ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಹಸು ಸಾಕಾಣಿಕೆಗೆ, ಸಣ್ಣ ಘಟಕಗಳ ಆಧಾರದಲ್ಲಿ ಪಾರಂಪರಿಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬಂದ ಸಮುದಾಯಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಒದಗಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಭಿವೃದ್ಧಿ ನಿಗಮಗಳ ಅನುದಾನದಡಿ ಸಾಲ ಸೌಲಭ್ಯ ಯೋಜನೆಗಳ ಅನುಷ್ಠಾನದ ಕುರಿತು ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಬೆ ನಡೆಸಿ, ಅವರು ಮಾತನಾಡಿದರು.
“ಸಾಮಾಜಿಕವಾಗಿ ಹಾಗೂ ಹಿಂದುಳಿದವರು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರ ಹಲವು ನಿಗಮಗಳನ್ನು ಸ್ಥಾಪಿಸಿ, ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಜಾರಿಗೊಳಿಸಿದೆ. ಆದರೆ, ಬ್ಯಾಂಕ್ಗಳು ಈ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿಗಮಗಳು ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ ಹಣದ ಬಳಕೆಯೇ ಆಗಿಲ್ಲ. ಸಿಬಿಲ್ ಸ್ಕೋರ್, ಸಾಲ ಮರುಪಾವತಿ ಅರ್ಹತೆ ಮುಂತಾದ ನೆಪಗಳನ್ನು ಹೇಳಿ ಸಾಲ ಸೌಲಭ್ಯಕ್ಕೆ ಸಲ್ಲಿದ ಅರ್ಜಿಯನ್ನು ಬ್ಯಾಂಕುಗಳಿಂದ ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕೇಂದ್ರ ಸರ್ಕಾರವು ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಗಳು, ಬಡವರು ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಸೌಲಭ್ಯ ನೀಡುವಾಗ, ಇದಕ್ಕೆ ಬ್ಯಾಂಕುಗಳು ಸ್ಕೋರ್ ಹಾಗೂ ಆಸ್ತಿ ಭದ್ರತೆಯನ್ನು ಬಯಸುವುದು ಎಷ್ಟು ಸರಿ” ಎಂದು ಕಡಿಕಾರಿದರು.
“ಸಿಬಿಲ್ ಸ್ಕೋರ್ಅನ್ನು ಮಾನದಂಡ ಮಾಡಿಕೊಳ್ಳುವುದು ಸರ್ಕಾರ ಜಾರಿ ಮಾಡಿರುವ ಯೋಜನೆಗಳ ಆಶಯಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಐದು ನಿಗಮಗಳ ಯೋಜನೆಯಡಿ ಬ್ಯಾಂಕುಗಳು ಇದವರೆಗೆ ಎಷ್ಟುಜನರಿಗೆ ಸಾಲ ಸೌಲಭ್ಯ ನೀಡಿವೆ” ಎಂದು ಸಚಿವ ಎ.ನಾರಾಯಣಸ್ವಾಮಿ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.
“ಕೇಂದ್ರ ಸರ್ಕಾರ ಪ್ರತಿ ವರ್ಷವೂ ಸೌಲಭ್ಯ ಯೋಜನೆಗೆ ಅನುದಾನವನ್ನು ಮೀಸಲಿಡುತ್ತದೆ. ಆದರೆ, ಕಳೆದ ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಸರ್ಕಾರದಿಂದ ಇರಿಸಿದ ಠೇವಣ ಹಣವೇ ಬಳಕೆಯಾಗಿಲ್ಲ. ಇದು ವಿರ್ಪಯಾಸದ ಸಂಗತಿಯಾಗಿದೆ. ಬ್ಯಾಂಕುಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿವೆ. ಇದು ಸಲ್ಲದು, ಯೋಜನೆಗಳನ್ನು ಜನರಿಗೆ ಬ್ಯಾಂಕುಗಳು ತಲುಪಿಸದಿದ್ದರೆ, ನಿಗಮಗಳಿಂದ ಇರಿಸಿದ ಠೇವಣಿ ಹಣವನ್ನು ಹಿಂಪಡೆದು ಬೇರೆ ಮಾರ್ಗವಾಗಿ ಜನರಿಗೆ ತಲುಪಿಸುವ ಬಗ್ಗೆ ಚಿಂತಿಸಬೇಕಾಗುವುದು” ಎಂದರು.
“ನಾಯಕರು, ಬೋವಿ, ಗೊಲ್ಲರು ಹಾಗೂ ಕುರುಬ ಸಮುದಾಯಗಳಿಗೆ ಸೇರಿದಂತೆ ಹಲವು ಸಮುದಾಯಗಳು ಸಾಂಪ್ರದಾಯಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಕುರಿ ಮೇಕೆ ಸಾಕಾಣಿಕೆ ಮಾಡಲು ಅಥವಾ 50 ಇಚ್ಛಿಸುವವರಿಗೆ 25 ಕುರಿಗಳ ಘಟಕಕ್ಕೆ ಕುರಿ, ಮೇಕೆ ಸಾಕಾಣಿಕೆ ಸಾಲವನ್ನು ಮಂಜೂರು ಮಾಡಬೇಕು.ಈ ಸಾಲಗಳನ್ನು ಮಂಜೂರು ಮಾಡುವಾಗ ಅಗತ್ಯ ದಾಖಲೆಗಳನ್ನು ಹೊರತುಪಡಿಸಿ, ಅನಗತ್ಯವಾಗಿ ಹೆಚ್ಚಿನ ದಾಖಲೆಗಳನ್ನು ಕೇಳಬಾರದು. ಪ್ರತಿ ಬ್ಯಾಂಕ್ ಶಾಖೆಗಳಿಗೂ ಗುರಿ ನಿಗದಿಪಡಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು” ಎಂದರು.
ಸಭೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್, ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ, ತುಮಕೂರು ಜಿ.ಪಂ. ಸಿಇಓ ಪ್ರಭು.ಜಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಪರಿಶಿಷ್ಟ ಜಾತಿ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ ರಂಜನೀಶ್ ಕುಮಾರ್ ಜೆನ್ಹಾ, ರಾಜ್ಯ ಮಟ್ಟದ ಬ್ಯಾಂಕ ಸಮಿತಿ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಿ.ಆರ್.ದಿಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕುಗಳು ಪ್ರಧಾನ ವ್ಯವಸ್ಥಾಪಕರು ಇದ್ದರು.