ಮೈಸೂರಿನ ಏಕಲವ್ಯ ನಗರದಲ್ಲಿ ವಾಸವಿರುವ ಅಂಗವಿಕಲರಿಗೆ ಭಾನುವಾರದಂದು ದಸಂಸ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಮಾಡಿದರು.
ಏಕಲವ್ಯ ನಗರದಲ್ಲಿ ಅಂಗ ವೈಕಲ್ಯದಿಂದ ಬಳಲುತ್ತಿರುವ ನಿರ್ಗತಿಕ ಕುಟುಂಬಗಳು ವಾಸವಿದ್ದು, ಸಂಕಷ್ಟದ ಬದುಕನ್ನು ಸಾಗಿಸುತ್ತಿರುವ 20 ಮಂದಿ ಅಂಗವಿಕಲರಿಗೆ ಎರಡು ತಿಂಗಳಿಗೆ ಬೇಕಾಗುವ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು. ಅಂಗವಿಕಲ ಕುಟುಂಬಗಳು ದಿನನಿತ್ಯದ ಬದುಕನ್ನು ಸಾಗಿಸಲು ಮೈಸೂರಿನ ರಸ್ತೆ ಬದಿಗಳಲ್ಲಿ ಭಿಕ್ಷಾಟನೆ ಮಾಡುತ್ತಾ ಬಿಡಿಗಾಸಿನಿಂದ ಜೀವನ ಸಾಗಿಸುವವರಾಗಿದ್ದು ಕಡು ಕಷ್ಟದಲ್ಲಿರುವವರಿಗೆ ಕೈಲಾಗುವ ನೆರವು ನೀಡಿದ್ದಾರೆ.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ‘ ಅಂಗವಿಕಲರಿಗೆ ಸರ್ಕಾರದಿಂದ ಬರುವ ಮಾಸಾಶನ ಸಾಕಾಗುತ್ತಿಲ್ಲ. ಅಂಗವಿಕಲರು ಅನ್ಯ ಮಾರ್ಗವಿಲ್ಲದೆ ಬೀದಿಗಳಲ್ಲಿ ಭಿಕ್ಷೆ ಬೇಡುವ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಕೂಡಲೇ ಸರ್ಕಾರ ಅಂಗವಿಕಲರುಗಳಿಗೆ ಜೀವನ ನಿರ್ವಹಣೆಗಾಗಿ ದಿನಕ್ಕೆ ನೂರು ರೂಪಾಯಿಗಳಂತೆ ತಿಂಗಳಿಗೆ ಮೂರು ಸಾವಿರ ಮಾಸಾಶನವನ್ನಾದರೂ ನೀಡುವಂತೆ ‘ ಮನವಿ ಮಾಡಿದರು.
ಅಂಗವಿಕಲರ ಸಮಸ್ಯೆಯನ್ನು ದಸಂಸ ಮತ್ತು ಅಲೆಮಾರಿ ಸಂಘ ಮೈಸೂರಿನ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿ ವೆಂಕಟರಾಜುರವರಿಗೆ ತಿಳಿಸಿದಾಗ 50 ಸಾವಿರ ರೂಪಾಯಿ ಸ್ವಂತ ಹಣದಲ್ಲಿ ಆಹಾರ ಕಿಟ್ ಖರೀದಿಸಿ ವಿತರಿಸಿದ್ದಾರೆ.
ಅಲೆಮಾರಿ, ಅರೆ ಅಲೆಮಾರಿ ಸಂಘಗಳ ರಾಜ್ಯಾಧ್ಯಕ್ಷ ವೈ ಕುಮಾರ್ ಮಾತನಾಡಿ ” ಅಂಗವಿಕಲರು ದೈಹಿಕವಾಗಿ ಅಂಗವೈಕಲ್ಯತೆಯಿಂದ ಕೂಡಿದ್ದರೂ ಅವರ ಮನಸ್ಸುಗಳು ಅಂಗವೈಕಲ್ಯತೆಯಿಂದ ಕೂಡದೆ ಹೃದಯ ಶ್ರೀಮಂತರಾಗಿದ್ದಾರೆ. ಆದರೆ, ಕೆಲವು ಮನುಷ್ಯರು ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿದ್ದರೂ ಅವರ ಮನಸ್ಸುಗಳು ಅಂಗವೈಕಲ್ಯತೆಯಿಂದ ಕೂಡಿ ಸಮಾಜದಲ್ಲಿ ಭ್ರಷ್ಟಾಚಾರ, ಘಾತುಕ ಕೆಲಸಗಳನ್ನು ಮಾಡುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇಂತಹ ಮನುಷ್ಯರಿಗೆ ಹೋಲಿಕೆ ಮಾಡಿದರೆ ಅಂಗವಿಕಲರೇ ನಿಜವಾಗಲೂ ಹೃದಯ ಶ್ರೀಮಂತರಾಗಿದ್ದಾರೆ. ಇಂತಹವರನ್ನು ಸಮಾಜ ಪ್ರೀತಿ, ಗೌರವದಿಂದ ಕಾಣುವಂತಾಗಬೇಕು. ಅವರ ಕಷ್ಟ ನೋವುಗಳಿಗೆ ಕೈಲಾಗುವ ಮಟ್ಟಿಗೆ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಂಡು ನೆರವಾಗಬೇಕು. ಇಂತಹ ಒಳ್ಳೆಯ ಕೆಲಸಗಳನ್ನು ಸಾಧ್ಯವಾದಷ್ಟು ಮಾಡಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸಂಸ ಮುಖಂಡರಿಂದ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮನೆ ಮುತ್ತಿಗೆ ಯತ್ನ; ಬಂಧನ
ಚಾಮುಂಡೇಶ್ವರಿ ಬಡಾವಣೆಯ ಮುಖಂಡರುಗಳಾದ ಸಿಂಗೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಸಣ್ಣಪ್ಪ, ಉಪನ್ಯಾಸಕ ಪರಮೇಶ್, ಏಕಲವ್ಯ ಗ್ರಾಮ ಪಂಚಾಯ್ತಿ ಸದಸ್ಯೆ ತೇಜಸ್ವಿನಿ ಶ್ರೀಧರ್, ಏಕಲವ್ಯ ನಗರದ ಮುಖಂಡರುಗಳಾದ ನಂದನ್ ಕುಮಾರ್, ನವೀನ, ಕಿರಣ, ಸತೀಶ, ರಮೇಶ, ಪುತ್ರ, ಅಂಗವಿಕಲರ ಸಂಘದ ಅಧ್ಯಕ್ಷ ಕೆರೆಯೂರು ಶಿವಶೆಟ್ಟಿ, ತಿಮ್ಮರಾಯಪ್ಪ, ಕುಮಾರ, ಹರೀಶ, ರಂಗಮ್ಮ, ನಾಗರತ್ನಮ್ಮ, ಜಮುನಾ ಅಂಬಿಕಾ, ಕಾವ್ಯ ಸೇರಿದಂತೆ ಇನ್ನಿತರರು ಇದ್ದರು.