ಕಿಡಿಗೇಡಿಗಳು ರಾತ್ರೋರಾತ್ರಿ ತಮ್ಮ ಒಂದೂವರೆ ಎಕರೆ ಹತ್ತಿ ಬೆಳೆಗೆ ಕಳೆನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ್ದಾರೆ ಎಂದು ರೈತ ಧಾರವಾಡ ತಾಲೂಕಿನ ಗರಗ ಗ್ರಾಮದ ಗಂಗಪ್ಪ ಬಾರ್ಕಿ ಎಂಬ ರೈತ ಆರೋಪಿಸಿದ್ದಾರೆ.
ಗಂಗಪ್ಪ ಬಾರ್ಕಿ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ನೀರಿಗೆ ಬರವಿದ್ದರೂ, ಈ ರೈತ ನೀರು ಹಾಯಿಸಿ ಹತ್ತಿ ಬೆಳೆದಿದ್ದರು. ಸೊಂಪಾಗಿ ಬೆಳೆದ ಹತ್ತಿಯ ಫಸಲು ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಹತ್ತಿ ಬೆಳೆಗೆ ಕಳೆನಾಶಕ ಹೊಡೆದಿದ್ದಾರೆ. ಇದರಿಂದಾಗಿ ಈಗ ಬೆಳೆಯೆಲ್ಲ ಒಣಗುತ್ತಿದೆ.
ಬೆಳೆ ನಾಶವಾಗಿರುವ ಬಗ್ಗೆ ನೋವು ಹಂಚಿಕೊಂಡ ರೈತ ಗಂಗಪ್ಪ ಬಾರ್ಕಿ,ʼಚೆನ್ನಾಗಿದ್ದ ಬೆಳೆ ಏಕಾಏಕಿ ಒಣಗುತ್ತಿರುವುದನ್ನು ಕಂಡು ಬೆಳೆಗೆ ರೋಗ ಬಂದಿದೆಯಾ ಎಂಬ ಸಂಶಯದಿಂದ ಔಷಧಿ ಅಂಗಡಿಗೆ ತೋರಿಸಿಕೊಂಡು ಬಂದಿದ್ದೇವೆ. ಕೃಷಿ ಕಾಲೇಜಿನವರೂ ಬಂದು ಪರೀಕ್ಷೆ ಮಾಡಿ ಹೋಗಿದ್ದಾರೆ. ಬೆಳೆಗೆ ಯಾವುದೇ ರೋಗ ಬಂದಿಲ್ಲ. ಕಳೆನಾಶಕ ಸಿಂಪಡನೆ ಆಗಿದೆ ಎಂದು ಅವರೆಲ್ಲರೂ ಹೇಳಿದ್ದಾರೆ. ಯಾರು ಹೀಗೆ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಗೊತ್ತಿಲ್ಲ,ʼ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರೈತ ಒಂದು ಎಕರೆಯಲ್ಲಿ ಒಂದೂವರೆ ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದರು. ಮೊದಲ ಬೆಳೆಯಲ್ಲಿ ಒಂದು ಲಕ್ಷ ನಷ್ಟವಾಗಿತ್ತು. ಆದರೆ, ನಂತರ ಗಿಡಗಳು ಚಿಗುರೊಡೆದು 15ಲಕ್ಷ ರೂ ಲಾಭ ಬಂದಿತ್ತು. ಅದಕ್ಕೆ ಯಾರೋ ಹೊಟ್ಟೆಕಿಚ್ಚಲ್ಲಿ ಈ ರೀತಿ ಮಾಡಿರಬಹುದು ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಯಾವುದೋ ಹಳೆಯ ದ್ವೇಷಕ್ಕೆ, ರಾತ್ರೋರಾತ್ರಿ ಕಳೆ ನಾಶಕ ಹೊಡೆದು ಯಾರೋ ಕಿಡಿಗೇಡಿಗಳು ಹೀಗೆ ಮಾಡಿರಬಹುದು ಅಥವಾ ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.