ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮುಬಣ್ಣ ಬಳಿದು, ರಾಜ್ಯದಲ್ಲಿ ಕೋಮುದ್ವೇಷ ಹರಡಲು ಬಿಜೆಪಿ ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಬಜರಂಗದಳ ಕಾರ್ಯಕರ್ತ ಭರತ್ ಕುಂಬ್ಡೇಲು ಯತ್ನಿಸಿದ್ದಾರೆ. ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಬೇಕು ಎಂದು ಜನಪರ ಸಂಘಟನೆಗಳು ಒತ್ತಾಯಿಸಿವೆ.
ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿರುವ ಡಿವೈಎಫ್ಐ, ಎಸ್ಎಫ್ಐ ಹಾಗೂ ಜನವಾದಿ ಮಹಿಳಾ ಸಂಘಟನೆಗಳ ಮುಖಂಡರು, ಕರಾವಳಿಯಲ್ಲಿ ಸಂಭವಿಸುವ ಎಲ್ಲ ಪ್ರಕರಣಗಳಿಗೂ ಕೋಮುಬಣ್ಣ ಬಳಿದು, ಕೋಮುದ್ವೇಷ ಪ್ರಚೋದಿಸುವ ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದ ಕರಾವಳಿ ಭಾಗವು ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಆದರೆ, ವಿದ್ಯಾರ್ಥಿ ದಿಗಂತ್ನ ನಾಪತ್ತೆ ಪ್ರಕರಣಕ್ಕೆ ಕೋಮು ಆಯಾಮ ಕೊಟ್ಟು ಶಾಸಕರಾದ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ಸೇರಿದಂತೆ ಹಲವರು ದ್ವೇಷ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಇನ್ನೂ ಪ್ರಕರಣ ದಾಖಲಾಗಿಲ್ಲ. ಪ್ರಚೋದನಾಕಾರಿ ಭಾಷಣ ಮಾಡಿದವರ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ ಎಂಬುದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಕೋಮು ದ್ವೇಷ ಬಿತ್ತುವವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಸರ್ಕಾರ ರಚಿಸಿದ ಬಳಿಕ, ತನ್ನ ಭರವಸೆಗಳನ್ನು ಕಾಂಗ್ರೆಸ್ ಮರೆತಿದೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ವರದಿ ಓದಿದ್ದೀರಾ?: ‘ಸಾಬರ ಬಜೆಟ್’ ಎಂದವರಿಗೆ ನಮ್ಮ ಹಳ್ಳಿಗಳ ಆರ್ಥಿಕ ಚಲನಶೀಲತೆಯ ಅರ್ಥ ಗೊತ್ತಿದೆಯೇ?
ಪ್ರತಿಭಟನೆಯಲ್ಲಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ”ವಿದ್ಯಾರ್ಥಿ ದಿಗಂತ್ ನಾಪತ್ತೆಯಾದ ಸಮಯದಲ್ಲಿ ಜನಪ್ರತಿನಿಧಿಗಳಾದ ಶಾಸಕರು ವಿದ್ಯಾರ್ಥಿಯ ಕುಟುಂಬಸ್ಥರಿಗೆ ಧೈರ್ಯ ತುಂಬಬೇಕಾಗಿತ್ತು. ಆದರೆ, ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ಫರಂಗಿಪೇಟೆ ಮತ್ತು ಅಮ್ಮೆಮಾರ್ ಪ್ರದೇಶದಲ್ಲಿರುವ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದರು. ಕೋಮುದ್ವೇಷದ ಪ್ರಚೋದನೆಗೆ ಯತ್ನಿಸಿದರು. ಇಂತಹವರು ಶಾಸಕರಾಗಲು ನಾಲಾಯಕ್” ಎಂದು ಆಕ್ರೋಶ ವ್ಯಕ್ತಪಡಿಸಿರು.
“ಬಿಜೆಪಿ ಶಾಸಕರ ಆಧಾರರಹಿತ ಆರೋಪಗಳು ಮುಸ್ಲಿಂ ಸಮುದಾಯವನ್ನು ಘಾಸಿಗೊಳಿಸಿವೆ. ಬಿಜೆಪಿ ಶಾಸಕರು ಮುಸ್ಲಿಮರಲ್ಲಿ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, “ವಿದ್ಯಾರ್ಥಿ ಪತ್ತೆಯಾದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಮೌನಕ್ಕೆ ಜಾರಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರು ಜನರ ಎದುರು ಬೆತ್ತಲಾಗಿದ್ದಾರೆ. ಅವರ ಬಂಡವಾಳ ಬಯಲಾಗಿದೆ. ತಮ್ಮದು ಜಾತ್ಯತೀತ ಸರ್ಕಾರ ಎಂದು ಕೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಸಮುದಾಯಗಳ ನಡುವೆ ದ್ವೇಷ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಖಜಾಂಚಿ ಮನೋಜ್ ವಾಮಂಜೂರು, ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ವಿನುಷ ರಮಣ, ಡಿವೈಎಫ್ಐ ಮುಖಂಡ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ಜೆಎಂಎಸ್ನ ಭಾರತೀ ಬೋಳಾರ, ಪ್ರಮೀಳಾ, ಅಸುಂತ ಡಿಸೋಜ, ಯೋಗಿತಾ, ಅಮ್ಮೆಮಾರ್ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹನೀಫ್, ಬಶೀರ್ ತಂಡೇಲ್, ವಿ.ಎಚ್ ಕರೀಂ, ಹೈದರ್ ಅಮ್ಮೆಮಾರ್, ಅಶ್ರಫ್ ಅಸ್ರ, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಮುಜಾಫರ್, ನೌಷದ್ ಕಣ್ಣೂರು, ಪಾಲಿಕೆ ಮಾಜಿ ಸದಸ್ಯ ದಯಾನಂದ ಶೆಟ್ಟಿ, ಶೇಖರ್ ಕುಂದರ್, ಆಸೀಫ್ ಬಂದರು, ನೌಶದ್ ಬೆಂಗರೆ, ಯೋಗೀಶ್ ಜಪ್ಪಿನಮೊಗರು, ಅನ್ಸಾರ್ ಫೈಸಲ್ ನಗರ, ರಫೀಕ್ ಪಿ.ಜಿ, ಮುಹಾಝ್ ಭಾಗವಹಿಸಿದ್ದರು.