12ನೆಯ ಶತಮಾನದಲ್ಲಿ ಬಸವಾದಿ ಶರಣರು ಜಾತಿವ್ಯವಸ್ಥೆ, ಕಂದಾಚಾರ, ಮೌಢ್ಯತೆ ವಿರುದ್ಧ ಸಮರ ಸಾರಿದ್ದರು. ಅಂತರ್ಜಾತಿ ವಿವಾಹ ನಡೆಸಿ ಮನುಕುಲ ಒಂದೇ ಎಂಬುದನ್ನು ಸಾರಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯದ ಪಲ್ಲಕ್ಕಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ಶರಣರು ಮನುಕುಲದ ಸಮಾನತೆಗಾಗಿ ಹೋರಾಟ ನಡೆಸಿದ್ದರು. ಜಾತಿವ್ಯವಸ್ಥೆ ಅಳಿಸಲು ಅಂತರ್ಜಾತಿ ವಿವಾಹ ನಡೆಸಿ ಸಮಾನತೆ ತತ್ವ ಸಾರಿದರು. ಇದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಮಹಾನವಮಿ ದಿನದಂದು ಶರಣರು ಎಳೆಹೂಟ ಶಿಕ್ಷೆ ಅನುಭವಿಸಿದರು. ಶರಣರ ಮೇಲೆ ದಬ್ಬಾಳಿಕೆ, ಹತ್ಯೆ ನಡೆಯಿತು. ಆದರೂ ಶರಣರು ಯಾವುದಕ್ಕೂ ಭಯ ಪಡದೇ ಎಲ್ಲವನ್ನೂ ಮೆಟ್ಟಿನಿಂತೂ ವಿಜಯೋತ್ಸವ ಸಾರಿದರುʼ ಎಂದು ತಿಳಿಸಿದರು.
ಬಸವ ಗುರುವಿನ ಪೂಜೆ ನೆರವೇರಿಸಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ʼಮನುಕುಲದ ಸಾರ್ಥಕ ಜೀವನಕ್ಕೆ ಬಸವಾದಿ ಶರಣರ ವಚನ ಸಾಹಿತ್ಯ ಪೂರಕವಾಗಿದೆʼ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಬಸವಾದಿ ಶರಣರು ತತ್ವ ಸಿದ್ದಾಂತಕ್ಕಾಗಿ ಹೋರಾಟ ನಡೆಸಿದರು. ಸಮಾನತೆ, ಜಾತಿ ರಹಿತ ಸಮಾಜ ಕಟ್ಟುವ ಪ್ರಯತ್ನ ಮಾಡಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ಹೋರಾಟ ನಡೆಸಿದರುʼ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಡಾ.ಚನ್ನಬಸವ ಪಟ್ಟದ್ದೇವರು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಹೊಸ ಪರಂಪರೆಗೆ ನಾಂದಿ ಹಾಡಿದರು. ಅದನ್ನು ನಾಡೋಜ ಡಾ.ಬಸವಲಿಂಗ
ಪಟ್ಟದ್ದೇವರು ಮುನ್ನಡೆಸಿಕೊಂಡು ಬರುತ್ತಿದ್ದಾರೆʼ ಎಂದು ತಿಳಿಸಿದರು.
ʼಈ ಬಾರಿಯ ಮೈಸೂರು ದಸರಾ ಜಂಬುಸವಾರಿಯಲ್ಲಿ ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಸ್ತಬ್ದಚಿತ್ರ ಪ್ರದರ್ಶನಗೊಂಡಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ. ಮುಂಬರುವ ದಿನಗಳಲ್ಲಿ ದೆಹಲಿ ಪರೇಡ್ ಬಲ್ಲಿ ಪೂಜ್ಯರ ಸ್ತಬ್ದಚಿತ್ರ ಪರ್ದರ್ಶನಗೊಂಡರೇ ಮತ್ತಷ್ಟು ಮೆರಗು ಬರಲಿದೆʼ ಎಂದರು.
ಇದೇ ವೇಳೆ ವಿದ್ಗಾರ್ಥಿನಿಯರಾದ ಶ್ರಾವ್ಯ ಸುರೇಶ, ವಿಶ್ವಜ್ಯೋತಿ ಪ್ರಭು, ವಚನಾಂಬಿಕಾ ಜಗದೀಶ, ಐಶ್ವರ್ಯ ಪ್ರಕಾಶ, ಮಹೇಶ್ವರಿ ಶಿವು, ಆರಾಧ್ಯ ಆನಂದ, ಐಶ್ವರ್ಯ ಅಶೋಕ, ಸುಸ್ಮೀತಾ ಸಂಗಮೇಶ, ಸಂಜನ ಸೂರಜ್, ಶ್ರದ್ಧಾ ಸಂತೋಷ, ಆದಿತ್ಯ ಶಶಿಧರ, ಓಂಪ್ರಕಾಶ ಸಂಗಮೇಶ ವಚನ ಪಾರಾಯಣ ನಡೆಸಿ ಕೊಟ್ಟರು.
ಈ ಸುದ್ದಿ ಓದಿದ್ದೀರಾ? ಗೌರಿ ಲಂಕೇಶ್ ಹತ್ಯೆ ಪ್ರಕರಣ | ಜಾಮೀನಿನ ಮೇಲೆ ಹೊರಬಂದ ಆರೋಪಿಗಳಿಗೆ ಸಂಘಪರಿವಾರದಿಂದ ಸನ್ಮಾನ!
ಕಾರ್ಯಕ್ರಮದಲ್ಲಿ ಮಹಾಲಿಂಗ ಸ್ವಾಮೀಜಿ, ಅನಿಲ ಮಹಾರಾಜರು, ಶಂಕರಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದರು. ಬೀದರ್ ಸಂಸದ ಸಾಗರ ಖಂಡ್ರೆ, ಶಶಿಧರ ಕೋಸಂಬೆ, ಬಸವರಾಜ ಮರೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್, ಕಾಶಿನಾಥ ಲದ್ದೆ, ಮಲ್ಲಮ್ಮ ನಾಗನಕೇರೆ, ಚಂದ್ರಕಲಾ ಪ್ರಭು ಡಿಗ್ಗೆ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.