ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಕೊಪಗೊಂಡ ಶಿಕ್ಷಕಿ ವಿದ್ಯಾರ್ಥಿಗಳ ಕಡೆಗೆ ಕೋಲು ಎಸೆದಿದ್ದು, ಕೋಲು ಬಾಲಕನ ಕಣ್ಣಿಗೆ ಬಿದ್ದು, ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಘಟನೆ ಕಳೆದ ವರ್ಷ ಮಾರ್ಚ್ 6 ರಂದು ಘಟನೆ ನಡೆದಿತ್ತು. 1ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಎಂಬಾತನ ಬಲಗಣ್ಣಿಗೆ ಪೆಟ್ಟಾಗಿತ್ತು. ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಆದರೆ, ಈಗ ಆತನ ಬಲ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಹೋಗಿದೆ.
ಆರಂಭದಲ್ಲಿ, ಗಾಯವಾಗಿದೆ. ಚಿಕಿತ್ಸೆ ಕೊಡಿಸಿದರೆ ಗುಣವಾಗುತ್ತದೆ ಎಂದು ಪೋಷಕರು ಭಾವಿಸಿದ್ದರು. ಆದರೆ, ಕೆಲ ದಿನಗಳ ಹಿಂದೆ, ಬಾಲಕನ ಕಣ್ಣಿನ ಆರೋಗ್ಯ ಹದಗೆಟ್ಟಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಬಾಲನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಕಣ್ಣನ್ನು ಪರೀಕ್ಷಿಸಿದ್ದ ವೈದ್ಯರು ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದರು. ಆದರೂ, ಬಾಲಕನ ಸ್ಥಿತಿ ಸುಧಾರಿಸಲಿಲ್ಲ. ಈಗ, ಆತ ತನ್ನ ಬಲಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಭಾನುವಾರ, ಬಾಲಕನ ಪೋಷಕರು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಶಿಕ್ಷಕಿ, ತಾಲೂಕು ಬ್ಲಾಕ್ ಶಿಕ್ಷಣ ಅಧಿಕಾರಿ ಸೇರಿದಂತೆ ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.