ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸಿದ್ದು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ದೃಢವಾಗಿ ನಂಬಿದ್ದರು. ಕಲ್ಯಾಣದಲ್ಲಿ ಅತೀ ಹೆಚ್ಚು ಕುಶಲಕರ್ಮಿಗಳು ಸಿಗುತ್ತಾರೆ. ಕುಶಲಕರ್ಮಿಗಳೆಲ್ಲ ಬಸವಣ್ಣನವರಿಗೆ ಘನತೆ ತಂದುಕೊಟ್ಟರು ಎಂದು ಚಿಂತಕ ರೆಹಮತ್ ತರೀಕೆರೆ ಹೇಳಿದರು.
ಆದ್ಯ ವಚನಕಾರ ಜೇಡರ ದಾಸಿಮಯ್ಯ ಜಯಂತುತ್ಸವದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ, ಜೇಡರ ದಾಸಿಮಯ್ಯ ವಚನಗಳ ದತ್ತಿ ಉಪನ್ಯಾಸದಲ್ಲಿ ನೇಕಾರ ಸಂಸ್ಕೃತಿ ಮತ್ತು ಅನುಭಾವ ವಿಚಾರವಾಗಿ ಅವರು ಮಾತನಾಡುತ್ತಾ, ಆದ್ಯ ವಚನಕಾರ ದೇವರ ದಾಸಿಮಯ್ಯ ಅನ್ನುವದಕ್ಕಿಂತ ಜೇಡರ ದಾಸಿಮಯ್ಯ ಅನ್ನುವುದು ಸೂಕ್ತವಾಗುತ್ತದೆ. ವಿಶೇಷವಾಗಿ ದಾಸಿಮಯ್ಯ ತಮ್ಮ ವಚನಗಳಲ್ಲಿ ಅತ್ಯಂತ ಹೆಚ್ಚು ಪ್ರಾಣಿ ರೂಪಕಗಳನ್ನು ಬಳಸುತ್ತಾರೆ. ಕಲ್ಯಾಣದಲ್ಲಿ ಸಾಮಾನ್ಯರು ಲಿಂಗದೀಕ್ಷೆ ಪಡೆದು ಶರಣರಾಗಿ ರೂಪಾಂತರವಾದರು. ಕಲ್ಯಾಣವೆಂಬುದು ಪಟ್ಟಣವಾಗಿತ್ತು ಆದ್ಧರಿಂದ ಎಲ್ಲ ರೀತಿಯ ಕುಶಲಕರ್ಮಿಗಳು ಅಲ್ಲಿಗೆ ಧಾವಿಸಿದರು.

ಮುಖ್ಯವಾಗಿ ಶರಣರು ಚಲನೆಯ ತತ್ವವನ್ನು ಪ್ರತಿಪಾದನೆ ಮಾಡುತ್ತಾರೆ. ಕುಶಲಕರ್ಮಿಗಳಲ್ಲಿ ಕಾಯಕನಿಷ್ಠೆ ಇತ್ತು. ಕಾಯಕದೊಂದಿಗೆ ವೃತ್ತಿಧರ್ಮವನ್ನು ಪಾಲಿಸಿದರು. ಅನುಭವ ಮೂಲಕ ಅನುಭಾವದ ಶಿಖರವನ್ನೇರಿದರು. ಕಲ್ಯಾಣದಲ್ಲಿ ಎಲ್ಲ ರೀತಿಯ ಸಮಾನತೆ ಇತ್ತು. ಸಮಾಜದಲ್ಲಿ ಸಮಾನತೆ ತರುವುದು ಕಷ್ಟವಾದರೂ ಸಮಾನತೆಯ ಕನಸು ಕಾಣುವುದ ನಿಲ್ಲಿಸಬಾರದು ಎಂಬ ಅಂಬೇಡ್ಕರರ ಮಾತನ್ನು ಈ ವೇಳೆ ನೆನಪಿಸಿಕೊಂಡರು. ಬಹುಶಃ ಬಸವಣ್ಣನವರ ಕಾಲದಲ್ಲಿ ಕುಶಲಕರ್ಮಿಗಳ ಶ್ರಮಕ್ಕೆ ಅಷ್ಟೊಂದು ಬೆಲೆ ಇರಲಿಲ್ಲ ಅನಿಸುತ್ತದೆ. ಅದರಿಂದ ನೊಂದು, ಬೆಂದ ಎಲ್ಲ ಕಾಯಕ ವರ್ಗದವರು ಬಸವಣ್ಣನವರ ಸಾಮಿಪ್ಯ ಬಯಸಿ ಬಂದರು. ಇದರಿಂದ ಚಲನಶೀಲ ತತ್ವಗಳು ಬಹಳ ಮುಖ್ಯವಾಗಿವೆ ಎಂದು ಸಾಬೀತಾಯಿತು ಎಂದರು.
ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕಿ ಶಾಂತಾ ಇಮ್ರಾಪುರ ಮಾತನಾಡಿ, ದೇವರ ದಾಸಿಮಯ್ಯ ಮುಂಬರುವ ಶರಣರಲ್ಲಿ ವೈಚಾರಿಕತೆಯ ಬೀಜ ಬಿತ್ತಿದರು. ದಾಸಿಮಯ್ಯ ವಚನ ಚಳುವಳಿಗೆ ತಾತ್ವಿಕ ನೆಲೆಗಟ್ಟು ತಂದುಕೊಟ್ಟರು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಧರ್ಮದ ಕಾಲಂ’ನಲ್ಲಿ ‘ನವಬೌದ್ಧ’ ಎಂದು ನಮೂದಿಸಲು ಮೂಲನಿವಾಸಿ ದ್ರಾವಿಡ ಒಕ್ಕೂಟ ಕರೆ
ಈ ವೇಳೆ ಸತೀಶ್ ತುರಮರಿ, ಶಂಕರ ಹಲಗತ್ತಿ, ವೀರಣ್ಣ ವಡ್ಡಿನ, ಜಿನದತ್ತ ಹಡಗಲಿ, ಬಸವಪ್ರಭು ಹೊಸಕೇರಿ, ಪ್ರೊ. ಐ ಜಿ ಸನದಿ, ಸುರೇಶ್ ಭಂಡಾರಿ ಇದ್ದರು.