ಹತ್ತಾರು ವರ್ಷಗಳಿಂದ ಜಿಲ್ಲೆಯಲ್ಲಿ ದಲಿತರ ಸಮಸ್ಯೆಗಳು ಪರಿಹಾರ ಕಾಣದೆ ಕಡತಗಳಲ್ಲೇ ಕುಳಿತಿವೆ. ಈಗಲಾದರೂ ಶಾಶ್ವತ ಪರಿಹಾರ ನೀಡಿ ಎಂದು ಆಗ್ರಹಿಸಿ ದಸಂಸ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ದಸಂಸ ಮುಖಂಡರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು.
ನಂತರ ಉಪವಿಭಾಗಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ, ಕೂಡಲೇ ಸರ್ಕಾರ ಜಿಲ್ಲಾಡಳಿತದ ಮೂಲಕ ದಲಿತರು ಸೇರಿದಂತೆ ತಳಸಮುದಾಯಗಳಿಗೆ ಭೂಮಿ, ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಧಿಕ್ಕಾರ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಮೂಲಕ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಿ.ವಿ.ಆನಂದ್, ಹಲವು ದಶಕಗಳಿಂದ ಸಾಗುವಳಿ ಭೂಮಿಯಲ್ಲಿ ಕೃಷಿಚಟುವಟಿಕೆ ಮಾಡುತ್ತಿರುವ ದಲಿತ ಸಮುದಾಯ ಭೂ ಮಂಜೂರಾತಿಗಾಗಿ ನಮೂನೆ 50, 53 ಹಾಗೂ 57ರ ಮೂಲಕ ಅರ್ಜಿ ಸಲ್ಲಿಸಿ ದಶಕಗಳೇ ಕಳೆದಿವೆ. ಇದುವರೆಗೂ ಅಕ್ರಮ ಸಕ್ರಮದಡಿ ಸಾಗುವಳಿ ಚೀಟಿ ನೀಡಿಲ್ಲ. ಆದರೆ ರಾಜಕೀಯ ಮುಖಂಡರು, ಅವರ ಹಿಂಬಾಲಕರು ಹಣಬಲ ಇರುವವರಿಗೆ ಮಾತ್ರ ಯಾವ ದಾಖಲೆಗಳು ಇಲ್ಲದಿದ್ದರೂ ಭೂಮಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ದಲಿತರ ಭೂಮಿ ಕಿತ್ತುಕೊಂಡು ನಿರ್ಗತಿಕರನ್ನಾಗಿ ಮಾಡುವ ಕ್ರಮ ಕೈಬಿಡಬೇಕು. ಅಕ್ರಮ ಸಕ್ರಮದ ಪ್ರಯೋಜನ ಶ್ರೀಮಂತರಿಗೆ ಆಗಿದೆಯೇ ಹೊರತು ನಿಜವಾದ ಅರ್ಹರಿಗೆ ಇದರಿಂದ ಅನುಕೂಲವಾಗಿರುವುದಿಲ್ಲ ಎಂದು ಕಿಡಿಕಾರಿದರು.
ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಭೂ ಕಬಳಿಕೆದಾರರು ಕಾನೂನು ಭಯವಿಲ್ಲದೇ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಬೇಕು. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ದಲಿತರು ವಾಸವಿರುವ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರೂ, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮಧ್ಯ ಮಾರಾಟವು ಸಾಮಾಜಿಕ ಸಮಸ್ಯೆಯಾಗಿ ಉಲ್ಬಣಿಸಿದ್ದು, ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿರುವುದರಿಂದ ಹಲವು ಕುಟುಂಬಗಳು ಬೀದಿಪಾಲಾಗುತ್ತಿವೆ. ಇನ್ನೂ ದಲಿತರ ಸ್ಮಶಾನಗಳ ಒತ್ತುವರಿಯಾಗಿವೆ. ಇರುವ ಸ್ಮಶಾನಗಳಿಗೆ ಸೂಕ್ತ ರಸ್ತೆ ಇಲ್ಲ. ಕೆಲವೆಡೆ ಸ್ಮಶಾನಗಳೇ ಇಲ್ಲವಾಗಿದೆ. ಇದರಿಂದ ಅಂತ್ಯಸಂಸ್ಕಾರ ನಡೆಸಲು ಪರಡಾಡುವ ಸ್ಥಿತಿಯಿದೆ. ಇಂತಹ ಗಂಭೀರ ಸಮಸ್ಯೆಗಳನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸರ್ಕಾರ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಅಹೋರಾತ್ರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂದಾರ್ಲಹಳ್ಳಿ ವೆಂಕಟೇಶ್ ಮಾತನಾಡಿ, ದಲಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಲಾಗಿದೆ. ಕುಂದುಕೊರತೆಯ ಸಭೆಗಳಲ್ಲಿಯೂ ಮನವಿ ಸಲ್ಲಿಸಲಾಗಿದೆ. ಆದರೆ ಮನವಿಗಳನ್ನು ಮೂಲೆಗೆ ಸರಿಸಿರುವ ಅಧಿಕಾರಿಗಳು ದಲಿತರ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. ಚುನಾವಣೆ ಗೆದ್ದ ನಂತರ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ದಲಿತ ಉದ್ದಾರದ ಮಾತುಗಳನ್ನಾಡುತ್ತಿರುವರೇ ಹೊರತು ಯಾವುದೇ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

೨೦ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ದರಖಾಸ್ತು ನಮೂನೆ 50, 53, 57ರಡಿ ಸಲ್ಲಿಸಿರುವ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವುದು, ಪರಿಭಾವಿತ ಅರಣ್ಯ ಹೆಸರಿನಲ್ಲಿ ಕಸಿದುಕೊಂಡಿರುವ ಭೂಮಿಗಳನ್ನು ವಾಪಸ್ಸು ನೀಡುವುದು, ಸ್ಮಶಾನ ಜಾಗ ಮಂಜೂರಾತಿ, ರಸ್ತೆ ಸಮಸ್ಯೆ ಬಗೆಹರಿಸುವುದು, ವಸತಿ ರಹಿತ ಬಡವರಿಗೆ ಕೂಡಲೇ ನಿವೇಶನ ಹಕ್ಕುಪತ್ರ ಹಾಗೂ ಮನೆ ಸೌಲಭ್ಯ ಒದಗಿಸುವುದು. ಅಕ್ರಮ ಮದ್ಯ ಮಾರಾಟ ತಡೆಯುವುದು, ಎಸ್ಸಿಪಿ-ಟಿಎಸ್ಪಿ ಅನುದಾನ ದುರುಪಯೋಗದ ಕುರಿತು ತನಿಖೆ ನಡೆಸುವುದು, ಕೊಳಗೇರಿ ನಿರ್ಮೂಲನಾ ಮಂಡಳಿಯಿಂದ ವಸತಿ ರಹಿತರಿಗೆ ಮನೆ ಕಟ್ಟಿಸಿಕೊಡುವುದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದಲಿತರಿಗೆ ಸಾಲ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಜಿಲ್ಲಾಸ್ಪತ್ರೆ
ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಯಕುಮಾರ್, ಡಿ.ಎಂ.ನಡಿಪನ್ನ, ವಿ.ಅಶ್ವತ್ಥ, ಕೆ.ಜೆ.ಮುನಿರಾಜು, ನರಸಿಂಹಯ್ಯ, ಬಿ.ವಿ.ಗೋವಿಂದಪ್ಪ, ವುಲಪ್ಪ, ಕನಕದಾಸ್, ಮಾವಳ್ಳಿ ಶ್ರೀನಿವಾಸ್, ಪುರುಷೋತ್ತಮ್, ದೇವರಾಜ್, ದೊಡ್ಡನರಸಿಂಹಪ್ಪ, ಚೆಂಡೂರು ರಮಣ, ಬಾಲಪ್ಪ, ತಿಪ್ಪನ್ನ, ಗಂಗಾಧರ್, ಕೃಷ್ಣಮ್ಮ, ಮಂಜುನಾಥ್, ಊಲವಾಡಿ ನರಸಿಂಹಪ್ಪ ಇದ್ದರು.