ಕಳೆದ ಎರಡು ದಿನಗಳಿಂದ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಬೀಳುತ್ತಿದೆ. ಆದರೆ, ರಾಜ್ಯದಲ್ಲಿ ತಾಪಮಾನ 40° ಸೆಲ್ಸಿಯಸ್ ದಾಟುತ್ತಿದೆ. ಬರಗಾಲದಿಂದಾಗಿ ಕೆರೆ-ಕಟ್ಟೆ-ನದಿಗಳು ಬತ್ತಿಹೋಗಿವೆ. ಜನ-ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುಂತಾಗಿದೆ. ವನ್ಯ ಪ್ರಾಣಿ, ಪಕ್ಷಿಗಳು ನೀರು ಹುಡುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಧಾರವಾಡ ಜಿಲ್ಲೆಯ ರೈತರೊಬ್ಬರು ಕೆರೆಗೆ ನೀರು ಹರಿಸುವ ಮೂಲಕ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಪ್ಪ ಗುಂಡ್ಕಲ್ ಅವರು ತಮ್ಮ ಬೋರ್ವೆಲ್ನಿಂದ ತಮ್ಮೂರಿನ ಕರೆಗೆ ನೀರು ತುಂಬಿಸಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದಲೂ ಬೇಸಿಗೆ ಕಾಲದಲ್ಲಿ ಕೆರೆಗೆ ನೀರು ತುಂಬಿಸುವ ಕಾಯಕ ಮಾಡುತ್ತಿದ್ದಾರೆ. ಪ್ರಾಣಿಗಳ ದಾಹ ತಣಿಸುತ್ತಿದ್ದಾರೆ.
“ನನ್ನ ಜಮೀನಿನ ಪಕ್ಕದ ಕೆರೆಯಲ್ಲಿ ನಮ್ಮ ದನಗಳನ್ನು ನೀರು ಕುಡಿಸಲು ಕರೆದೊಯ್ಯುತ್ತಿದ್ದೆ. ಆದರೆ, ಮೂರು ವರ್ಷಗಳ ಹಿಂದೆ ಕೆರೆ ಬತ್ತಿ ಹೋಗಿತ್ತು. ನಮ್ಮ ಜಾನುವಾರುಗಳ ದಾಹ ನೀಗಿಸಲು ನನ್ನ ಜಮೀನಿನ ಬೋರ್ವೆಲ್ ನೀರನ್ನು ಬಳಸುತ್ತಿದ್ದೆ. ಆದರೆ, ಇತರ ಪ್ರಾಣಿಗಳು ಕೆರೆಗೆ ಬಂದು ನೀರಿಲ್ಲದೆ ಹಿಂತಿರುಗುತ್ತಿರುವುದನ್ನು ಗಮನಿಸಿದೆ. ಅವುಗಳಿಗೂ ನೀರು ದೊರೆಯಬೇಕೆಂದು ಕೆರೆ ನೀರು ತುಂಬಿಸಲು ಆರಂಭಿಸಿದೆ” ಎಂದು ಗುಂಡಪ್ಪ ಹೇಳಿರುವುದಾಗಿ ಟಿಎನ್ಐಇ ವರದಿ ಮಾಡಿದೆ.
“ಮಳೆಗಾಲದಲ್ಲಿ ಮಾತ್ರ ಕೆರೆಯಲ್ಲಿ ನೀರು ಇರುತ್ತದೆ. ಫೆಬ್ರುವರಿ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಕೆರೆ ಒಣಗಿ ಹೋಗುತ್ತದೆ. ಪ್ರತಿ ವರ್ಷ ಸುಮಾರು ನಾಲ್ಕು ತಿಂಗಳ ಕಾಲ ಪಂಪ್ಸೆಟ್ನಿಂದ ಕೆರೆಗೆ ನೀರು ತುಂಬಿಸುತ್ತೇನೆ. ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾಲ ಕೆರೆಗೆ ನೀರು ಹರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಕೆರೆಗೆ ನೀರು ತುಂಬಿಸಲು ಕಾರಣವಾದ ಘಟನೆಯನ್ನು ನೆನಪಿಸಿಕೊಂಡ ಗೋವಿಂದ್ ಅವರ ಮಗ ಮಾರುತಿ, “ಒಮ್ಮೆ ತನ್ನ ತಂದೆ, ಕೆರೆ ಬತ್ತಿ ಹೋಗಿದ್ದರಿಂದ ಜಿಂಕೆಯೊಂದು ನೀರು ಕುಡಿಯದೆ ಹಿಂತಿರುಗುವುದನ್ನು ನೋಡಿದರು. ಆಗ, ನಮ್ಮ ಬೋರ್ವೆಲ್ನಿಂದ ಕೆರೆಗೆ ನೀರು ತುಂಬಿಸಲು ನಿರ್ಧರಿಸಿದರು. ಕಳೆದ ಮೂರು ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾರೆ. ನಾವು 1.5 ಎಕರೆ ಜಮೀನು ಹೊಂದಿದ್ದು, ನಮ್ಮ ಬೋರ್ವೆಲ್ನ ನೀರು ಈ ಭೂಮಿಗೆ ನೀರಾವರಿ ಮಾಡಲು ಸಾಕು. ಗುತ್ತಿಗೆ ಪಡೆದ ನಾಲ್ಕು ಎಕರೆ ಜಮೀನಿಗೂ ನೀರುಣಿಸುತ್ತೇವೆ” ಎಂದು ಹೇಳಿದ್ದಾರೆ.
ಗೋವಿಂದ್ ಅವರ ಕೆಲಸದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗ್ರಾಮದ ಗೌಲಿ ಬುಡಕಟ್ಟಿನ ನಿವಾಸಿಯೊಬ್ಬರು, “ಗೋವಿಂದ್ ಹೊಳೆಗೆ ನೀರು ಪೂರೈಸುವುದರಿಂದ ದನಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಅನುಕೂಲವಾಗುತ್ತಿದೆ. ಗ್ರಾಮವು ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ವನ್ಯಪ್ರಾಣಿಗಳು ನೀರನ್ನು ಅರಸಿ ನಮ್ಮ ಗ್ರಾಮಕ್ಕೆ ಬರುತ್ತವೆ. ಗೋವಿಂದ್ ಅವರು ಪೂರೈಸುವ ನೀರು ಅವುಗಳ ದಾಹವನ್ನು ನೀಗಿಸುತ್ತದೆ. ರಾಜ್ಯಾದ್ಯಂತ ಮಾನವ-ಪ್ರಾಣಿ ಸಂಘರ್ಷಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ, ನಮ್ಮ ಹಳ್ಳಿಯ ಕಥೆ ವಿಭಿನ್ನವಾಗಿದೆ” ಎಂದು ಹೇಳಿದ್ದಾರೆ.