ಸಂಕ್ರಾಂತಿಗೂ ಮುನ್ನ ಹಿಂಗಾರು ಹಂಗಾಮಿನ ಜೋಳ, ಕಡಲೆ ಸೇರಿದಂತೆ ಇತರ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುವ ಸಂದರ್ಭದಲ್ಲಿ ಬರುವ ಎಳ್ಳ ಅಮಾವಾಸ್ಯೆ ಹಬ್ಬವನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಹಸಿರಿನಿಂದ ಕಂಗೊಳಿಸುವ ಬಿಳಿ ಜೋಳದ ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆ (ಗುಡುಸಿ) ಸಿದ್ಧಪಡಿಸಿ ಅದರ ಮೇಲೆ ಹೊಸ ಬಟ್ಟೆಯನ್ನು ಸುತ್ತಿ ಒಳಗಡೆ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸಿ ಸಮೃದ್ಧ ಬೆಳೆಗೆ ಪ್ರಾರ್ಥಿಸಿ ದೇವರಿಗೆ ಆರತಿ ಬೆಳಗಿದರು. ಬಳಿಕ ʼಓಲಗ್ಯಾ ಒಲಗ್ಯಾ ಚೆಲ್ಲಂ ಪೋಲಗ್ಯಾ ಎಂದು ಭೂದೇವಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಸಂಭ್ರಮಿಸಿದರು.
ಅಮಾವಾಸ್ಯೆ ಹಬ್ಬದ ವಿಶೇಷ ಖಾದ್ಯವಾದ ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಅಂಬಲಿ, ಹೋಳಗಿ, ಹುಗ್ಗಿ, ಸಾರು ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ರೈತರು ತಮ್ಮ ತಮ್ಮ ಕುಟುಂಬ ಸಮೇತ ಎತ್ತಿನ ಗಾಡಿ, ಟ್ರ್ಯಾಕ್ಟರ್, ಆಟೊ, ದ್ವಿಚಕ್ರಗಳ ಮೇಲೆ ತೆಗೆದುಕೊಂಡು ತಮ್ಮ ತಮ್ಮ ಜಮೀನಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.
ರೈತರು ಜನಪದ ಹಾಡುಗಳನ್ನು ಹಾಡಿ ಸಂಭ್ರಮಿಸಿದರೆ, ಮಕ್ಕಳು, ಯುವಕರು, ಮಹಿಳೆಯರು ಮರಗಳಿಗೆ ಕಟ್ಟಿದ ಜೋಕಾಲಿಗಳಲ್ಲಿ ಉಯ್ಯಾಲೆ ಆಡಿದರು. ಆನಂತರ ಬಂಧು-ಬಳಗ, ಸ್ನೇಹಿತರೊಂದಿಗೆ ಅಮಾವಾಸ್ಯೆ ಹಬ್ಬದ ವಿಶೇಷ ಭೋಜನ ಸವಿದರು. ನಗರ ಪ್ರದೇಶದ ಜನರು ನಿತ್ಯದ ಜಂಜಾಟದಿಂದ ಬಿಡುವು ಮಾಡಿಕೊಂಡು ಹಬ್ಬದ ಊಟ ಸವಿಯಲು ಗ್ರಾಮಾಂತರ ಪ್ರದೇಶದ ಹೊಲಗಳತ್ತ ಕುಟುಂಬ ಸಮೇತರಾಗಿ ತೆರಳುತ್ತಿದ್ದುದು ಸೋಮವಾರ ಸಾಮಾನ್ಯದ ದೃಶ್ಯವಾಗಿತ್ತು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ್ ಖಂಡ್ರೆ ಅವರು ಕುಟುಂಬ ಜೊತೆಗೆ ಹೊಲಕ್ಕೆ ತೆರಳಿ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಭಜ್ಜಿ, ರೊಟ್ಟಿ ಅಂಬಲಿಯನ್ನು ಸವಿಯುವ ಮೂಲಕ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಿದರು.

ಮಾಜಿ ಸಚಿವ, ಶಾಸಕ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ರೈತರೊಂದಿಗೆ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.
ಸ್ವ-ಗ್ರಾಮ ಬೋಂತಿ ತಾಂಡಾದಲ್ಲಿನ ಕೃಷಿ ಜಮೀನಿಗೆ ತೆರಳಿ ಪೂಜೆ ನೆರವೇರಿಸಿ, ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಲ್ಲಿಸಿ ಕುಟುಂಬಸ್ಥರು, ಗ್ರಾಮಸ್ಥರು, ಮುಖಂಡರು ಹಾಗೂ ಆತ್ಮೀಯರೊಂದಿಗೆ ಕುಳಿತು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಸೇವಿಸಿದರು. ಇದೇ ವೇಳೆ ಶಾಸಕರು ಹೊಲದಲ್ಲಿನ ಮರದಲ್ಲಿ ಜೋಕಾಲಿಯಾಡಿ ಖುಷಿ ಪಟ್ಟರು.

ʼನಮ್ಮ ಭಾಗದಲ್ಲಿ ರೈತರು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಎಳ್ಳಮವಾಸ್ಯೆ ಪ್ರಮುಖ ಹಬ್ಬವಾಗಿದೆ. ಎಲ್ಲ ರೈತರು ತಮ್ಮ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ಕುಟುಂಬಸ್ಥರೊಂದಿಗೆ ಸಹಭೋಜನ ಮಾಡುವ ಅಪರೂಪದ ಹಬ್ಬವಾಗಿದೆ. ಪ್ರತಿ ವರ್ಷ ನಾನು ರೈತರ ಜೊತೆಗೆ ಹಬ್ಬ ಆಚರಿಸುತ್ತಾ ಬಂದಿದ್ದೇನೆ. ಈ ವರ್ಷ ನನ್ನ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿ ಹಬ್ಬ ಆಚರಿಸಿದ್ದೇನೆ. ಇದು ಭೂಮಾತೆ ಹಾಗೂ ರೈತರ ಮಹತ್ವವನ್ನು ಸಾರುವ ಹಬ್ಬವಾಗಿದೆ ಎಂದು ಹೇಳಿದರು.
ʼನಾನು ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಅವರ ಶ್ರೇಯಸ್ಸಿಗಾಗಿ ಮಾಡಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಕೃಷಿ, ತೋಟಗಾರಿಕೆ ಹಾಗೂ ಮತ್ತಿತರೆ ಇಲಾಖೆಗಳಿಂದ ರೈತರಿಗಾಗಿ ಇರುವ ಎಲ್ಲ ಯೋಜನೆಗಳನ್ನು ರೈತರು ಸದುಪಯೋಗ ಪಡೆಯುವಂತೆ ಪ್ರೇರಣೆ ನೀಡಲಾಗುತ್ತಿದೆʼ ಎಂದು ಹೇಳಿದರು.

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಸೋಮವಾರ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತ್ರತ್ವದಲ್ಲಿ ಎಳ್ಳಮವಾಸ್ಯೆ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಗುರುಬಸವ ಪಟ್ಟದ್ದೇವರು ಮಾತನಾಡಿ, ʼಎಳ್ಳಮವಾಸ್ಯೆ ರೈತರ ಹಬ್ಬ. ರೈತರು ವರ್ಷವಿಡೀ ವಿವಿಧ ಬೆಳೆಗಳನ್ನು ಬೆಳೆದು ಅನ್ನದಾತರನ್ನು ಕಾಪಾಡುವ ಭೂಮಿ ತಾಯಿಗೆ ಈ ದಿನ ಗೌರವ ಸಲ್ಲಿಸುವ ಸಂದರ್ಭ. ರೈತ ದೇಶದ ಬೆನ್ನೆಲುಬು. ಹಾಗಾಗಿ, ಸರ್ವರೂ ಅನ್ನದಾತರನ್ನು ತುಂಬಾ ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಿಕ್ಕಿ, ಬರ್ತಾ, ಪಾಲಕ್ ಮೆಂತ್ಯೆ ಉಪಯೋಗಿಸಿ ತಯಾರಿಸುವ ಭಜ್ಜಿ ಪದಾರ್ಥವನ್ನು ಅಧಿಕಾರಿಗಳು, ವಿದ್ಯಾರ್ಥಿಗಳು ಸಹಭೋಜನ ಮಾಡಿ ಸಂಭ್ರಮಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಎಳ್ಳ ಅಮಾವಾಸ್ಯೆ ಪ್ರಯುಕ್ತ ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ಧೂಳಪ್ಪ ಬಿರಾದಾರ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ‘ಯುವಕರು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆ’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಹಲವು ತಂತ್ರಜ್ಞಾನದ ಬಳಕೆ ಸರಿಯಾದ ಕ್ರಮದಲ್ಲಿ ನಡೆಯಬೇಕು. ಯುವ ಸಮುದಾಯಕ್ಕೆ ತಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಅರಿವು ಇರಬೇಕು. ಮೊಬೈಲ್ ಗೀಳಿನಿಂದ ಹೊರಬಂದು ವಾಸ್ತವ ಬದುಕಿಗೆ ಮುಖಾಮುಖಿಯಾಗುವ ಅಗತ್ಯವಿದೆ. ಮನುಷ್ಯ ಮೋಬೈಲ್ ಜೀವಿಯಲ್ಲ. ಸಮಾಜ ಜೀವಿ. ಮೋಬೈಲ್ ಬಳಕೆ ಈ ಕಾಲದಲ್ಲಿ ಅಗತ್ಯವಾಗಿದೆ, ಅನಿವಾರ್ಯವಿಲ್ಲ. ಅದು ಚಟವಾಗಬಾರದುʼ ಎಂದರು.
ಈ ಸಂದರ್ಭದಲ್ಲಿ ಹುಲಸೂರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಹಿರಿಯ ಪತ್ರಕರ್ತ ಮಾಣಿಕ ಭೂರೆ, ಜಿ .ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನ ಧಾಬಾಲೆ, ಕಸಾಪ ತಾಲ್ಲೂಕು ಉಪಾಧ್ಯಕ್ಷ ಬಸವಕುಮಾರ ಕವಟೆ, ಉಪನ್ಯಾಸಕರಾದ ಭೀಮಾಶಂಕರ ಬಿರಾದಾರ, ಶಿವಾಜಿ ಮೇತ್ರೆ, ಗಂಗಾಧರ ಸಾಲಿಮಠ ಹಾಗೂ ಪ್ರಭಾಕರ ನವಗಿರೆ, ಬಸವರಾಜ ಬಿರಾದಾರ, ಕಾಶಿನಾಥ್ ಬಿರಾದಾರ, ಧರ್ಮೇಂದ್ರ ವಗ್ಗೆ, ವಿಜಯಕುಮಾರ್ ಪಾಟೀಲ್ ಶಿವಪೂರ ಮತ್ತಿತರರಿದ್ದರು.

ಬೀದರ್ ತಾಲ್ಲೂಕಿನ ಕಂಗನಕೋಟ ಗ್ರಾಮದಲ್ಲಿ ಓಂಕಾರ ಉಪ್ಪೆ ಅವರ ಜಮೀನಿನಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಪರಿಸರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಕುರಿತು ಕವಿಗೋಷ್ಠಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಚಿಂತಕ ವೀರಭದ್ರಪ್ಪ ಉಪ್ಪಿನ, ಸಾಹಿತಿಗಳಾದ ಎಂ.ಜಿ.ದೇಶಪಾಂಡೆ, ಅರವಿಂದ ಕುಲಕರ್ಣಿ, ಓಂಕಾರ ಉಪ್ಪೆ, ಸಂಗಮೇಶ ಜ್ಯಾಂತೆ, ಶ್ರೇಯಾ ಮಹೀಂದ್ರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.