ಎರಡು ವರ್ಷಗಳಿಂದಲೂ ಉತ್ತಮ ರಸ್ತೆಗಾಗಿ ಆಗ್ರಹಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಚಂದ್ರ ಲೇಔಟ್ನಲ್ಲಿರುವ ಡಾಗ್ ಸರ್ಕಲ್ ನಿವಾಸಿಗಳು ಮತ್ತೆ ಹೋರಾಟಕ್ಕಿಳಿದಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಲ್ಲಿ ದಾರಿ ಸಮಸ್ಯೆ ಕುರಿತು ತುರ್ತು ಸಭೆ ನಡೆಸಿದ ಡಾಗ್ ಸರ್ಕಲ್ ನಿವಾಸಿಗಳು, ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಚಂದ್ರ ಲೇಔಟ್ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಮಾತನಾಡಿ, “ಚಂದ್ರ ಲೇಔಟ್ ಮತ್ತು ಡಾಗ್ ಸರ್ಕಲ್ ನಿವಾಸಿಗಳು ಹಲವಾರು ವರ್ಷಗಳಿಂದ ಸಮರ್ಪಕ ರಸ್ತೆ ಸೌಲಭ್ಯಕ್ಕೆ ಒತ್ತಾಯಿಸುತ್ತಿದ್ದು, ಪ್ರತಿಭಟನೆ ನಡೆಸಿದ್ದೇವೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ ನಿವಾಸಿಗಳು ಬೆಳಗಾವಿ ಅಧಿವೇಶನದ ಬಳಿಕ ಡಾಗ್ ಸರ್ಕಲ್ ದಾರಿ ಸಮಸ್ಯೆ ಇತ್ಯರ್ಥಕ್ಕೆ ಮುಖ್ಯಮಂತ್ರಿ ಭೇಟಿ ಮಾಡಲು ತೀರ್ಮಾನಿಸಿದೆವು” ಎಂದು ತಿಳಿಸಿದರು.
ಎರಡು ವರ್ಷಗಳಿಂದಲೂ ಉತ್ತಮ ರಸ್ತೆಗಾಗಿ ಆಗ್ರಹಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಚಂದ್ರ ಲೇಔಟ್ನಲ್ಲಿರುವ ಡಾಗ್ ಸರ್ಕಲ್ ನಿವಾಸಿಗಳು ಮತ್ತೆ ಹೋರಾಟಕ್ಕಿಳಿದಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.@osd_cmkarnataka @siddaramaiah @INCKarnataka @spchitradurga pic.twitter.com/RfxWLiXje1
— eedina.com ಈ ದಿನ.ಕಾಮ್ (@eedinanews) December 23, 2024
“ಜಿಲ್ಲಾಧಿಕಾರಿ ಆದೇಶ, ಜಿಲ್ಲಾ ಉಸ್ತುವಾರಿ ಸಚಿವರ ಪತ್ರ, ಲೋಕೋಪಯೋಗಿ ಸಚಿವರ ಪತ್ರ, ಮುಖ್ಯಮಂತ್ರಿಗಳ ಪತ್ರಕ್ಕೂ ಜಗ್ಗದ ಅಧಿಕಾರಿಗಳು ಐ ಪಿ ಜಿ ಆರ್ ಎಸ್ ನಲ್ಲಿ ಸಲ್ಲಿಸಿದ ದೂರುಗಳನ್ನು ಪದೇ ಪದೇ ಅದೇ ಸುಳ್ಳು ವರದಿ ಅಪ್ಲೋಡ್ ಮಾಡಿ ಕಂಪ್ಲೆಂಟ್ ಮುಕ್ತಾಯ ಮಾಡಿರುತ್ತಾರೆ. ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರ ಮದ್ಯದಲ್ಲಿರುವ ದಾರಿಗೆ ಹೊಂದಿಕೊಂಡ 7 ನಗರ ಯೋಜನೆ ಅನುಮೋದಿತ ಬಡಾವಣೆ ನಕ್ಷೆಗಳಿದ್ದು. ನಿಖರವಾದ ಅಳತೆ ಮಾಡಿ ಒತ್ತುವರಿ ತೆರವು ಮಾಡಿಸಿ ರಸ್ತೆ ಮಾಡಿಕೊಡಲು ನಗರಸಭೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ” ಎಂದು ಡಾಗ್ ಸರ್ಕಲ್ ನ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.
“ಈ ಭಾಗದಲ್ಲಿ ಅಹಿಂದ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಳೆಗಾಲಕ್ಕೆ ಈ ರಸ್ತೆ ಕೆಸರುಗದ್ದೆಯಂತಾಗುತ್ತದೆ. ಬೇಸಿಗೆಯಲ್ಲಿ ತಗ್ಗು ಗುಂಡಿ ರಸ್ತೆ,ಕಲ್ಲು ಮುಳ್ಳು ಹಾವು ಚೇಳು ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ಓಡಾಡಬೇಕಾಗಿದೆ. ಮೂಲಭೂತ ಸೌಕರ್ಯ ವಂಚಿತ ನಮ್ಮ ರಸ್ತೆಗಾಗಿನ ಹೋರಾಟ ಇಲ್ಲಿನ ಯಾವುದೇ ಬಡಾವಣೆ ಮಾಲೀಕರ ಪರವೂ ಅಲ್ಲ, ವಿರುದ್ಧವೂ ಅಲ್ಲ, ಮಾನವೀಯ ನೆಲೆಗಟ್ಟಿನಲ್ಲಿ ಗೌರವಯುತವಾಗಿ ಬದುಕುವ ಕಾನೂನುಬದ್ದ ರಸ್ತೆ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಉಡುಪಿ | ಪಂಚರ್ ಹಾಕುವ ವೇಳೆ ಟೈರ್ ಸ್ಫೋಟ: ಗಾಳಿಯಲ್ಲಿ ಹಾರಿಬಿದ್ದ ಯುವಕ; ವಿಡಿಯೋ ವೈರಲ್
“ಒಂದು ಬಡಾವಣೆ ರಸ್ತೆಗಾಗಿ ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಅವರ ಪತ್ರಕ್ಕೆ ಬೆಲೆ ಕೊಡದೆ ಸತಾಯಿಸುತ್ತಿರುವ ಹಿರಿಯೂರು ನಗರಸಭೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ದೂರು ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು” ಎಂದು ಎಸ್ ವಿ ರಂಗನಾಥ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಿ ಜಿ ಗೌಡ,ಉಪಾಧ್ಯಕ್ಷ ಸ್ವಾಮಿ, ನಿರ್ದೇಶಕರಾದ ಷಫೀವುಲ್ಲಾ, ಶಶಿಕುಮಾರ್, ಅಶ್ವತ್ಥ ನಾರಾಯಣ, ಫಕೃದ್ಧೀನ್, ಪರಮೇಶ್ವರಪ್ಪ, ಗೋವರ್ದನ್, ಶ್ರೀನಿವಾಸ್, ಜಾಫರ್ ಷರೀಫ್, ಸನಾವುಲ್ಲ, ರಂಗಸ್ವಾಮಿ, ತಿಪ್ಪೇಸ್ವಾಮಿ, ಜಗದೀಶ್ ಅರಸ್, ನಾಗರಾಜ, ಆರ್ ಕೆ ಮಂಜು ಹಾಗೂ ಮಹಿಳೆಯರು ಮಕ್ಕಳು ಸೇರಿದಂತೆ ಮತ್ತಿತರರ ನಾಗರೀಕರು ಉಪಸ್ಥಿತರಿದ್ಧರು.
