ಭೋವಿ ನಿಗಮ ಬಡವರ ಬದುಕಲ್ಲಿ ಬೆಳಕಾಗಲಿ, ಬಡವರ ಜೀವನಕ್ಕೆ ಆಸರೆಯಾಗಲಿ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಬೋರನಹಳ್ಳಿ ಗ್ರಾಮದ ಅಂಗವಿಕಲ ಮಕ್ಕಳನ್ನು ಹೊಂದಿರುವ ಹುಲುಗಮ್ಮ ಕೋಂ ಚಂದ್ರಪ್ಪ ಕುಟುಂಬಕ್ಕೆ ಭೋವಿ ನಿಗಮದಿಂದ ಮಂಜೂರಾದ ಮೂರು ಲಕ್ಷ ಸಹಾಯಧನದ ಕಾರ್ಯಾದೇಶ ವಿತರಿಸಿ ಮಾತನಾಡಿದರು.
ಕಣ್ಣು, ಬಾಯಿ, ಮೂಗುಗಳ ಕಾರ್ಯನಿರ್ವಹಣೆ ಇಲ್ಲದೇ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಕ್ಕಳ ಪೋಷಣೆಗಾಗಿ ಪೋಷಕರಿಗೆ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಿ ಅಂಗಡಿ ನಡೆಸುವ ಮೂಲಕ ಕುಟುಂಬ ಸಾಗಿಸಲು ತುಂಬಾ ಸಹಕಾರಿಯಾಗಲಿದೆ. ಇಂತಹ ಕುಟುಂಬಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗುರುತಿಸಿ ನಿಗಮದಿಂದ ಸೌಲಭ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಅಲೆಮಾರಿ ಕುಟುಂಬ ವ್ಯವಸ್ಥೆ ಭೋವಿ- ಒಡ್ಡರದಾಗಿದೆ, ಜೀವನಕ್ಕಾಗಿ ಅಲೆಯುವ ಕುಟುಂಬಗಳಿಗೆ ನಿಗಮದ ಯೋಜನೆಗಳು ಆಸರೆಯಾಗಬೇಕು. ಬಡ ಕುಟುಂಬಗಳು ವಲಸೆ ಜೀವನ ಬಿಟ್ಟು ಒಂದೆಡೆ ಸೇರಿ ಜೀವನ ನಡೆಸುವಂತಾಗಬೇಕೆಂದು ತಿಳಿಸಿದರು.
ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, “ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಶ್ರೀಗಳು ಇಂತಹ ಕುಟುಂಬಗಳನ್ನು ಗುರುತಿಸಿ ತಿಳಿಸಿದಾಗ ಸೇವೆ ಮಾಡಲು ಸಾಧ್ಯವಾಗುತ್ತದೆ, ಬಡವರ ಪರವಾಗಿ ನಿಗಮ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಶ್ಲಾಘಿಸಿದರು.
ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವಂತಹ ಕಾರ್ಯ ಮಾಡುತ್ತಿದ್ದೇವೆ, ಬಡಕುಟುಂಬದಲ್ಲಿ ಈ ರೀತಿಯಾದ ಅಂಗವೈಕಲ್ಯ ಮಕ್ಕಳು ಇದ್ದಾಗ ಅವರ ಬದುಕಿನ ಬಗ್ಗೆ ಪೋಷಕರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಆರ್ಥಿಕ ಸಂಕಷ್ಟದಿಂದ ಏನನ್ನು ಮಾಡಲು ಆಗುವುದಿಲ್ಲ, ಅಂತಹವರ ಕೈಹಿಡಿಯುವ ಕೆಲಸ ನಿಗಮ ಮಾಡುತ್ತದೆ. ನಿಗಮದಿಂದ ನೇರವಾಗಿ ಅವರಿಗೆ ಮೂರು ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗಿದೆ. ಆ ಹಣದಿಂದ ಅಂಗಡಿ ನಿರ್ವಹಿಸುವುದರ ಮೂಲಕ ಕುಟುಂಬ ಸಾಗಿಸಬೇಕು. ಇದೇ ರೀತಿ ಇತರೆ ನಿಗಮಗಳು ಸಹ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಬಲರಿರುವವರು ಸಹ ಈ ರೀತಿಯ ಕುಟುಂಬಗಳಿಗೆ ಸಹಾಯಹಸ್ಥ ನೀಡಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ: ಜಾಮೀನು ಸಿಕ್ಕ ಬೆನ್ನಲ್ಲೇ ಕರ್ತವ್ಯಕ್ಕೆ ಹಾಜರಾದ ತಹಶೀಲ್ದಾರ್
ಭೋವಿ ಗುರುಪೀಠದಿಂದ ಕುಟುಂಬಕ್ಕೆ ಧವಸ ದಾನ್ಯಗಳನ್ನ ವಿತರಿಸಲಾಯಿತು. ಪೋಷಕರು ಮತ್ತು ಗ್ರಾಮಸ್ಥರು ಜಿಲ್ಲಾ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.
