ದೇವನಹಳ್ಳಿ ಭೂಸ್ವಾಧೀನದ ವಿರುದ್ಧವಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಚಿತ್ರರಂಗದ ಹಿರಿಯ ನಟರು, ನಿರ್ದೇಶಕರು ಮತ್ತು ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ‘ರೈತರೊಂದಿಗೆ ನಾವಿದ್ದೇವೆ’ ಎಂದು ಸಾರಿದ್ದಾರೆ. “ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಮೂಲಕ ಸರ್ಕಾರ ತಪ್ಪು ಮಾಡುತ್ತಿದೆ, ರೈತರಿಗೆ ಅನ್ಯಾಯವಾಗಬಾರದು” ಎಂದರು.
ಚಿತ್ರರಂಗದ ಅನೇಕ ಗಣ್ಯರು ಇಂದು ಫ್ರೀಡಂ ಪಾರ್ಕಿನ ಧರಣಿಯ ಸ್ಥಳಕ್ಕೆ ಬಂದು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಿರಿಯ ನಟ ಪ್ರಕಾಶ್ ರೈ, ಕಿಶೋರ್, ರಂಗಕಲಾವಿದೆ ಮತ್ತು ಚಿತ್ರನಟಿ ಅಕ್ಷತಾ ಪಾಂಡವಪುರ, ಹಿರಿಯ ನಿರ್ದೇಶಕರುಗಳಾದ ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಲ್ಲಿ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್ ಸೀತಾರಾಂ, ಪಿ.ಶೇಷಾದ್ರಿ, ನಂಜುಂಡೇಗೌಡ, ನಿರ್ಮಾಪಕರಾದ ವಿಜಯಲಕ್ಷ್ಮಿ ಸಿಂಗ್, ಕೃಷ್ಣೇಗೌಡ, ಸಂಗೀತ ಸಂಯೋಜಕರಾದ ಕವಿರಾಜ್ ಮೊದಲಾದವರು ‘ರೈತರೊಂದಿಗೆ ನಾವಿದ್ದೇವೆ’ ಎಂದು ಸಂದೇಶ ನೀಡಿದರು.
ಇದನ್ನು ಓದಿದ್ದೀರಾ? ಸಚಿವ ಸಂಪುಟ ಸಭೆ | ಪತ್ರಿಕಾಗೋಷ್ಠಿಯಲ್ಲಿಯೂ ದೇವನಹಳ್ಳಿ ಭೂಸ್ವಾಧೀನ ವಿಚಾರ ಮಾತನಾಡದ ಸಿಎಂ ಸಿದ್ದರಾಮಯ್ಯ
ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಬಲವಂತದ ಭೂಸ್ವಾಧೀನದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ದೇವನಹಳ್ಳಿಯ ಚನ್ನರಾಯಪಟ್ಟಣದ ರೈತರ ಪರವಾದ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿ ದೇವನಹಳ್ಳಿಯಲ್ಲಿ ನೂರಾರು ಮಂದಿ ರೈತ ಸತ್ಯಾಗ್ರಹಿಗಳು ರೈತ ಮಹಿಳೆಯರನ್ನೂ ಒಳಗೊಂಡಂತೆ ಉಪವಾಸ ಸತ್ಯಾಗ್ರಹ ನಡೆಸಿದರು. ಆದರೆ ದೇವನಹಳ್ಳಿ ಹೋರಾಟದ ಬಗ್ಗೆ ಯಾವುದೇ ಪ್ರಸ್ತಾಪವೂ ಆಗಿಲ್ಲ.
ದೇವನಹಳ್ಳಿಯಲ್ಲಿ ಉಪವಾಸ ಕುಳಿತಿದ್ದ ರೈತರನ್ನು ಬೆಂಬಲಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ‘ಭೂಮಿ ಬಿಡಾರ’ದಲ್ಲಿ ‘ಬೆಂಬಲ ಉಪವಾಸ ಸತ್ಯಾಗ್ರಹ’ ನಡೆಯಿತು. ವಿವಿಧ ಸಂಘಟನೆಗಳ 9 ಮಂದಿ ಪ್ರತಿನಿಧಿಗಳು ಸಂಜೆ 5.00ರ ವರೆಗೆ ಉಪವಾಸ ನಡೆಸಿ ಸರ್ಕಾರ ದೇವನಹಳ್ಳಿಯ ರೈತರ ಪರವಾದ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಹಿರಿಯ ಸಾಹಿತಿಗಳಾದ ಪ್ರೊ.ರಹಮತ್ ತರೀಕೆರೆ, ಚಿಂತಕ ಶಿವಸುಂದರ್, ಕೆ.ಪಿ ಸುರೇಶ್, ಇಂದೂಧರ ಹೊನ್ನಾಪುರ, ಹಿರಿಯ ದಲಿತ ನಾಯಕರಾದ ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ರೈತನಾಯಕಿ ಅನಸೂಯಮ್ಮ ಅರಳಾಳುಸಂದ್ರ, ಜನಪರ ಚಿತ್ರನಿರ್ಮಾಕ ಕೇಸರಿ ಹರವೂ, ಮಹಿಳಾ ಹೋರಾಟಗಾರ್ತಿ ವಿಮಲ ಮೊದಲಾದವರು ಭೇಟಿ ನೀಡಿ, ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಇಂದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ.ರಹಮತ್ ತರೀಕೆರೆ ಅವರು ದೇವನಹಳ್ಳಿಯ ಚಾರಿತ್ರಿಕ ಮಹತ್ವವನ್ನು ವಿವರಿಸಿದರು. “ರೈತರ ಭೂಮಿಯನ್ನು ಬಲವಂತದಿಂದ ಕಸಿದುಕೊಳ್ಳುತ್ತಿರುವ ಸರ್ಕಾರ ತಪ್ಪು ಮಾಡುತ್ತಿದೆ, ಯಾವ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಬಾರದು” ಎಂದರು.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ: ‘ರೈತರ ಬಗ್ಗೆ ಸಿಎಂ ಕರುಣೆ ತೋರಿಸಬೇಕು’ ಎಂದ ನಟಿ ರಮ್ಯಾ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ರೈ “ಇದು ಕೇವಲ ರೈತರ ಸಮಸ್ಯೆಯಲ್ಲ, ನಮ್ಮೆಲ್ಲರ ಸಮಸ್ಯೆ, ಸರ್ಕಾರವನ್ನು ನಾವು ಕೇಳಬೇಕಿದೆ. ಅಭಿವೃದ್ಧಿ ಅನ್ನುತ್ತೀರಿ, ನಿಮ್ಮ ಅಭಿವೃದ್ಧಿಯಲ್ಲಿ ರೈತರಿಲ್ಲವೇ” ಎಂದು ಪ್ರಶ್ನಿಸಿದರು. ನಟ ಕಿಶೋರ್ ಮಾತನಾಡುತ್ತಾ “ಇದು ರೈತರ ಬದುಕಿನ ವಿಚಾರ ಮತ್ತು ನಮ್ಮೆಲ್ಲರ ಬದುಕಿನ ವಿಚಾರವೂ ಹೌದು, ನಾವು ಈಗ ರೈತರ ಪರವಾಗಿ ಮಾತನಾಡದಿದ್ದರೆ ನಮ್ಮ ಅನ್ನಕ್ಕೆ ನಾವೇ ಕುತ್ತು ತಂದುಕೊಂಡಂತೆ” ಎಂದರು.
ಸಂಜೆ 5ರವರೆಗೆ ನಡೆದ ಉಪವಾಸವನ್ನು ದೇವನಹಳ್ಳಿಯಲ್ಲಿ ಮತ್ತು ಫ್ರೀಡಂ ಪಾರ್ಕಿನಲ್ಲಿ ರೈತಪರ ಘೋಷಣೆಗಳೊಂದಿಗೆ ಕೊನೆಗೊಳಿಸಲಾಯಿತು. ದೇವನಹಳ್ಳಿ ರೈತ ಹೋರಾಟದ ಮುಂದಾಳುಗಳಾದ ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ, ನಂಜಪ್ಪ ಮೊದಲಾದವರು “ಕ್ಯಾಬಿನೆಟ್ ಈ ಬಗ್ಗೆ ಏನು ನಿರ್ಧಾರ ಕೈಗೊಂಡಿದೆ ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ, ಆದರೆ ಅವರು ಖಂಡಿತವಾಗಿ ಭೂಸ್ವಾಧೀನವನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿರುತ್ತಾರೆ ಎಂಬ ಭರವಸೆಯಿದೆ” ಎಂದರು.
ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳು “ಜುಲೈ 4ರಂದು ಮುಖ್ಯಂತ್ರಿಗಳು ಕರೆದಿರುವ ಸಭೆಯ ತನಕ ನಾವು ಕಾದು ನೋಡುತ್ತೇವೆ, ನಮ್ಮ ಹಕ್ಕೊತ್ತಾಯಕ್ಕೆ ಮಾನ್ಯತೆ ಸಿಗುತ್ತದೆಂಬ ಆಶಾವಾದ ಹೊಂದಿದ್ದೇವೆ” ಎಂದು ಭರವಸೆ ವ್ಯಕ್ತಪಡಿಸಿದರು.
ಜುಲೈ 3ರಂದು ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ದೇವನಹಳ್ಳಿಗೆ ಮತ್ತು ಫ್ರೀಡಂ ಪಾರ್ಕಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಫ್ರೀಡಂ ಪಾರ್ಕಿನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮೊದಲು ಮಧ್ಯಾಹ್ನ 1.30ಗೆ ರಂಗಕಲಾವಿದೆ ಮತ್ತು ಚಿತ್ರನಟಿ ಅಕ್ಷತಾ ಪಾಂಡವಪುರ ಅವರ ಆಪ್ತ ರಂಗ ಪ್ರಯೋಗ ‘ಅಡುಗೆ ಮಾತು’ ನಡೆಯಲಿದ್ದು, ಆ ಮೂಲಕ ಅವರು ರೈತ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಲಿದ್ದಾರೆ.
