ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಅಧಿಕಾರ ಮದ ಮತ್ತು ಧನ ಮದದಿಂದ ಪಿತ್ತ ನೆತ್ತಿಗೇರಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ ಕಿಡಿಕಾರಿದರು.
ಬೀದರ್ನಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶಾಸಕ ಯತ್ನಾಳ್ ಅವರು ‘ಬಸವಣ್ಣ ಹೊಳ್ಯಾಗ್ ಹಾರಿದ್ರು’ ಎಂದು ಹೇಳಿಕೆ ನೀಡಿ ಬಸವ ಭಕ್ತರಿಗೆ ಅವಮಾನಿಸಿದ್ದಾರೆ. ಕೂಡಲೇ ಯತ್ನಾಳ್ ಬಸವ ಭಕ್ತರಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ಯತ್ನಾಳ್ ಮತಿಭ್ರಮಣೆ ರೀತಿಯ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಹೇಳಿಕೆ ನೀಡಿದ್ದೂ ಅಲ್ಲದೇ ‘ನಾನೇ ಬಸವಣ್ಣ, ನಾನೇಕೆ ಕ್ಷಮೆ ಕೇಳಬೇಕು’ ಎಂಬ ಅಹಂಕಾರದ ಮಾತುಗಳು ಆಡುತ್ತಿರುವುದು ಎಲ್ಲ ಭಕ್ತರಿಗೆ ನೋವಾಗಿದೆ. ಹೀಗಾಗಿ ಡಿ.3ರಂದು ನಗರದಲ್ಲಿ ಯತ್ನಾಳ್ ಅವರಿಗೆ ಶಾಸಕ ಸ್ಥಾನದಿಂದ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಬಸವ ಮಂಟಪದ ಮಾತೆ ಸತ್ಯದೇವಿ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಹಾಗೂ ಪ್ರಮುಖರಾದ ಶಿವಶರಣಪ್ಪ ಪಾಟೀಲ, ಕಾಶಪ್ಪ ಸೀತಾ, ಬಸವಂತರಾವ ಬಿರಾದಾರ, ಶಾಂತಪ್ಪ ಮುಗಳಿ, ನಿರ್ಮಲಾ ನಿಲಂಗೆ, ಮಲ್ಲಿಕಾರ್ಜುನ ಶಾಪುರ, ಸಿದ್ಧವೀರ ಸಂಗಮದ, ಸತೀಶ ಪಾಟೀಲ, ಬಸಮ್ಮ ಬಿರಾದಾರ, ಈರಮ್ಮ ಕೋರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.