ಭಾರತ ದೇಶದಲ್ಲಿ ವಾಸಿಸುವ ಜನರಿಗೆ ಸಂವಿಧಾನವು ಒಂದು ವರವಾಗಿ ದೊರೆತಿದೆ. ಆದರೆ ಅದರ ಕುರಿತು ಸರಿಯಾದ ಜ್ಞಾನ ಸಮಾಜದಲ್ಲಿರುವ ಜನರಿಗಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬರ ಜೀವನಾಡಿಯಿದ್ದಂತೆ. ಅದರ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ತಿಳುವಳಿಕೆಯನ್ನು ಮೂಡಿಸುವ ಕಾರ್ಯವನ್ನು ರಂಗಾಯಣ ಯಶಸ್ವಿಯಾಗಿ ಮಾಡಿದೆ ಎಂದು ಹಿರಿಯ ಚಿಂತಕ ಡಾ. ರಂಜಾನ ದರ್ಗಾ ಹೇಳಿದರು.
ಧಾರವಾಡ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್ಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿಣ್ಣರಮೇಳ-2025ರ “ಚಿಣ್ಣರ ನಾಟಕೋತ್ಸವ”ವದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳ ಬಾಲ್ಯವನ್ನು ಇಂದಿನ ಆಧುನಿಕ ಸಮಾಜ ಕಸಿದುಕೊಂಡಿದೆ. ರಂಗಭೂಮಿಯಲ್ಲಿ ಮಾನವೀಯ ಸಂಬಂಧದ ಗುಣವಿದೆ. ಯಾವುದೇ ಮೇಲು-ಕೀಳು ಎಂಬ ಭೇದ ಇಲ್ಲದೆ ಸಮಚಿತ್ತದಿಂದ ಸಂಗೀತ, ನಾಟಕ, ಚಿತ್ರಕಲೆ ಸೇರಿದಂತೆ ಇತರೆ ಸಾಂಸ್ಕøತಿಕ ರಂಗ ಚಟುವಟಿಕೆಳಲ್ಲಿ ಮಕ್ಕಳು ತಲ್ಲೀಣರಾಗಿ ಶಿಬಿರದಲ್ಲಿ ತೊಡಗಿಕೊಂಡಿರುವುದು ರಂಗಾಯಣದ ಹೆಮ್ಮೆ ಎಂದರು.

ಕೇವಲ 25 ದಿನಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಚಟುವಟಿಕೆಗಳನ್ನು ಕಲಿಸಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾಲಕರು ಮಕ್ಕಳಿಗೆ ಈ ರೀತಿಯ ಶಿಬಿರಗಳಿಗೆ ಕರೆದುಕೊಂಡು ಹೋಗುವುದು ಕಾಣಸಿಗುವುದಿಲ್ಲ. ಆದರೆ ಧಾರವಾಡದಲ್ಲಿ ರಂಗಾಯಣಕ್ಕೆ ಪ್ರತಿ ಪಾಲಕರು ಮಕ್ಕಳು ಏನನ್ನಾದರೂ ಕಲಿಯಲಿ ಎಂಬ ಭಾವನೆಯಿಂದ ಶಿಬಿರಕ್ಕೆ ಸೇರಿಸಿ, ಪ್ರೋತ್ಸಾಹ ನೀಡಿರುವುದು ಉತ್ತಮ ಸಂಗತಿ. ಇಂತಹ ಕಾರ್ಯ ಯೋಜನೆಗಳಿಂದ ರಂಗಾಯಣದ ಶಕ್ತಿ ಹಿರಿಯದಾಗಿದೆ ಎಂದು ಶ್ಲಾಘಿಸಿದರು.
ಕಲಾಸಂಗಮ ಅಧ್ಯಕ್ಷ ಡಾ. ಪ್ರಭು ಹಂಚಿನಾಳ ಮಾತನಾಡಿ, ಮೊಬೇಲ್ ಗೀಳಿನಿಂದ ಮಕ್ಕಳನ್ನು ಹೊರತಂದು, ಅವರಲ್ಲಿರುವ ಕಲೆಗಳನ್ನು ಗುರುತಿಸಿ, ಅವರ ಸರ್ವಾಂಗೀಣ ಬೆಳವಣಿಗೆಗೆ ರಂಗಾಯಣ ಸಾಕ್ಷಿಯಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ, ಜನಪದ ಕಲೆಗಳ ಪರಿಚಯ, ಆರೋಗ್ಯದ ಕುರಿತು ಮನೆಮದ್ದಿನ ಉಪಯೋಗ, ಮಕ್ಕಳ ಹಕ್ಕುಗಳ ಕುರಿತು ಅರಿವು ಸೇರಿದಂತೆ ಹಲವಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ತಿಳುವಳಿಕೆಯನ್ನು ಈ ಶಿಬಿರದ ಮೂಲಕ ಮಾಡಲಾಗಿದೆ. ಎಲ್ಲ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಭಾಗವಹಿಸಿ ಇಂದು ಅದ್ಭತ ಸಂದೇಶ ಸಾರುವಂತಹ ನಾಟಕಗಳನ್ನು ಪ್ರದರ್ಶಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ಮಕ್ಕಳನ್ನು ಹಿಡಿಯುವುದು ತುಂಬಾ ಕಷ್ಟಕರವಾದುದು. ಆದರೆ ನಮ್ಮ ಶಿಬಿರದಲ್ಲಿ ನಾಟಕ ನಿರ್ದೇಶಕರು, ಸಹನಿರ್ದೇಶಕರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು, ಉತ್ತಮ ರೀತಿಯಲ್ಲಿ ನಾಟಕಗಳನ್ನು ಕಲಿಸಿದ್ದಾರೆ. ಅವರ ಶ್ರಮಕ್ಕೆ ಈ ನಾಟಕಗಳು ಸಾಕ್ಷಿಯಾಗಿವೆ. ಮಕ್ಕಳು ಶಿಬಿರದಲ್ಲಿ ಪಡೆದಂತಹ ರಂಗ ಕಲಿಕೆಯನ್ನು ಮುಂದಿನ ದಿನಗಳಲ್ಲಿಯೂ ರೂಢಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ರಂಗಾಯಣದ ಕೀರ್ತಿಯು ಶಿಖರದಷ್ಟೆ ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಈ ವೇಳೆ ರಂಗ ನಿರ್ದೇಶಕ ಬಿ. ಆಯ್. ಈಳಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಕುಮಾರ ಬೆಕ್ಕೇರಿ, ಶಿಬಿರ ನಿರ್ದೇಶಕ ಲಕ್ಷ್ಮಣ ಪಿರಗಾರ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿ, ವಂದಿಸಿದರು. ಪಾಲಕರು ಹಾಗೂ ಮಕ್ಕಳು ಶಿಬಿರದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ಸಮಗ್ರತೆ ತಂಡದವರು “ಕಂಸಾಳೆ”ಯನ್ನು ಪ್ರಸ್ತುತಪಡಿಸಿದರು. ಪ್ರಜಾಪ್ರಭುತ್ವ ತಂಡದವರು “ಮಕ್ಕಳ ರಾಜ್ಯ” ನಾಟಕವನ್ನು ಪ್ರದರ್ಶಿಸಿ, ಜನರ ಮನವನ್ನು ಸೆಳೆದರು.
ಇದನ್ನು ಓದಿದ್ದೀರಾ? ಧಾರವಾಡ | ಉದ್ಯಾನವನ ಸ್ವಚ್ಛಗೊಳಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ NSS ಶಿಬಿರಾರ್ಥಿಗಳು
ಕಾರ್ಯಕ್ರಮದಲ್ಲಿ ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಹಾಗೂ ಜಾನಪದ ನೃತ್ಯಗಳು ಜರುಗಿದವು. ಶಿಬಿರದ ನಿರ್ದೇಶಕರು, ನಾಟಕ ನಿರ್ದೇಶಕರು ಹಾಗೂ ಸಹ ನಿರ್ದೇಶಕರನ್ನು ಸನ್ಮಾನಿಸಿದರು. ನಂತರ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.