ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಗಮಿಸುವ ಹೊರರಾಜ್ಯಗಳ ಪ್ರತಿಯೊಬ್ಬ ಕಾರ್ಮಿಕರುಗಳಿಗೆ ಮಲೇರಿಯಾ, ಫೈಲೇರಿಯಾ ಸ್ಕಾನಿಂಗ್ ಅನ್ನು ಕಾರ್ಮಿಕರು ಬಂದ 4 ರಿಂದ 5 ದಿನಗಳ ಒಳಗೆ ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ಸಾಂಕ್ರಮಿಕ ರೋಗಗಳು ಹರಡುವುದನ್ನು ತಡೆಯಬಹುದು ಹಾಗೂ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ಪ್ರಾಥಮಿಕ ಹಂತದಲ್ಲಿ ಗುಣಪಡಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು.
ಅವರು ಇತ್ತೀಚೆಗೆ ನಗರಸಭಾ ಕಚೇರಿ ಸಭಾಂಗಣದಲ್ಲಿ ಮಳೆಗಾಲದಲ್ಲಿ ಹರಡುವ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಸಾಂಕ್ರಮಿಕ ರೋಗಗಳು ಬಾರದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವ ಬಗ್ಗೆ ಉಡುಪಿ ನಗರಸಭೆ ವತಿಯಿಂದ ಬಿಲ್ಡರ್ಸ್ ಅಸೋಸಿಯೇಶನ್ ನವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಾರ್ಮಿಕರನ್ನು ಒಂದೇ ಕಡೆ ಕೆಲಸಕ್ಕೆ ನಿಯೋಜಿಸದೇ, ಅವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡುವುದರಿಂದ ರೋಗಗಳ ಹರಡುವಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಿಲ್ಡರ್ಸ್ಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಅತ್ಯವಶ್ಯ ಎಂದರು.
ಆರೋಗ್ಯ ಇಲಾಖೆ ವತಿಯಿಂದ ಸಂಪೂರ್ಣ ಉಚಿತವಾಗಿ ಕಾರ್ಮಿಕರು ಇದ್ದ ಸ್ಥಳಕ್ಕೆ ತೆರಳಿ ಸ್ಕಾನಿಂಗ್ ಮಾಡಲಾಗುತ್ತಿದ್ದು, ಕಾರ್ಮಿಕರ ಆರೋಗ್ಯ ಕಾಪಾಡುವಲ್ಲಿ ಬಿಲ್ಡರ್ಸ್ಗಳು ಸಹಕಾರ ನೀಡಬೇಕು. ಮಲೇರಿಯಾ ಬಂದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ಡೆಂಗ್ಯೂ ಕಾಯಿಲೆಗೆ ಯಾವುದೇ ರೀತಿಯ ಸರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ ಎಂದರು.
ಡೆಂಗ್ಯೂ ಕಾಯಿಲೆ ಹರಡುವ ಸೊಳ್ಳೆಗಳು ಹಗಲು ಹೊತ್ತಿನಲ್ಲಿಯೇ ಕಚ್ಚುವುದರಿಂದ ಸೂಕ್ತ ರಕ್ಷಣೆ ಕೈಗೊಳ್ಳುವುದರೊಂದಿಗೆ ಮನೆಗಳ ಸುತ್ತಮುತ್ತ, ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ, ಮನೆಗಳ ಓವರ್ ಹೆಡ್ ಟ್ಯಾಂಕ್ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳದೇ ಮಲೇರಿಯಾ ಹಾಗೂ ಇತರೆ ಸಾಂಕ್ರಮಿಕ ರೋಗಗಳ ಹರಡುವಿಕೆ ಹೆಚ್ಚು ಕಂಡು ಬಂದಲ್ಲಿ ಅಂತಹ ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ತೆರಳಿ, ಸ್ಥಳ ಪರಿಶೀಲನೆ ನಡೆಸಿ, ದಂಡ ವಿಧಿಸಿ ಬಿಲ್ಡರ್ಸ್ಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಜೆ. ಮಹೇಶ್, ಪರಿಸರ ಅಭಿಯಂತರಾದ ಸ್ನೇಹ ಕೆ.ಎಸ್, ಕಚೇರಿ ವ್ಯವಸ್ಥಾಪಕ ನಾರಾಯಣ ಎಸ್.ಎಸ್, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ನಗರಸಭೆ ಕಚೇರಿ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಬಿಲ್ಡರ್ಸ್ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.