ಸುಂದರ, ಸಮೃದ್ಧ ಬೀದರ್ ಜಿಲ್ಲೆಗಾಗಿ ಶ್ರಮಿಸಿ, ರಾಜ್ಯದ ಅತಿ ಮುಂದುವರೆದ ಐದು ಜಿಲ್ಲೆಗಳ ಸಾಲಿನಲ್ಲಿ ಸ್ಥಾನ ಪಡೆಯುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ನಾಗರಿಕ ಅಭಿನಂದನಾ ಸಮಿತಿಯಿಂದ ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು. “ಇಬ್ಬರೂ ಸಚಿವರು, ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಜಿಲ್ಲೆಯ ಚಿತ್ರಣ ಬದಲಾಯಿಸಲಾಗುತ್ತದೆ. ಜಿಲ್ಲೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯದಲ್ಲಿ ನಮ್ಮ ಜಿಲ್ಲೆ ಉತ್ತಮ ಸ್ಥಾನದಲ್ಲಿದೆ. ಆದರೆ, ಜಿಲ್ಲೆಯನ್ನು ರಾಜ್ಯದ ಮುಂದುವರೆದ ಜಿಲ್ಲೆಗಳ ಸಾಲಿಗೆ ಸೇರಿಸುವ ಕೆಲಸ ಆಗಬೇಕಿದೆ” ಎಂದು ಹೇಳಿದರು.
“ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ, ಅಗತ್ಯ ಮೂಲಸೌಲಭ್ಯ ಒದಗಿಸಿ, ಶಕ್ತಿ ನೀಡಲಾಗುತ್ತದೆ. ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ಈ ಎರಡೂ ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ” ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
“ಹಿಂದಿನ ಸರ್ಕಾರ ಬೀದರ್ ವಿಶ್ವವಿದ್ಯಾಲಯ ಘೋಷಿಸಿ ಬರೀ 2 ಕೋಟಿ ರೂ. ಅನುದಾನ ನೀಡಿದೆ. ಈ ಅಲ್ಪಮೊತ್ತದಲ್ಲಿ ಹೊಸ ವಿಶ್ವವಿದ್ಯಾಲಯ ಕಟ್ಟುವುದು ಸಾಧ್ಯವಿದೆಯೇ? ನೂತನ ವಿವಿ ಸ್ಥಾಪಿಸಲು ಕನಿಷ್ಠ ₹500 ಕೋಟಿ ಅನುದಾನ ಬೇಕು. ವರ್ಷಕ್ಕೆ ಕನಿಷ್ಠ 50 ಕೋಟಿ ರೂ. ಅನುದಾನ ನೀಡಬೇಕಾಗುತ್ತದೆ” ಎಂದು ತಿಳಿಸಿದರು.
“ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಹೆಚ್ಚಿವೆ. ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಆಗಬೇಕಾಗಿದೆ. ನಗರದಲ್ಲಿರುವ ಬ್ರಿಮ್ಸ್ ಆಸ್ಪತ್ರೆಯನ್ನು ಸುಧಾರಿಸಬೇಕಾಗಿದೆ. ಟ್ರಾಮಾ ಕೇರ್, ನ್ಯೂರೋ, ಕ್ಯಾಥ್ಲ್ಯಾಬ್ ಆರಂಭಿಸಬೇಕಾಗಿದೆ. ಸಚಿವ ರಹೀಂ ಖಾನ್ ಹಾಗೂ ಹಿರಿಯ ಅದಿಕಾರಿಗಳೊಂದಿಗೆ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ” ಎಂದು ಹೇಳಿದರು.”
“ಕಲ್ಯಾಣ ಕರ್ನಾಟಕಕ್ಕೆ ಹಿಂದಿನ ಸರ್ಕಾರ ₹3,000 ಕೋಟಿ ಅನುದಾನ ನೀಡಿದ್ದಾಗಿ ಹೇಳಿತ್ತು. ಆದರೆ, ಖರ್ಚಾಗಿದ್ದು ಕೇವಲ ಶೇ.24 ರಷ್ಟು ಮಾತ್ರ” ಎಂದು ಕುಟುಕಿದ್ದು, “ನಮ್ಮ ಸರಕಾರ ₹5,000 ಕೋಟಿ ಅನುದಾನ ನೀಡಲಿದೆ. ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವುದು ಸೇರಿದಂತೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ನಿಗದಿತ ಮೊತ್ತ ಖರ್ಚು ಮಾಡಲಾಗುತ್ತದೆ” ಎಂದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, “15 ವರ್ಷಗಳ ಅವಧಿಯಲ್ಲಿ ಬೀದರ್ ಸಾಕಷ್ಟು ಬದಲಾಗಿದೆ. ಹೊಸ ಆಸ್ಪತ್ರೆಗಳು ಆರಂಭವಾಗಿವೆ. ಶಾಲೆ-ಕಾಲೇಜು, ವಸತಿಸಹಿತ ಶಾಲೆಗಳನ್ನು ಶುರು ಮಾಡಲಾಗಿದೆ. ರಸ್ತೆ, ಕುಡಿಯುವ ನೀರು, ಚರಂಡಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಬೀದರ್ ನಗರವನ್ನು ಸುಂದರಗೊಳಿಸುವ ಕೆಲಸ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲ್ಲಿದ್ದಲು ಕೊರತೆ; ವಿದ್ಯುತ್ ಘಟಕಗಳು ಸ್ಥಗಿತ
ಅಭಿನಂದನಾ ಭಾಷಣ ಮಾಡಿದ ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಬಿ ಜಿ ಮೂಲಿಮನಿ, “ಹೊಸ ವಿಶ್ವವಿದ್ಯಾಲಯದ ಬೆಳವಣಿಗೆಗೆ ಇಬ್ಬರೂ ಸಚಿವರು ಶ್ರಮಿಸುವ ವಿಶ್ವಾಸ ಇದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ ಹಲವು ವರ್ಷ ಕಳೆದಿವೆ. ಸರ್ಕಾರ ಸಾಕಷ್ಟು ಅನುದಾನವನ್ನೂ ನೀಡಿದೆ. ಆದರೂ, ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಭಾಗ ಹಿಂದಿಯೇ ಉಳಿದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಅಭಿನಂದನಾ ಸಮಿತಿ ಅದ್ಯಕ್ಷ ಡಾ. ಚೆನ್ನಸಬವಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಡಾ. ಬೆಲ್ದಾಳ್ ಶರಣರು, ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು, ಪ್ರಮುಖರುಗಳಾದ ಡಾ. ಎಸ್ ಬಲಬೀರಸಿಂಗ್, ಬಸವರಾಜ ಜಾಬಶೆಟ್ಟಿ, ಬಿ ಜಿ ಶೆಟಕಾರ್, ಡಾ. ರಜನೀಶ ವಾಲಿ, ಸಮಿತಿಯ ಸದಸ್ಯರುಗಳಾದ ಡಾ. ಗುರಮ್ಮ ಸಿದ್ದಾರೆಡ್ಡಿ, ವೈಜನಾಥ ಕಮಠಾಣೆ, ಅಮೃತರಾವ ಚಿಮಕೋಡೆ, ಡಾ.ಪೂರ್ಣಿಮಾ ಜಿ, ಗೀತಾ ಪಂಡಿತರಾವ್ ಚಿದ್ರಿ, ಶಂಕರರಾವ ಹೊನ್ನಾ, ಆನಂದ ದೇವಪ್ಪ ಸೇರಿದಂತೆ ಇತರರು ಇದ್ದರು.