ಸಮಸ್ತ ಭಾರತೀಯರಿಗೆ ಆಗಸ್ಟ್ 15 ಪರಮ ಪವಿತ್ರವಾದ ದಿನವಾಗಿದೆ. 1947ರ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಅಂತ್ಯವಾಗಿ, ಭಾರತ ಸ್ವತಂತ್ರ ರಾಷ್ಟ್ರವಾಗಿ ಜನ್ಮ ತಾಳಿತು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ದೇಶಭಕ್ತರು ತಮ್ಮ ಜೀವನವನ್ನೆ ಮುಡಿಪಾಗಿಟ್ಟರು. ಅನೇಕ ದೇಶಭಕ್ತರ ಹೋರಾಟ, ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪ ಮಹಾಪೌರ ಸಂತೋಷ ಚವ್ಹಾಣ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಬಲಿದಾನ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ. ಅದೇ ರೀತಿ ಇಂದು “ವೀರ ಸಂಗೋಳ್ಳಿ ರಾಯಣ್ಣನ” ಹುಟ್ಟಹಬ್ಬವಾಗಿದೆ. ಅವರ ಪರಾಕ್ರಮ ಮತ್ತು ದೇಶಭಕ್ತಿ ಅನನ್ಯವಾಗಿತ್ತು. ಅದೇ ರೀತಿ ಇಂದು ಬಂಗಾಳದ ಶ್ರೇಷ್ಠ ಕ್ರಾಂತಿಕಾರಿ ಮತ್ತು ದಾರ್ಶನಿಕ ಅರಬಿಂದೋ ಘೋಷ್ ಅವರ ಹುಟ್ಟು ಹಬ್ಬವಾಗಿದೆ. ನಮ್ಮ ಹುಬ್ಬಳ್ಳಿ-ಧಾರವಾಡವು ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದಿದೆ. ಇಲ್ಲಿನ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದರು, ವಿಶೇಷವಾಗಿ ಧಾರವಾಡ ನಗರದ ಸಾಹಿತಿಗಳು ಸ್ವಾತಂತ್ರ್ಯದ ಸಂದೇಶವನ್ನು ಕಾವ್ಯ ಗೀತೆಗಳಲ್ಲಿ ಹರಿಸಿದರು. 1942 ರ ಅಗಸ್ಟನಲ್ಲಿ ದೇಶಾದ್ಯಾಂತ ಪ್ರಾರಂಭಗೊಂಡ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಹುತ್ಮಾತರಾದವರಲ್ಲಿ ನಮ್ಮ ಹುಬ್ಬಳ್ಳಿಯ ನಾರಾಯಣ ಗೋವಿಂದಪ್ಪ ಡೋಣಿರವರನ್ನು ಸ್ಮರಿಸಲು ಹೆಮ್ಮೆಯಾಗುತ್ತದೆ. ಮಹಾತ್ಮ ಗಾಂಧಿಜೀ, ಸುಭಾಸಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮುಂತಾದ ಅಪ್ರತಿಮ ಹೋರಾಟಗಾರರ ದೈರ್ಯ ಹಾಗೂ ಬಲಿದಾನಗಳೇ ನಮ್ಮ ಸ್ವಾತಂತ್ರ್ಯದ ಆಧಾರವಾಗಿದೆ” ಎಂದರು.
“ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಮುಕ್ತಿಯಲ್ಲ. ಇದು ಭಾವನೆಯ ಮುಕ್ತಿ, ಸಮಾನತೆ, ನ್ಯಾಯ, ಬಾಂಧವ್ಯ-ಎಲ್ಲರಿಗೂ ಸಮಾನ ಅವಕಾಶ ಎಂಬ ಅರ್ಥಹೊಂದಿದೆ. ನಮ್ಮ ಸಂವಿಧಾನವು ನಮಗೆ ಮಾತಿನ ಸ್ವಾತಂತ್ರ್ಯ, ಧರ್ಮ ನಿರಪೇಕ್ಷತೆ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ ಆದರೆ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತು ಪ್ರತಿದಿನ ಅದರ ಮೌಲ್ಯವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆ. ನಮಗೆ ಭಾರತದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ. ಆದರೆ, ಸುಂದರ ಭಾರತವನ್ನು ಕಟ್ಟಲು ಅದ್ಬುತ ಅವಕಾಶ ಸಿಕ್ಕಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು “ಮಹಾನಗರ ಪಾಲಿಕೆಯ ನನಗೆನು ಕೊಟ್ಟಿತು ಎಂಬುದನ್ನು ಯೋಚಿಸದೇ, ಮಹಾನಗರ ಪಾಲಿಕೆಗೆ ನಾನೇನು ಕೊಟ್ಟೆ ಎಂಬುದನ್ನು ಚಿಂತಸಬೇಕಿದೆ.” ಹುಬ್ಬಳ್ಳಿ-ಧಾರವಾಡ ನಗರವನ್ನು ಸ್ವಚ್ಚ ಸುಂದರ ನಗರವಾಗಿಸಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡ | ನಿಜ ಜೀವನದಲ್ಲಿ ʼತಲೆದಂಡʼ ನಾಟಕದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಿಸಿ ದಿವ್ಯ ಪ್ರಭು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ಶಂಕರಾನಂದ ಬನಶಂಕರಿ, ಪಾಲಿಕೆ ಸದಸ್ಯರು ಮತ್ತು ಎಲ್ಲ ವಲಯ ಆಯುಕ್ತರು ಮತ್ತು ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.