.
ಕಾರ್ಯಕ್ರಮದ ಆಯೋಜನೆಯಲ್ಲಿ ಮತ್ತು ಗ್ರಂಥ ರಚನೆಯಲ್ಲಿ ಧಾರವಾಡ ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಉಪನ್ಯಾಸ ನೀಡಿ, ಲೇಖನ ಬರೆದುಕೊಟ್ಟ ಎಲ್ಲ ಇತಿಹಾಸ ಉಪನ್ಯಾಸಕರ ಪಾತ್ರ ಹಿರಿದಾದದು. ಎಲ್ಲಾ ಕಾಲೇಜುಗಳ ಪ್ರಾಚಾರ್ಯರು, ಆಡಳಿತ ಮಂಡಳಿಯವರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಗ್ರಂಥದಲ್ಲಿ 77 ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ಸಾವಿರಾರು ಹೋರಾಟಗಾರರ ತ್ಯಾಗ, ಬಲಿದಾನ, ಕೆಚ್ಛೆದೆಯ ಹೋರಾಟದ ಚರಿತ್ರೆಯನ್ನು ಮತ್ತೊಮ್ಮೆ ಎಲ್ಲರಿಗೂ ನೆನಪಿಸಿಕೊಡುವ ಅದ್ಭುತವಾದ ಕಾರ್ಯ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸುರೇಶ ಕೆ.ಪಿ, ಹಿಂದುಳಿದ ಮತ್ತು ಅಲ್ಪ ಸಂಖ್ಯಾಯತ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಹಾಗೂ ಗ್ರಂಥ ಸಂಪಾದಕ ಪ್ರೋ. ಪ್ರಕಾಶ ನಿಂ. ಸುಣಗಾರ, ಅಧ್ಯಕ್ಷ ಉದಯ ನಾಯಕ, ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಗಣ್ಯ ನಾಗರೀಕರು ಭಾಗವಹಿಸಿದ್ದರು.