ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಕೆರೆಗೆ ನೀರು ಹರಿಸಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರಿಗೆ ರೈತ ಮುಖಂಡರ ಮನವಿ ಮಾಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಭದ್ರಾ ಮೇಲ್ದಂಡೆ ನೀರನ್ನು ಜನವರಿ ಅಂತ್ಯದವರೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಹರಿಸಲು ಸರ್ಕಾರದಿಂದ ಆದೇಶವಿದ್ದು, ಜನವರಿ 10 ರೊಳಗೆ ವಾಣಿ ವಿಲಾಸ ಸಾಗರ ಕೋಡಿ ಬೀಳುವ ಸಾಧ್ಯತೆ ಇದೆ. ಜನವರಿ ಅಂತ್ಯದವರೆಗೆ ಬರಬೇಕಾದ ನೀರಿನ ಸದ್ಬಳಕೆ ಮಾಡಿಕೊಳ್ಳಲು ಮುಂಜಾಗ್ರತೆಯಾಗಿ ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಭಾಗದ ಏಳು ಕೆರೆಗಳಿಗೆ ನೀರು ಹರಿಸಬೇಕು. ಚಳ್ಳಕೆರೆ, ಮೊಳಕಾಲ್ಮೂರು ಭಾಗದ ಬ್ಯಾರೇಜ್ಗಳನ್ನು ಭರ್ತಿ ಮಾಡಬೇಕೆಂದು ಕಸವನಹಳ್ಳಿ ರಮೇಶ್ ನೇತೃತ್ವದಲ್ಲಿ ರೈತರು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ತೋಟಗಾರಿಕೆ ಬೆಳೆಗಳಲ್ಲಿ ಅಗ್ರಸ್ಥಾನದಲ್ಲಿರುವ ಶಾಶ್ವತ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಧರ್ಮಪುರ ಭಾಗದ ಕೆರೆಗಳಿಗೆ ನೀರು ಹರಿಸಲು ನೂರಾರು ವರ್ಷಗಳ ಹೋರಾಟದ ಫಲವಾಗಿ ಯೋಜನೆ ಜಾರಿಯಾಗಿದ್ದು. ಇಂತಹ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ರವರು ಧರ್ಮಪುರ ಭಾಗದ ರೈತರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ನಿತ್ಯವೂ ಮಾನವೀಯ ಮೌಲ್ಯಗಳನ್ನು ನಾವು ಮೈಗೂಡಿಸಿಕೊಳ್ಳಬೇಕು: ನಾಗರತ್ನ ಮನಗೂಳಿ
ವಾಣಿವಿಲಾಸ ಸಾಗರ ಈ ವರ್ಷ ಮೂರನೇ ಬಾರಿ ತುಂಬುತ್ತಿದೆ. ಇಂತಹ ಸುಸಂದರ್ಭದಲ್ಲಿ ಧರ್ಮಪುರ ಭಾಗದ ಕೆರೆಗಳೂ ಸಹ ಭರ್ತಿಯಾಗಲಿ. ಪದೇ ಪದೇ ಭದ್ರಾ ಜಲಾಶಯ ಭರ್ತಿಯಾಗುವುದಿಲ್ಲ. ಅಲ್ಲದೆ ವಾಣಿವಿಲಾಸ ಸಾಗರಕ್ಕೂ ಎಲ್ಲ ವರ್ಷಗಳಲ್ಲಿ ನೀರು ಸಿಗುವುದಿಲ್ಲ. ಸಿಕ್ಕಿರುವಂತ ಸುಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಿಕೊಂಡು ಮುಂದಿನ ಅಭಾವದ ದಿನಗಳಿಗೆ ಅನುಕೂಲ ಮಾಡಿಕೊಳ್ಳಬಹುದಾದ ದೂರದೃಷ್ಟಿಯಿಂದ ಯೋಚಿಸಬೇಕಾಗಿದೆ. ಆದ್ದರಿಂದ ಸಚಿವರು ಈ ಭಾಗದ ಜನರ ಕನಸನ್ನು ನನಸು ಮಾಡಬೇಕೆಂದು ರೈತ ಮುಖಂಡರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ರಾಮಚಂದ್ರ ಕಸವನಹಳ್ಳಿ, ಸಾಮಾಜಿಕ ಕಾರ್ಯಕರ್ತ ಎಸ್.ವಿ.ರಂಗನಾಥ್, ಕುಮಾರ್, ಹೊಸಯಳನಾಡು ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ಧರು.
